ಯಡಿಯೂರಪ್ಪ ಡೋಂಗಿ ರಾಜಕಾರಣಿ: ಸಿದ್ದರಾಮಯ್ಯ
Team Udayavani, Oct 26, 2018, 6:15 AM IST
ಭದ್ರಾವತಿ/ಕುಂದಾಪುರ: 2009ರ ಲೋಕ ಸಭಾ ಚುನಾವಣೆಯಲ್ಲಿ ಬಂಗಾರಪ್ಪನವರ ಸೋಲಿಗೆ ಕಾರಣನಾದ ರಾಘವೇಂದ್ರನನ್ನು ಈ ಬಾರಿ ಲೋಕಸಭಾ ಉಪಚುನಾವಣೆಯಲ್ಲಿ ಸೋಲಿಸಿ ಮಧು ಬಂಗಾರಪ್ಪ ಅವರನ್ನು ಜಯಶಾಲಿಯಾಗಿ ಮಾಡಿದರೆ ದಿವಂಗತ ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ನೀಡಿದಂತಾ ಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭದ್ರಾವತಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಯಡಿಯೂರಪ್ಪ ಸಂಸದರಾಗಿದ್ದಾಗ, ಮುಖ್ಯ ಮಂತ್ರಿ ಯಾಗಿದ್ದಾಗ ಶಿವಮೊಗ್ಗ ಜಿಲ್ಲೆಗೆ,ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಏನನ್ನೂ ಮಾಡಲಿಲ್ಲ. ಇಂತಹ ಯಡಿಯೂರಪ್ಪನನ್ನು ಭದ್ರಾವತಿಯೊಳಗೆ ಸೇರಿಸಲೇಬಾರದು.
ಈ ಚುನಾವಣೆ ಯಾರಿಗೂ ಬೇಕಿರಲಿಲ್ಲ. ಜನತೆ ಒಮ್ಮೆ ಸಂಸದನಾಗಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡಿದಾಗ ಯಡಿಯೂರಪ್ಪ 5 ವರ್ಷ ಸಂಸದರಾಗಿ ಸೇವೆ ಸಲ್ಲಿಸಬೇಕಿತ್ತು. ಆದರೆ, ಜನತೆಗೆ ಹೇಳದೆ ಕೇಳದೆ ರಾಜೀನಾಮೆ ನೀಡಿ ಈಗ ಉಪಚುನಾವಣೆಗೆ ಕಾರಣರಾಗಿದ್ದಾರೆ. ಅವರೊಬ್ಬ ಡೋಂಗಿ ರಾಜಕಾರಣಿ ಎಂದು ದೂರಿದರು. ಇದಕ್ಕೂ ಮೊದಲು ಕುಂದಾಪುರದಲ್ಲಿ ಮಾತನಾಡಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಉಪಚುನಾವಣೆ ಬಳಿಕ ಸರಕಾರ ಉರುಳುತ್ತದೆ ಎನ್ನುವುದು ಶೋಭಾ ಕರಂದ್ಲಾಜೆ, ಬಿಎಸ್ವೈ ಅವರ ಭ್ರಮೆ ಎಂದು ವ್ಯಂಗ್ಯವಾಡಿದರು.