ನೆಹರು, ಇಂದಿರಾ ಕೈಯಲ್ಲೇ RSS ನಿಷೇಧಿಸಲು ಆಗಿಲ್ಲ; ಸಿಎಂಗೆ ತಿರುಗೇಟು
Team Udayavani, Jan 11, 2018, 6:26 PM IST
ತುಮಕೂರು/ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್)ವನ್ನು ನಿಷೇಧಿಸಲು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾಗಾಂಧಿವರ ಕೈಯಲ್ಲೇ ಆಗಿಲ್ಲ, ಇನ್ನು ಸಿದ್ದರಾಮಯ್ಯ ಯಾವ ಬಚ್ಚಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿರಾದಲ್ಲಿ ಸುದ್ದಿಗಾರರು ಬಿಜೆಪಿ, ಆರ್ ಎಸ್ ಎಸ್ ನವರು ಉಗ್ರಗಾಮಿಗಳು ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಹೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಂದೆಡೆ ಸಂಸದೆ ಶೋಭಾ ಕರಂದ್ಲಾಜೆ, ನಾನು ಬಿಜೆಪಿ, ನಾನು ಆರ್ ಎಸ್ ಎಸ್ ಎಂಬ ಘೋಷಣೆಯೊಂದಿಗೆ ಬೀದಿಗಿಳಿಯುತ್ತೇವೆ ತಾಕತ್ತಿದ್ದರೆ ನನ್ನ ಬಂಧಿಸಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ತಾಕತ್ತಿದ್ರೆ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಿ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಕೂಡಾ ಸವಾಲೊಡ್ಡಿದ್ದಾರೆ. ಇಷ್ಟೆಲ್ಲಾ ವಿರೋಧದ ನಡುವೆಯೇ ಸಿಎಂ ಸಿದ್ದರಾಮಯ್ಯನವರು, ಭಯ ಹುಟ್ಟಿಸುವ ಕೆಲಸ ಯಾರೇ ಮಾಡಲಿ ಅಂತಹವರ ವಿರುದ್ಧ ಕಠಿಣ ಕ್ರಮ ಎಂದು ಹೇಳಿದ್ದಾರೆ. ಏತನ್ಮಧ್ಯೆ ಪಿಎಫ್ಐಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.