ವಿರೋಧಿಗಳ ಟೀಕೆಗಳಿಗೆ ಅಭಿವೃದ್ಧಿಯಿಂದ ಉತ್ತರ
Team Udayavani, Dec 10, 2019, 5:02 PM IST
ತುಮಕೂರು: ಒಂದೂವರೆ ವರ್ಷದೊಳಗೆ ಗ್ರಾಮಾಂತರ ಕ್ಷೇತ್ರಕ್ಕೆ 300 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೆ ಸಾಕಷ್ಟು ಅನುದಾನ ಬರುತಿತ್ತು. ಆದರೆ ಯಾವುದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕ್ಷೇತ್ರಕ್ಕೆ ಹೇಗೆ ಅನುದಾನ ತರಬೇಕೆಂದು ನನಗೆ ಗೊತ್ತಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರೀಶಂಕರ್ ತಿಳಿಸಿದರು.
ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಬೆಳಗುಂಬ,ಹೆಗ್ಗೆರೆ, ಬೆಳ್ಳಾವಿ,ಗೂಳೂರು, ಊರ್ಡಿ ಗೆರೆ, ಹೆಬ್ಬೂರು, ಜಿಪಂ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಬಹುತೇಕ ಕೆರೆಗಳಿಗೆ ಹೇಮಾವತಿ ನೀರು ಹರಿಯುತ್ತಿದೆ. ಹಲವು ಕೆರೆಗಳು ಕೋಡಿ ಬಿದ್ದಿವೆ. ಇನ್ನೂ ಕೆಲ ಕೆರೆಗಳು ಕೋಡಿ ಬೀಳುವ ಹಂತದಲ್ಲಿವೆ. ಚುನಾವಣಾ ಸಂದರ್ಭ ಜನತೆಗೆ ನೀಡಿದ್ದ ಆಶ್ವಾಸನೆ ಉಳಿಸಿಕೊಂಡಿದ್ದೇನೆ. ವಿರೋಧಿಗಳ ಟೀಕೆಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ ಕೊಡುತ್ತೇನೆ ಎಂದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳಗುಂಬದಲ್ಲಿ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ, ಸ್ವಾಂದೇನಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಹಾಗೂ ಬಾಕ್ಸ್ ಚರಂಡಿ, ಬೀರನಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ, ಹುಚ್ಚಬಸವನಹಳ್ಳಿ ಗ್ರಾಮದಲ್ಲಿ ಚೆಕ್ಡ್ಯಾಂ, ಬಳ್ಳಾಪುರದಲ್ಲಿ ಸ್ಮಶಾನದ ಕಾಂಪೌಂಡ್, ಮಲ್ಲಸಂದ್ರದಲ್ಲಿ ಸ್ಮಶಾನ ಕಾಂಪೌಂಡ್, ಹಬ್ಬತ್ತನಹಳ್ಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಶಂಕುಸ್ಥಾಪನೆ, ಗಳಿಗೇನಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ, ಚಿಕ್ಕಸಾರಂಗಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಹುಚ್ಚಯ್ಯನಪಾಳ್ಯದಲ್ಲಿ ಸಿ.ಸಿ.ರಸ್ತೆ, ಕಿತ್ತಗಾನಹಳ್ಳಿ ಕಾಲೋನಿಯಲ್ಲಿ ಸಿ.ಸಿ. ರಸ್ತೆ, ಪಂಡಿತನಹಳ್ಳಿ ಹ್ಯಾಂಡ್ ಪೋಸ್ಟ್ ನಿಂದಚಿಕ್ಕಹಳ್ಳಿ ಹುಣಸನಹಳ್ಳಿ ಮಾರ್ಗವಾಗಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ, ಕೌತುಮಾರನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ, ಕೋಳಿಹಳ್ಳಿ ಗ್ರಾಮದಲ್ಲಿ ಚೆಕ್ ಡ್ಯಾಂ, ಸಿದ್ದಾಪುರ ಗ್ರಾಮದಲ್ಲಿ ಸಿ.ಸಿ. ರಸ್ತೆ, ಬಳಗೆರೆ ಗ್ರಾಮದ ಕಾಲೋನಿಯಲ್ಲಿ ಸಿ.ಸಿ ರಸ್ತೆ, ನರಸಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಜಿಲ್ಲಾ ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ವೈ ಟಿ ನಾಗರಾಜು, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ತಾಲೂಕು ಯುವ ಘಟಕದ ಅಧ್ಯಕ್ಷ ಗೂಳೂರು ಪುಟ್ಟರಾಜು, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸುವರ್ಣಗಿರಿಕುಮಾರ್, ಜೆಡಿಎಸ್ ಮುಖಂಡರಾದ ಹರಳೂರು ಸುರೇಶ್, ಪುಷ್ಪಕರೇರಂಗಪ್ಪ, ಗ್ರಾಮಪಂಚಾಯ್ತಿ ಸದಸ್ಯೆ ಶಾಂತ ಸುರೇಶ್ ಇದ್ದರು.