Tumkur: ಪ್ರತ್ಯೇಕ ರಾಷ್ಟ್ರ ಬೇಡಿಕೆ ಡಿ.ಕೆ.ಸುರೇಶ್ ಹೇಳಿಕೆಗೆ ಬಿ.ಸುರೇಶ್ಗೌಡ ಕಿಡಿ
Team Udayavani, Feb 2, 2024, 2:39 PM IST
ತುಮಕೂರು: ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಬೇಡಿಕೆ ವಿಚಾರಕ್ಕೆ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿಕಾರಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ಬರ್ತಿದೆ, ಕಾಂಗ್ರೆಸ್ ನವರು ಗಿಮಿಕ್ ಮಾಡ್ತಿದ್ದಾರೆ ಎಂದರು.
ಕಾಂಗ್ರೆಸ್ ನವರು ಕಳೆದ ಬಾರಿ 48-50 ಸ್ಥಾನ ಪಡೆದಿದ್ದರು. ಈ ಬಾರಿ 50 ಸ್ಥಾನನೂ ಗೆಲ್ಲಲ್ಲ. ಇಂಡಿಯಾ ಒಕ್ಕೂಟ ಚಿಂದಿ ಚಿತ್ರನ್ನಾ ಆಗಿದೆ ಎಂದರು.
ನಿತಿಶ್ ಕುಮಾರ್, ಮಮತಾ ಬ್ಯಾನರ್ಜಿಯವರು ಕೈ ಬಿಟ್ಟಿದ್ದಾರೆ. ಹಾಗಾಗಿ ಇವರು ಹತಾಶರಾಗಿದ್ದಾರೆ. ಕಳೆದ ಬಾರಿ ಕರ್ನಾಟಕದಲ್ಲಿ ಡಿಕೆ ಸುರೇಶ್ ಒಬ್ಬರು ಗೆದ್ದಿದ್ದರು. ಈ ಬಾರಿ ಅವರೂ ಗೆಲ್ಲಲ್ಲ… ಹೀಗಾಗಿ ಅವರು ಹತಾಶರಾಗಿ ದೇಶ ವಿಭಜನೆ ಮಾಡುವ ಕೆಲಸ ಮಾಡುತಿದ್ದಾರೆ ಎಂದು ಹೇಳಿದರು.
ಹಿಂದೆ ನೆಹರು ದೇಶ ವಿಭಜನೆ ಮಾಡಿದ್ದರು. ಈಗ ಇವರು ವಿಭಜನೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನವರು ಈ ದೇಶವನ್ನು ನಾಶ ಮಾಡಿದ್ದವರು. ಅದಕ್ಕೇ ದೇಶದ ಜನ ಅವರನ್ನು ಮೂಲೆಯಲ್ಲಿ ಕೂರಿಸಿದ್ದಾರೆ ಎಂದು ಹೇಳಿದರು.
ಇಷ್ಟೆಲ್ಲ ಆದರೂ ಇನ್ನೂ ಅವರಿಗೆ ಬುದ್ದಿ ಬಂದಿಲ್ಲ. ಅವರ ನಡವಳಿಕೆ ಸರಿಯಾಗಿದ್ದರೆ, ದೇಶದ ಬಗ್ಗೆ ಅಭಿಮಾನ ಇದ್ದಿದ್ದರೆ, ಈ ರೀತಿಯ ಮಾತನಾಡುತ್ತಿರಲಿಲ್ಲ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿ ದೇಶದ ಜನ ಉತ್ತರ ಕೊಡುತ್ತಾರೆ. ರಾಹುಲ್ ಗಾಂಧಿ ಭಾರತ ಜೋಡಿಸ್ತಾ ಇಲ್ಲ, ಕತ್ತರಿ ತಗೊಂಡು ಕತ್ತರಿಸ್ತಾ ಇದ್ದಾರೆ ಎಂದು ಕಿಚಾಯಿಸಿದರು.
10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಭಾಷಣ ಬಿಗಿದರು. ಈಗ ಮೋದಿ ಕೊಟ್ಟಿರುವ ಅಕ್ಕಿನೇ ತಮ್ಮದು ಎಂದು ಬಿಂಬಿಸುತ್ತಿದ್ದಾರೆ. ತುಮಕೂರಿಗೆ ಬಂದು ಚುನಾವಣೆ ಸ್ಟಂಟ್ ಮಾಡಿ ಹೋಗಿದ್ದಾರೆ. ಬಿಜೆಪಿ ಕೊಟ್ಟ ಅನುದಾನದ ಕಾಮಗಾರಿ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಹೋಗಿದ್ದಾರೆ. 618 ಕೋಟಿ ರೂ. ಕಾಮಗಾರಿ ಉದ್ಘಾಟನೆ ಶಂಕು ಸ್ಥಾಪನೆ ಮಾಡಿದ್ದು, ಎಲ್ಲವೂ ಬಿಜೆಪಿ ಸರ್ಕಾರದ್ದು ಎಂದರು.
ಕಾಂಗ್ರೆಸ್ ಸರ್ಕಾರ ಒಂದು ರೂಪಾಯಿನೂ ಕೊಟ್ಟಿಲ್ಲ. ಆದರೂ ತುಮಕೂರಿನಲ್ಲಿ ಬಂದು ಸಿಎಂ ಸಿದ್ದರಾಮಯ್ಯ ಮಜಾ ಉಡಾಯಿಸಿ ಹೋಗಿದ್ದಾರೆ ಎಂದು ಹರಿಹಾಯ್ದರು.