2 ಪಡಿತರ ಚೀಟಿ ಹೊಂದಿದ್ದರೆ ದಂಡ: ದ.ಕ., ಉಡುಪಿಗಳಲ್ಲಿ ಒಟ್ಟು 4,494 ನಕಲಿ ಕಾರ್ಡ್ ಪತ್ತೆ
1,632 ಕಾರ್ಡ್ ಡಿಲೀಟ್
Team Udayavani, Jun 28, 2022, 7:15 AM IST
ಉಡುಪಿ ಜಿಲ್ಲೆಯಲ್ಲಿ 1,952 ನಕಲಿ ಕಾರ್ಡ್ದಾರರನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ 1,428 ಮಂದಿಯ ಕಾರ್ಡ್ಗಳನ್ನು ಜಿಲ್ಲಾಮಟ್ಟ ದಲ್ಲಿ ಡಿಲೀಟ್ ಮಾಡಲಾಗಿದೆ. 524 ಕಾರ್ಡ್ಗಳು ಪರಿಶೀಲನೆಯಲ್ಲಿವೆ. ಬೈಂದೂರು, ಕುಂದಾಪುರ ಮತ್ತು ಕಾರ್ಕಳ ದಲ್ಲಿ ಅತೀ ಹೆಚ್ಚು ನಕಲಿ ಕಾರ್ಡ್ದಾರರು ಪತ್ತೆಯಾಗಿದ್ದಾರೆ. ಇದರಲ್ಲಿ ರಾಜ್ಯದ ಒಳಗಿನ ಪ್ರಕರಣ ಕಡಿಮೆಯಿದ್ದು, ಹೊರ ರಾಜ್ಯದ್ದೇ ಹೆಚ್ಚಿದೆ. ದಕ್ಷಿಣ ಕನ್ನಡದಲ್ಲಿ 72 ಕಾರ್ಡ್ದಾರರು ರಾಜ್ಯದ ಒಳಗೆ ನಕಲಿ ಕಾರ್ಡ್ ಹೊಂದಿದ್ದು, 62 ಡಿಲೀಟ್ ಮಾಡಲಾಗಿದೆ; 10 ಪರಿಶೀಲನೆಯಲ್ಲಿದೆ. 2,470 ಮಂದಿ ರಾಜ್ಯದ ಹೊರಗೆ ನಕಲಿ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ 144 ಡಿಲೀಟ್ ಮಾಡಲಾಗಿದ್ದು, ಉಳಿದಿರುವುದು ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಡುಪಿ: ಒಂದೇ ಹೆಸರಿನಲ್ಲಿ ಎರಡು ಕಡೆ ಪಡಿತರ ಚೀಟಿ ಹೊಂದಿ, ಸರಕಾರಿ ಸವಲತ್ತು ಅನುಭವಿಸುತ್ತಿರು ವವರಿಗೆ ಆಹಾರ, ನಾಗರಿಕ ಸರಬರಾಜು ಗ್ರಾಹಕ ವ್ಯವಹಾರ ಇಲಾಖೆ ಶಾಕ್ ನೀಡಿದೆ. ಉಭಯ ಜಿಲ್ಲೆಗಳಲ್ಲಿ ಒಟ್ಟು 4,494 ನಕಲಿ ಕಾರ್ಡ್ದಾರರನ್ನು ಪತ್ತೆ ಮಾಡಲಾಗಿದೆ. 1,632 ಕಾರ್ಡ್ ಡಿಲೀಟ್ ಮಾಡಲಾಗಿದ್ದು, ದಂಡ ವಸೂಲಿಗೆ ಚಿಂತನೆ ನಡೆಸಲಾಗುತ್ತಿದೆ.
ಸರಕಾರ ನಿಗದಿಪಡಿಸಿರುವ ಆದಾಯ ಕ್ಕಿಂತ ಹೆಚ್ಚು ವರಮಾನ ಹೊಂದಿದ್ದು ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಂದ ಆ ಚೀಟಿ ವಾಪಸ್ ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 24 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಲಕ್ಷ ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಇದರ ಬೆನ್ನಲ್ಲೇ ಎರಡೂಕಡೆ ಕಾರ್ಡ್ ಹೊಂದಿದವರನ್ನು ಗುರುತಿ ಸುವ ಕಾರ್ಯವೂ ಆರಂಭವಾಗಿದೆ.
ಪತ್ತೆ ಹಚ್ಚುವುದು ಹೇಗೆ?
ಪಡಿತರ ಚೀಟಿಗೆ ಆಧಾರ್ ಲಿಂಕ್ ಮತ್ತು ಬೆರಳಚ್ಚು ಕಡ್ಡಾಯ, ಕುಟುಂಬದ ಎಲ್ಲ ಸದಸ್ಯರು ಆಧಾರ್ ಲಿಂಕ್ ಜತೆಗೆ ಬೆರಳಚ್ಚು ನೀಡಬೇಕು. ತಾವಿರುವಲ್ಲಿಯೇ ಆಧಾರ್ ಲಿಂಕ್ಗೂ ಅವಕಾಶ ಇದೆ. ಒಂದು ದೇಶ- ಒಂದು ರೇಷನ್ ಕಾರ್ಡ್ ಅಡಿ ಬಹುತೇಕ ರಾಜ್ಯಗಳಲ್ಲಿ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದರಿಂದ ಎರಡು ಕಡೆ ಕಾರ್ಡ್ ಹೊಂದಿದವರ ಪಟ್ಟಿ ಸುಲಭವಾಗಿ ಲಭಿಸುತ್ತಿದೆ. ಹೀಗಾಗಿ ಇನ್ನು ಮುಂದೆ ಯಾರೂ ಎರಡು ಪಡಿತರ ಚೀಟಿ ಹೊಂದಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಹೆಚ್ಚು?
ಉಡುಪಿ ಮತ್ತು ದ. ಕನ್ನಡದಲ್ಲಿ ಎರಡು ಕಾರ್ಡ್ ಹೊಂದಿದವರು ಬಹುತೇಕ ಬೆಂಗಳೂರು, ಮುಂಬಯಿ, ಪುಣೆ, ಹೈದರಾ ಬಾದ್, ದಿಲ್ಲಿಯಲ್ಲಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಅಥವಾ ಬೇರೆ ರಾಜ್ಯದಲ್ಲಿ ಪಡಿತರ ಚೀಟಿ ಮಾಡಿಸಿಕೊಂಡು, ಮೂಲ ಮನೆಯಪಡಿತರ ಚೀಟಿಯಲ್ಲೂ ಹೆಸರು ಉಳಿಸಿ ಕೊಂಡವರಿಗೆ ಈಗ ಸಂಕಷ್ಟ ಎದುರಾಗಿದೆ. ಉಭಯ ಜಿಲ್ಲೆಗಳಲ್ಲಿ ಅವರ ಸ್ವಂತ ಮನೆ ಯಿದ್ದು, ಅಲ್ಲಿರುವ ಕಾರ್ಡ್ನಲ್ಲಿ ಅವರ ಹೆಸರೂ ಇದೆ. ಉದ್ಯೋಗ ಅಥವಾ ಇತರ ಉದ್ದೇಶಕ್ಕೆ ಬೇರೆ ಊರುಗಳಿಗೆ ಹೋಗಿ ನೆಲೆಸಿರುವವರು ಸರಕಾರದ ಸವಲತ್ತು ಪಡೆ
ಯಲು ಮತ್ತು ಮಕ್ಕಳನ್ನು ಶಾಲೆಗೆ ಸೇರಿಸಲು, ಉದ್ಯೋಗಕ್ಕೆ ಸೇರಲು ಇತ್ಯಾದಿ ದಾಖಲೆಗಳಿಗೆ ಅಲ್ಲೊಂದು ಹೊಸ ಕಾರ್ಡ್ ಮಾಡಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ರಾಜ್ಯ ಮಟ್ಟದಿಂದಲೇ
ಮಾಹಿತಿ ರವಾನೆ
ನಕಲಿ ಕಾರ್ಡ್ದಾರರ ಪಟ್ಟಿಯನ್ನು ಇಲಾಖೆಯ ಕೇಂದ್ರ ಕಚೇರಿಯಲ್ಲೇ ಸಿದ್ಧಪಡಿಸಲಾಗುತ್ತಿದೆ. ಒಂದೇ ಆಧಾರ್ ಸಂಖ್ಯೆಯಲ್ಲಿ ಎರಡು ಕಾರ್ಡ್ ಇರುವುದು ಅಥವಾ ಆದಾಯ ತೆರಿಗೆ ಪಾವತಿ, ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿದ್ದು ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರ ಮಾಹಿತಿ ಯನ್ನು ಸಾಫ್ಟ್ ವೇರ್ ಮೂಲಕ ಪತ್ತೆ ಮಾಡಿ, ಆಯಾ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಗಳಿಂದ ಮಾಹಿತಿಯನ್ನು ತಾಲೂಕುಗಳಿಗೆ ನೀಡಿ, ಅಲ್ಲಿಂದ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ, ತಪಾಸಣೆ ನಡೆಸಿ, ಅನಂತರ ರದ್ದು ಅಥವಾ ಮುಂದಿನ ಕ್ರಮದ ನಿರ್ಣಯ ಮಾಡಲಾಗುತ್ತಿದೆ.
ಎರಡು ಕಡೆ ಪಡಿತರ ಚೀಟಿ ಹೊಂದಿರುವುದನ್ನು ಆಧಾರ್ ಲಿಂಕ್ ಮೂಲಕ ಗುರುತಿಸಲಾಗುತ್ತಿದೆ. ರಾಜ್ಯ ಮಟ್ಟದಿಂದಲೇ ಈ ಪಟ್ಟಿ ಬರುತ್ತಿದ್ದು, ಇಲ್ಲಿ ಪರಿಶೀಲಿಸಿ, ನೋಟಿಸ್ ನೀಡಿ ರದ್ದತಿ ಅಥವಾ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
-ಮೊಹಮ್ಮದ್ ಇಸಾಕ್
ಉಪ ನಿರ್ದೇಶಕ, ಆಹಾರ, ನಾಗರಕ ಸರಬರಾಜು, ಗ್ರಾಹಕ ವ್ಯವಹಾರ ಇಲಾಖೆ, ಉಡುಪಿ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ