ನದಿಗೆ ಹಾರಿದ ತಾಯಿ ಪತ್ತೆಗೆ 3 ದಿನದಿಂದ ತೆಪ್ಪದಲ್ಲಿ ಹುಡುಕಾಟ!
Team Udayavani, Jul 17, 2018, 7:00 AM IST
ಶಿವಮೊಗ್ಗ: ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತನ್ನ ತಾಯಿಯನ್ನು ಮಗ 3 ದಿನದಿಂದ ಹುಡುಕುತ್ತಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತರೊಂದಿಗೆ ತುಂಬಿ ಹರಿಯುತ್ತಿರುವ ತುಂಗೆಯಲ್ಲಿ ತೆಪ್ಪದಲ್ಲಿ ಸಾಗುತ್ತ ತಾಯಿಯಾಗಿ ಹುಡುಕಾಟ ನಡೆಸಿದ್ದಾನೆ. ಪತಿಯ ಸಾವಿನಿಂದ ಮನನೊಂದ ಸಾವಿತ್ರಮ್ಮ ಶನಿವಾರ (53) ತುಂಗಾ ನದಿಗೆ ಹಾರಿದ್ದಾರೆ.
ಶನಿವಾರ ಸಂಜೆ ನಗರದ ಕೋರ್ಪಲಯ್ಯ ಮಂಟಪದ ಬಳಿ ಬಂದ ಅವರು, ಮಗ ಕಿರಣ್ಗೆ ಕರೆ ಮಾಡಿ “ನೀವೆಲ್ಲರೂ ಚೆನ್ನಾಗಿ ಬಾಳಿ’ ಎಂದು ಹಾರೈಸಿದ್ದಾರೆ.
ನಂತರ ನದಿಗೆ ಹಾರಿದ್ದಾರೆ. ತಾಯಿ ಮನೆಗೆ ಬಾರದಿದ್ದಾಗ ಕಿರಣ್ ಅನುಮಾನಗೊಂಡು ಹುಡುಕಾಟ ಆರಂಭಿಸಿದ್ದಾರೆ. ತಾಯಿ ನದಿಗೆ ಹಾರಿರುವ ವಿಷಯ ತಿಳಿದು ತೆಪ್ಪದಲ್ಲಿ ಸಾಗುತ್ತ ತಾಯಿ ಪತ್ತೆಗೆ ಮುಂದಾಗಿದ್ದಾರೆ.
ತುಂಗೆಯಲ್ಲಿ ಶನಿವಾರ 60 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿತ್ತು. ಅಗ್ನಿಶಾಮಕ ದಳದವರು ಕೆಲಹೊತ್ತು ಕಾರ್ಯಾಚರಣೆ ನಡೆಸಿ ವಾಪಸ್ ತೆರಳಿದ್ದರು. ಇದರಿಂದ ತೃಪ್ತನಾಗದ ಕಿರಣ್ ತನ್ನ 30 ಜನ ಸ್ನೇಹಿತರ ಸಹಾಯದೊಂದಿಗೆ ಶನಿವಾರ ಸಂಜೆಯಿಂದಲೇ ಹುಡುಕಾಟ ಆರಂಭಿಸಿ ಕತ್ತಲಾಗುವವರೆಗೂ ತೆಪ್ಪದ ಮೂಲಕ ನದಿಯಲ್ಲಿ ಸಂಚರಿಸಿದ್ದಾರೆ. ಮತ್ತೆ ಭಾನುವಾರ ಸೋಮವಾರವೂ ಹುಡುಕಿದ್ದಾರೆ. ಆದರೆ ಎಲ್ಲಿಯೂ ಸಾವಿತ್ರಮ್ಮ ಪತ್ತೆಯಾಗಿಲ್ಲ. “ಚೀಲೂರುವರೆಗೆ ಹುಡುಕಿದ್ದೇವೆ. ಈವರೆಗೆ ನನ್ನ ತಾಯಿ ಸಿಕ್ಕಲಿಲ್ಲ. ಯಾರೂ ನಮ್ಮ ಸಹಾಯಕ್ಕೆ ಮುಂದಾಗಲಿಲ್ಲ. ಹಾಗಾಗಿ ನಾವೇ ಹುಡುಕುತ್ತಿದ್ದೇವೆ’ ಎಂದು ಕಿರಣ್ ಉದಯವಾಣಿಗೆ ತಿಳಿಸಿದರು.