ಎತ್ತಿನಹೊಳೆ: ನಿಗದಿತ ಅವಧಿಯಲ್ಲಿ ಪೂರ್ಣ
Team Udayavani, May 14, 2020, 5:20 AM IST
ತುಮಕೂರು/ಚೇಳೂರು: ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಎತ್ತಿನ ಹೊಳೆ ಯೋಜನೆಯನ್ನು ಅಧಿಕಾರಿ ಗಳು ನೆಪ ಹೇಳದೇ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ತೊಳಚನಹಳ್ಳಿ ಹತ್ತಿರ ನಿರ್ಮಿಸುತ್ತಿರುವ ಎತ್ತಿನಹೊಳೆ ಯೋಜನೆಯ ಮೇಲ್ಗಾಲುವೆಯ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ ಮಾತನಾಡಿ, ಎತ್ತಿನಹೊಳೆ ಗುರುತ್ವಾ ಕಾಲು ವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣ ವಾಗುತ್ತಿರುವ ಬೃಹತ್ ಮೇಲ್ಗಾಲುವೆಯಾಗಿದ್ದು, ಕಾಮಗಾರಿ ಚುರುಕುಗೊಳಿಸಿ ಕಾಲಾ ವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕಾಮಗಾರಿ ವಿಳಂಬಿಸುವಂತಿಲ್ಲ: ಭೂ ಮಾಲೀಕರಿಗೆ ಪರಿಹಾರ ವಿತರಣೆಗಾಗಿ 100 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಕಾರ ಣಕ್ಕೂ ಜಲಸಂಪನ್ಮೂಲ ಇಲಾಖೆ ಕಾಮಗಾರಿ ವಿಳಂಬಗೊಳಿಸುವಂತಿಲ್ಲ ಎಂದು ಹೇಳಿದರು.
ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣ: ಸಕಲೇಶಪುರ ಬಳಿ ಯೋಜನೆ ಯಲ್ಲಿದ್ದ ಲೋಪದೋಷ ಸರಿಪಡಿಸಲಾಗಿದ್ದು, 2021ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಮಹತ್ವಾಕಾಂಕ್ಷೆ ಯೋಜನೆ: ಈ ಯೋಜನೆ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲ ಭಾಗಗಳಿಗೆ ಕುಡಿಯುವ ನೀರನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ತಿಳಿಸಿದರು.
ಸಂಸದ ಜಿ.ಎಸ್. ಬಸವರಾಜು, ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಜಲಸಂಪನ್ಮೂಲ ಇಲಾಖೆ ಕಾರ್ಯ ದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ, ಎತ್ತಿನ ಹೊಳೆ ಮುಖ್ಯ ಎಂಜಿನಿಯರ್ ಮಾಧವ, ಸೂಪರಿ ಡೆಂಟ್ ಎಂಜಿನಿಯರ್ ಶಿವಕುಮಾರ್, ವಿಶೇಷಾಧಿಕಾರಿ ರುದ್ರಯ್ಯ, ಇಇ ರಘುನಂದನ್, ಎಇ ಸುರೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
ಅಧಿಕಾರಿಗಳು ಕೊರೊನಾ ದಿಂದ ಕೂಲಿ ಕಾರ್ಮಿಕರು ಇಲ್ಲ ಎಂದು ಕುಂಟು ನೆಪ ಹೇಳುವ ಆಗಿಲ್ಲ, ಯೋಜನೆ ಅನುಷ್ಠಾನಕ್ಕೆ ಅನುದಾನದ ಕೊರತೆ ಇಲ್ಲ, 2021ರ ಮಾರ್ಚ್ ಒಳಗೆ 37 ಕಿ.ಮೀ.ವರೆಗೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಕಟ್ಟು ನಿಟ್ಟಿನ ಆದೇಶ ನೀಡಿದ್ದೇನೆ. ಸಕಲೇಶ ಪುರದ ಬಳಿ ಅರಣ್ಯ ಭೂಸ್ವಾಧೀನದ ಕುರಿತು ಇದ್ದ ವಿವಾದ ಬಗೆ ಹರಿಸಲಾಗಿದೆ ಇನ್ನು ಎತ್ತಿನ ಹೊಳೆ ಕಾಮಗಾರಿ ವೇಗ ಪಡೆಯಲಿದೆ.
-ರಮೇಶ್ ಜಾರಕಿ ಹೊಳಿ, ಜಲ ಸಂಪನ್ಮೂಲ ಸಚಿವ
ನಾನು ಹಿಂದೆ ಮುಂದೆ ಹೇಳುವವನಲ್ಲ ಇದ್ದದನ್ನು ಇದ್ದಹಾಗೇ ಹೇಳುವವನು, ಈ ಹಿಂದಿನ ನೀರಾವರಿ ಸಚಿವರು ಬಂದು ಈ ಯೋಜನೆ ನೋಡಿಲ್ಲ. ಈಗ ಬಂದಿರುವ ಸಚಿವರಿಗೆ ಉತ್ತೇಜನ ನೀಡಬೇಕು.
-ಕೆ.ಎನ್.ರಾಜಣ್ಣ , ಮಾಜಿ ಶಾಸಕ