ಹನುಮನ ಆದರ್ಶ ಪಾಲಿಸಿ
Team Udayavani, Dec 10, 2019, 4:54 PM IST
ಮಧುಗಿರಿ: ರಾಮಾಯಣದಲ್ಲಿ ನಿಷ್ಠೆ ಹಾಗೂ ನಂಬಿಕೆಗೆ ಅರ್ಹವಾಗಿದ್ದ ಏಕೈಕ ದೇವರು ಹನುಮಂತ. ಇಂದು ಅಂತಹ ನಿಷ್ಠೆ ಯುವ ಜನತೆ ಹೊಂದಬೇಕಿದೆ ಎಂದು ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಕಲ್ಯಾಣಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ನಡೆಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಮಾತನಾಡಿದರು. ಇಂದು ಸಮಾಜದಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ನಂಬಿಕೆ ಮಾಯವಾಗಿದ್ದು, ಹನುಮಂತನ ಕಥೆ ಕೇಳಿ ತಿಳಿಯಬೇಕಿದೆ. ಇದರಿಂದ ಧರ್ಮದ ಉಳಿವು ಸಾಧ್ಯ. ಹಿರಿಯರು–ಹೆತ್ತವರು ಹಾಗೂ ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡಬೇಕಿದೆ. ಎಲ್ಲರೂ ಸತ್ಯ, ಪ್ರಾಮಾಣಿಕತೆ ಮೈಗೂಡಿಸಿ ಕೊಂಡು ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.
ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ದೇವರು ಇಲ್ಲದ ಸ್ಥಳವಿಲ್ಲ. ಹನುಮಂತ ದೇವರು ಕಲಿಯುಗ ದೈವವಾಗಿದ್ದು, ಪ್ರಾಮಾಣಿಕರನ್ನು ರಕ್ಷಿಸುತ್ತಾನೆ. ಅನೈತಿಕ ಕಾರ್ಯಗಳಿಂದ ದೂರವಿದ್ದು, ಸತ್ಕಾರ್ಯ ಮಾಡುತ್ತ ನೆಮ್ಮದಿ ಬದುಕು ನಡೆಸೋಣ ಎಂದರು.
ಈ ಸಂದರ್ಭ ಪುರಸಭೆ ಮಾಜಿ ಅಧ್ಯಕ್ಷ ಶಂಕರನಾರಾಯಣ ಶೆಟ್ಟಿ, ಪತಂಜಲಿ ಯೋಗ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ನರಸೇಗೌಡ, ಬಿಜೆಪಿ ಮಂಡಲಾಧ್ಯಕ್ಷ ರಮೇಶ್ರೆಡ್ಡಿ, ಮುಖಂಡ ಮೋಹನ್ರಾಜ್, ಟಿ.ಪಿ.ರಾಘವೇಂದ್ರ ಇತರರಿದ್ದರು.