ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಮೂಡಲಿ: ವೀಣಾ
Team Udayavani, Aug 28, 2021, 5:44 PM IST
ತಿಪಟೂರು: ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವರಾಶಿಗಳಿಗೂ ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧವಿದೆ. ನಿಸರ್ಗ ದತ್ತವಾಗಿರುವ ಗುಡ್ಡ, ಬೆಟ್ಟ, ಮರ-ಗಿಡಗಳನ್ನು ಸಂರಕ್ಷಿಸುವುದರ ಜೊತೆಗೆ ಆಯಕಟ್ಟಿನ ತಾಣಗಳಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರದ ಪ್ರಜ್ಞೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕಾಗಿದೆ ಎಂದು ಸ್ಪಂದನಾ ಸಂಸ್ಥೆ ಅಧ್ಯಕ್ಷೆ ವೀಣಾ ಬಿ.ಸಿ ನಾಗೇಶ್ ತಿಳಿಸಿದರು.
ತಾಲೂಕಿನ ನಾಗತಿಹಳ್ಳಿ ಮತ್ತು ರಾಮನಹಳ್ಳಿ ಅಂಗನವಾಡಿ ಕೇಂದ್ರ, ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೋಷಣ್ ಅಭಿಯಾನ ಯೋಜನೆ ಹಾಗೂ ಸ್ಪಂದನ ಸಂಸ್ಥೆಯ ಸಹಯೋಗದಲ್ಲಿ ಹಣ್ಣಿನ ಗಿಡಗಳು ಹಾಗೂ ಔಷಧ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪ್ರತಿಯೊಬ್ಬ ಪ್ರಜೆ ಪ್ರತಿವರ್ಷ ಒಂದೊಂದು ಗಿಡ ನೆಟ್ಟು ಪೋಷಿಸಿ ಬೆಳೆಸುವ ಮೂಲಕ ಮುಂದಿನ
ಪೀಳಿಗೆಗೆ ಕೊಡುಗೆಯಾಗಿ ನೀಡಿದಲ್ಲಿ ಮಾತ್ರ ಸಂಪದ್ಭರಿತ ಭಾರತವನ್ನು ನೋಡಲು ಸಾಧ್ಯ. ಗಿಡಗಳನ್ನು ನೆಟ್ಟು ಬೆಳೆಸುವ ಹವ್ಯಾಸವನ್ನು ಮಕ್ಕಳಲ್ಲಿ ರೂಢಿಸುವುದು ಪೋಷಕರ ಕರ್ತವ್ಯ ಆಗಬೇಕು ಎಂದರು.
ಇಲಾಖೆ ಮೇಲ್ವಿಚಾರಕಿ ಬಿ.ಎನ್. ಪ್ರೇಮಾ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಜನರು ಪ್ರೇರಣೆಗೊಂಡು ಗಿಡ ನೆಟ್ಟು ಬೆಳೆಸುವ ಹವ್ಯಾಸವನ್ನು ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ. ಕಾರ್ಯಕ್ರಮಗಳು ಪ್ರತಿನಿತ್ಯ ನಡೆಸಿಕೊಂಡು ಹೋಗುವ ಮೂಲಕ ಜನರಲ್ಲಿ
ಪರಿಸರದ ಬಗ್ಗೆ ಕಾಳಜಿ ಮೂಡುವುದರಿಂದ ಸಮೃದ್ಧ ಭಾರತದ ನಿರ್ಮಾಣದಕನಸು ನನಸಾಗಲಿದೆ ಎಂದರು.
ಇದನ್ನೂ ಓದಿ:ಪ್ರಾಮಾಣಿಕ ಕಾರ್ಯದಿಂದ ಪೊಲೀಸ್ ವರ್ಚಸ್ಸು ವೃದ್ಧಿಸುವುದು: ಗೃಹ ಸಚಿವ ಆರಗ ಜ್ಞಾನೇಂದ್ರ
ಒಂದಾಗಿ ಕಾರ್ಯನಿರ್ವಹಿಸಿ:ಪೋಷಣ್ ಅಭಿಯಾನ ಯೋಜನೆ ಸಂತೋಷ್ ಕುಮಾರ್ ಮಾತನಾಡಿ, ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ಪ್ರತಿ ಹನಿಯೂ ಒಂದಾಗಿ ಹಳ್ಳ ಹರಿಯುವಂತೆ ಇಂತಹ ಹಲವಾರು ಕಾರ್ಯಕ್ರಮ ಸಮೃದ್ಧವಾಗಿ ಜರುಗಿ ಮುಂದಿನ ದಿನಗಳಲ್ಲಿ ಸಂಪದ್ಭರಿತ ಸಸ್ಯ ರಾಶಿ ಮುಂದಿನ ಪೀಳಿಗೆಗೆ ದೊರಕುವಲ್ಲಿ ಸಂಶಯವಿಲ್ಲ. ಇಂತಹ ಪ್ರಯತ್ನದಲ್ಲಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸೀತಾಫಲ,ಜಂಬುನೇರಳೆ, ಸೂರ್ಯನಾಮ ಚರ್ರಿ, ದಾಳಿಂಬೆ, ಸೀಬೆ, ಎಳ್ಳಿ, ನಿಂಬೆ, ಕರಿಬೇವು,ಪಪ್ಪಾಯಿ, ನುಗ್ಗೆ, ಬೆಟ್ಟದ ನೆಲ್ಲಿ ಮತ್ತು ಕಿರುನೆಲ್ಲಿ, ಸಂಪಿಗೆ, ಗಸಗಸೆ, ಹಲಸು, ಮುಂತಾದ ಹಣ್ಣು ಹಾಗೂ ಔಷಧ ಸಸಿ ನೆಡಲಾಯಿತು. ಸ್ತ್ರೀಶಕ್ತಿ ಸಂಘಗಳ ಮಹಿಳೆಯರು, ಗ್ರಾಮಸ್ಥರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.