ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ
Team Udayavani, Oct 25, 2019, 4:23 PM IST
ಕುಣಿಗಲ್: ಪದವೀಧರರು ಮತದಾನದ ಹಕ್ಕು ಚಲಾಯಿಸಲು, ಅಗತ್ಯ ದಾಖಲೆ ಗಳೊಂದಿಗೆ ಹೆಸರು ಮತದಾರರ ಮಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ರಾಜ್ಯ ಆಡಿಟರ್ ಅಸೋಯೇಷನ್ ರಾಜ್ಯಾಧ್ಯಕ್ಷ ಎಸ್. ನಂಜುಂಡ ಪ್ರಸಾದ್ ತಿಳಿಸಿದರು.
ರಾಜ್ಯದಲ್ಲಿ ಮುಂಬರುವ ಪದವೀಧರರಕ್ಷೇತ್ರದ ಚುನಾವಣೆಯಲ್ಲಿ ಹಕ್ಕುಚಲಾಯಿಸುವ ಮೂಲಕ ವಿವಿಧ ಬೇಡಿಕೆ ಆಗ್ರಹ ಹಾಗೂ ಸರ್ಕಾರದಿಂದ ಬರುವ ಸೌಲಭ್ಯ ಪಡೆಯುವ ದೃಷ್ಟಿಯಿಂದ ನ.6ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ರಾಜ್ಯದಲ್ಲಿ ಪದವೀಧರರ ಸಂಖ್ಯೆ ಹೆಚ್ಚಾಗಿದ್ದರೂ ಪ್ರಚಾರದ ಕೊರತೆ ಹಾಗೂ ಪದವೀಧರರಲ್ಲಿರುವ ನಿರಾಸಕ್ತಿಯಿಂದ ನೋಂದಣಿಯಾಗದಿರುವುದು ವಿಪರ್ಯಾಸ. ನೋಂದಣಿ ಮಾಡಿಸಿಕೊಂಡವರೂ ಪ್ರತಿ ಬಾರಿ ಅಂದರೆ 6 ವರ್ಷಕ್ಕೊಮ್ಮೆ ನೋಂದಣಿ ಮಾಡಿಸಿ ಕೊಳ್ಳಲೇಬೇಕು. ಪದವಿಗಳಿಸಿದ ವೈದ್ಯರು, ಎಂಜಿನಿಯರ್ಗಳು, ವಕೀಲರು, ಡಿಪ್ಲೋಮಾ ಮಾಡಿದವರು, ಶಿಕ್ಷಕರು ಒಟ್ಟಾರೆ ಮೂರು ವರ್ಷ ಪದವಿ ಮಾಡಿದವರು ಹಕ್ಕು ಚಲಾಯಿಸಬಹುದು ಎಂದು ಹೇಳಿದರು.
ಅರ್ಜಿ ಪಡೆದು ತಹಸ್ತೀಲ್ದಾರ್ ಕಚೇರಿಯಲ್ಲಿ ಸಂಪರ್ಕಿಸುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಕಳೆದ ಬಾರಿ ಚುನಾವಣೆಯಲ್ಲಿ ಐದು ಜಿಲ್ಲೆಯಲ್ಲಿ 94 ಸಾವಿರ ಪದವೀಧರರ ನೋಂದಣಿಯಾಗಿತ್ತು. ಚುನಾವಣೆಯಲ್ಲಿ ಮತ ಹಾಕಿದವರು ಕೇವಲ 54 ಸಾವಿರ ಪದವೀಧರರು. ಚುನಾಯಿತ ಅಭ್ಯರ್ಥಿಳು ಇದಕ್ಕೆ ಕಾರಣ. ಉತ್ತಮ ಯೋಜನೆ ರೂಪಿಸದೆ ಗೆದ್ದು ಸ್ವಾರ್ಥಿಗಳಾಗುತ್ತಿದ್ದಾರೆ ಎಂದು ಟೀಕಿಸಿದರು.
ನೋಂದಣಿ ಮಾಡಿಸಲು 3 ವರ್ಷ ಪೂರೈಸಿದ ನಂತರ ಅಂಕಪಟ್ಟಿ ಅಥವಾ ಕಾನ್ವಕೇಷನ್, ಆಧಾರ್ಕಾರ್ಡ್ ಫೋಟೋ ನೀಡಿ ಆಯಾಯ ತಾಲೂಕು ಮಟ್ಟದ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಪುರಸಭೆ ಸದಸ್ಯ ರಂಗಸ್ವಾಮಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ತಾಪಂ ಮಾಜಿ ಸದಸ್ಯ ಎಸ್.ಆರ್. ಚಿಕ್ಕಣ್ಣ, ಪ್ರಮುಖರಾದ ಕ್ರಿಕೆಟ್ ಅಸೋಯೇಷನ್ ರಂಗನಾಥ್, ವ್ಯಾಪಾರಿ ರಾಮಚಂದ್ರ ಇತರರಿದ್ದರು.