ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ
Team Udayavani, Jun 11, 2021, 12:34 PM IST
ಶಿವಮೊಗ್ಗ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನವರು ಟೀಕೆ ಮಾಡಲು ವಿಫಲರು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಅವರಿಗೆ ಬುದ್ದಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆಯ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ಕೊಟ್ಟಿರುವ ದೇಶ ಭಾರತ. ಕರ್ನಾಟಕದಲ್ಲೂ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಕಾಂಗ್ರೆಸ್ ನವರು ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದಿದ್ದರು. ಮೋದಿ ವ್ಯಾಕ್ಸಿನ್, ಬಿಜೆಪಿ ವ್ಯಾಕ್ಸಿನ್ ಎಂದು ಟೀಕಿಸಿದ್ದರು. ಆದರೆ ಅದೇ ವ್ಯಾಕ್ಸಿನ್ ಗೆ ಈಗ ಕಾಂಗ್ರೆಸ್ ನವರು ಕ್ಯೂನಲ್ಲಿ ನಿಂತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆ; ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ಅಗತ್ಯವಿದೆ;ಮೊಯ್ಲಿ
ಲಸಿಕೆ ಪಡೆಯಲು ಜನರ ತಯಾರಿದ್ದರೂ ದಿಕ್ಕು ತಪ್ಪಿಸಿದ್ದು ಈ ಕಾಂಗ್ರೆಸ್ ಪಕ್ಷದವರು. ಈಗ ನರೇಂದ್ರ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಆಪಾದಿಸುತ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರಿಗೆ ಬುದ್ದಿ ಇಲ್ಲ ಎಂದು ಹೇಳುತ್ತಿದ್ದೇನೆ ಎಂದರು.
ಪ್ರತಿ ವ್ಯಕ್ತಿಗೆ ಉಚಿತ ಲಸಿಕೆ ಕೊಡುತ್ತೇನೆ ಅಂದ ಮೊದಲ ಪ್ರಧಾನಿ ಮೋದಿ. ಒಂದು ಕಡೆ ಉಚಿತ ವ್ಯಾಕ್ಸಿನ್, ಮತ್ತೊಂದೆಡೆ ಉಚಿತ ರೇಷನ್. ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿ ಆಗಿರುವುದು ಪುಣ್ಯ. ಸರಿಯಾಗಿ ಟೀಕೆ ಮಾಡುವುದರಲ್ಲೂ ಕಾಂಗ್ರೆಸ್ ನವರು ವಿಫಲರಾಗಿದ್ದಾರೆ. ಇದೆ ಕಾರಣಕ್ಕೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನಾಶವಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.