ಮಲೆನಾಡಿನಲ್ಲಿ ಮತ್ತೆ ಕುಸಿಯುತ್ತಿದೆ ಗುಡ್ಡ: ಮೂಲ ಸ್ವರೂಪವನ್ನೇ ಕಳೆದುಕೊಂಡ ಗದ್ದೆ-ತೋಟ
Team Udayavani, Jul 10, 2022, 9:49 AM IST
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಗುಡ್ಡ ಕುಸಿದ ಪರಿಣಾಮ ಗದ್ದೆ-ತೋಟಗಳ ಸ್ವರೂಪವೇ ಬದಲಾಗಿದೆ.
ಸಾಗರ ತಾಲೂಕಿನ ಸಂಕಣ್ಣ ಶಾನುಭೋಗ್ ಗ್ರಾ.ಪಂ ವ್ಯಾಪ್ತಿಯ ಅಡಗಳಲೆ ಗ್ರಾಮದ ಸುಧಾ ಸಂತೋಷ್, ಜಿನದತ್ತ, ಮಂಜಮ್ಮ ಅವರ ತೋಟ, ಗದ್ದೆಯ ಬಳಿ ಗುಡ್ಡ ಕುಸಿದಿದೆ. ಇದರಿಂದ 10ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಹಾಗೂ ಗದ್ದೆ ಸಂಪೂರ್ಣ ಮಣ್ಣುಪಾಲಾಗಿದೆ.
ಇದನ್ನೂ ಓದಿ:ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಭೂಕುಸಿತ: ಸಂಚಾರ ಬಂದ್
ಕೊಚ್ಚಿಕೊಂಡು ಹೋದ ಗುಡ್ಡದ ಮಣ್ಣು ಗದ್ದೆ, ತೋಟದಲ್ಲಿ ನಿಂತಿದೆ. ಅದರ ಮೇಲಿನಿಂದ ಹಳ್ಳದ ನೀರು ಹಳ್ಳದ ನೀರು ಹರಿದು ಹೋಗುತ್ತಿದೆ. ಗುಡ್ಡ ಕುಸಿತದಿಂದ ಕೃಷಿ ಭೂಮಿ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.
ಕಳೆದ ಮೂರು ವರ್ಷದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಗುಡ್ಡ ಕುಸಿತ ಪ್ರಕರಣಗಳು ನಡೆಯುತ್ತಲೇ ಇದೆ. ಈ ಹಿಂದೆ ತೀರ್ಥಹಳ್ಳಿಯ ಹೆಗಲತ್ತಿ, ಸಾಗರದ ಆರೋಡಿ ಬಳಿ ಸಹ ಗುಡ್ಡ ಕುಸಿತ ಉಂಟಾಗಿತ್ತು. ಸದ್ಯ ಮಳೆ ಮುಂದುವರಿದರೇ ಜಿಲ್ಲೆಯಲ್ಲಿ ಮತ್ತಷ್ಟು ಅವಘಡಗಳು ನಡೆಯುವ ಸಾಧ್ಯತೆಯಿದೆ.