ದೇಶದಲ್ಲಿ ರೈತರ ಪರಿಸ್ಥಿತಿ ಶೋಚನೀಯ
Team Udayavani, Aug 19, 2017, 3:09 PM IST
ಶಿವಮೊಗ್ಗ: ಹೆಚ್ಚು ಹಣ ಗಳಿಸಬೇಕು ಎಂಬ ಒಂದೇ ಉದ್ದೇಶದಿಂದ ದೇಶಿ ಕೃಷಿಯ ವೈವಿಧ್ಯತೆ ಮರೆತು ರಾಸಾಯನಿಕ ಕೃಷಿಯತ್ತ ಹೋದ ರೈತ ಸಮುದಾಯ ಇಂದು ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ ಎಂದು ಬಸವಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಹೇಳಿದರು.
ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಸಹಜ ಸಮೃದ್ಧಿ, ಆಗ್ಯಾìನಿಕ್ ಶಿವಮೊಗ್ಗ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೇಶಿ ಅಕ್ಕಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುರಾಸೆಗೆ ಬಿದ್ದ ರೈತ ನೆಲದ ಹಸಿವನ್ನು ಗಮನಿಸಲಿಲ್ಲ. ಬೇಡಿಕೆಯನ್ನು ಮನ್ನಿಸಲಿಲ್ಲ.
ಬದಲಾಗಿ ಈ ನೆಲಕ್ಕೆ ಯಾವ ಬೆಳೆ ಬೇಕಾಗಿತ್ತೋ ಅದನ್ನು ಬೆಳೆಯದೆ ಬೇರೆ ಬೆಳೆಯನ್ನು ತಂದು ಬೆಳೆದ. ಇದಕ್ಕೆ ರಾಸಾಯನಿಕ ಗೊಬ್ಬರ, ಕೀಟ ನಾಶಕವನ್ನು ಯಥೇತ್ಛವಾಗಿ ಬಳಕೆ ಮಾಡಿದ. ಹೀಗಾಗಿ ಇಂದು ತಿನ್ನಬಾರದ ಆಹಾರ ತಿನ್ನುವಂತಾಗಿದೆ. ಇದರಿಂದ ಬರ ಬಾರದ ಕಾಯಿಲೆಗಳು ಬರತೊಡಗಿದೆ ಎಂದರು.
ಕೃಷಿಯೇ ಪ್ರಧಾನವಾಗಿರುವ ಭಾರತದಲ್ಲಿ ಸರ್ಕಾರಗಳು ಕೂಡ ರೈತರ ಬಗ್ಗೆ ಗಂಭೀರವಾಗಿ ಯೋಚನೆಯನ್ನೇ ಮಾಡುತ್ತಿಲ್ಲ. ಬದಲಾಗಿ ಕೃಷಿ ಕ್ಷೇತ್ರವನ್ನು ಕೊನೆಯ ಆದ್ಯತೆಯನ್ನಾಗಿಸಿವೆ. ದೇಶದಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಯುವ ಜನತೆ ಕ್ರಿಕೆಟ್ ಬಗ್ಗೆ ಯೋಚಿಸುತ್ತಾರೆಯೇ ವಿನಃ ರೈತರ ಕಷ್ಟದ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಇದು ದೇಶದ ದುರಂತ ಎಂದು ಹೇಳಿದರು.
ಕೃಷಿಯಲ್ಲಿ ರಾಸಾಯನಿಕ ಉತ್ಪನ್ನಗಳ ಬಳಕೆಯಿಂದಾಗಿ ಮಣ್ಣು ಸತ್ವ ಇಲ್ಲದಂತಾಗಿದೆ. ಮತ್ತೆ ಮರಳಿ ದೇಶೀಯ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ನಮ್ಮ ನೆಲದ ಸತ್ವ ತಿಳಿದು ಬೆಳೆಗಳನ್ನು ಬೆಳೆಯಬೇಕು. ಇಲ್ಲವಾದಲ್ಲಿ ಇನ್ನು ಹೆಚ್ಚಿನ ಅನಾಹುತಗಳು ಸಂಭವಿಸುತ್ತವೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಹಿಂದೆ ಒಕ್ಕಲುತನ ಎಂದರೆ ಒಂದು ಸಂಸ್ಕೃತಿಯಾಗಿತ್ತು. ರೈತರು ನೆಮ್ಮದಿಯಿಂದ, ಸಂತೋಷದಿಂದ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಲಾಭ-ನಷ್ಟದ ಪ್ರಶ್ನೆಯೂ ಇರಲಿಲ್ಲ. ಶ್ರೀಮಂತರಾಗಬೇಕು ಎಂಬ ಭಾವನೆಯೂ ಇರಲಿಲ್ಲ. ಆದರೆ ಇತ್ತೀಚೆಗೆ ರೈತ ಸಮುದಾಯ ಹೆಚ್ಚಿನ ಇಳುವರಿ ಪಡೆಯುವುದಕ್ಕಾಗಿ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳನ್ನು ಮಣ್ಣಿಗೆ ಉಣಬಡಿಸುತ್ತಿದ್ದಾರೆ ಎಂದರು.
ಎಸ್.ಎಸ್. ಸತೀಶ್, ಎನ್.ಆರ್. ಶೆಟ್ಟಿ, ದುಮ್ಮಳ್ಳಿ ಶಿವಮ್ಮ, ಡಾ| ಎನ್.ಕೆ. ನಾಯಕ್, ನಂದೀಶ್, ಗಿರಿಜಮ್ಮ ಮತ್ತಿತರರು ಉಪಸ್ಥಿತರಿದ್ದರು. ದೀಪಾ ಕಾಮತ್ ಪ್ರಾರ್ಥಿಸಿದರು. ಈಶ್ವರ್ ತೀರ್ಥ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿದರು. ಮೇಳದಲ್ಲಿ ವಿವಿಧ ತಳಿಯ ಭತ್ತ, ಅಕ್ಕಿ ಪ್ರದರ್ಶನ ಹಾಗೂ ಮಾರಾಟಕ್ಕೆ ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ