ತಾಲೂಕು ಒಕ್ಕಲಿಗ ಸದಸ್ಯತ್ವ ಅಭಿಯಾನ ಇಂದಿನಿಂದ
Team Udayavani, Oct 16, 2019, 5:08 PM IST
ತುರುವೇಕೆರೆ: ತಾಲೂಕಿನಲ್ಲಿ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಯಿಂದ ಅ.15ರಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಪಿ.ಎಚ್. ಧನಪಾಲ್ ಹಾಗೂ ಕಾರ್ಯದರ್ಶಿ ಮಂಗೀಕುಪ್ಪೆ ಗಂಗಣ್ಣ ಹೇಳಿದರು.
1986-87ರಲ್ಲಿ ಸ್ಥಾಪನೆಗೊಂಡ ಒಕ್ಕಲಿಗ ಸಂಘ 2000 ಇಸವಿಯ ವರೆಗೂ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಆಗಸ್ಟ್ 2019 ರಂದು ನೂತನ ಕಾರ್ಯಕಾರಿ ಮಂಡಳಿ ರಚನೆ ಯಾಗಿದ್ದು, ತಾಲೂಕಿನಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಕೇವಲ 275 ಜನರು ಸದಸ್ಯತ್ವ ಪಡೆದಿದ್ದು, ಈ ನಿಟ್ಟಿನಲ್ಲಿ ಅ.15ರಿಂದ ಡಿ.31ರ ವರೆಗೆ ಸದಸ್ಯತ್ವ ಅಭಿಯಾನ ಹಮ್ಮಿ ಕೊಳ್ಳಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಹತ್ತು ಸಾವಿರ ಸದಸ್ಯತ್ವ ಮಾಡುವ ಉದ್ದೇಶ ಹೊಂದಲಾಗಿದೆ. ಮುಂಬರುವ ದಿನಗಳಲ್ಲಿ ಬಡ ವಿದ್ಯಾರ್ಥಿ ಗಳಿಗೆ ವಸತಿ ನಿಲಯ ಸ್ಥಾಪಿಸುವ ಉದ್ದೇಶವಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉನ್ನತ ವಿದ್ಯಾಭ್ಯಾಸಕ್ಕೆ, ಆರ್ಥಿಕ ಸಹಾಯಧನ, ನೀಡುವ ಯೋಜನೆ ಇದೆ ಎಂದರು. ಸಮುದಾಯ ಭವನದ ದುರಸ್ತಿ ನಡೆಯುತ್ತಿದ್ದು, ಹಾಲಿ ಸಂಘದ ನಿರ್ದೇಶಕರು ತಲಾ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ ಎಂದು ಹೇಳಿದರು.
21 ವರ್ಷ ಮೇಲ್ಪಟ್ಟವರು ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ. 100 ರೂ. ಅರ್ಜಿ ಶುಲ್ಕ, 1000 ರೂ. ಸದಸ್ಯತ್ವ ಶುಲ್ಕ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ ಎಂದರು. ತಾಲೂಕಿನವರೇ ಆಗಿದ್ದು ಬೇರೆಡೆ ವಾಸವಾಗಿದ್ದವರೂ ಸದಸ್ಯತ್ವ ನೋಂದಣಿ ಮಾಡಿಸಬಹು ದಾಗಿದೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಎಂ.ಎನ್. ಚಂದ್ರೇಗೌಡ, ಖಜಾಂಚಿ ಉಗ್ರೇಗೌಡ, ಲೆಕ್ಕಪರಿಶೋಧಕ ಡಿ.ಪಿ.ರಾಜು, ನಿರ್ದೇ ಶಕರಾದ ಎಚ್.ಆರ್. ಬಸವರಾಜು, ಬಾಣಸಂದ್ರ ರಾಜಣ್ಣ, ದೊಡ್ಡಾಘಟ್ಟ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.