ಹೆಬ್ರಿ: ಬೇಳಂಜೆಯಲ್ಲಿ ಗಾಳಿ ಮಳೆ, ರಸ್ತೆಗೆ ಉರುಳಿದ ಅಪಾಯಕಾರಿ ಮರಗಳು
Team Udayavani, May 12, 2022, 5:46 PM IST
ಹೆಬ್ರಿ: ಕುಚ್ಚೂರು ಶಾಸ್ತ್ರಿನಗರ ಬಳಿ ಬುಧವಾರ ತಡರಾತ್ರಿ ಸುಮಾರು 1.30ರ ಹೊತ್ತಿಗೆ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರಗಳು ವಿದ್ಯುತ್ ಕಂಬ ತಂತಿ ಸಹಿತ ರಸ್ತೆಗೆ ಉರುಳಿವೆ.
ಪರಿಣಾಮ ಹೆಬ್ರಿ ಅಲ್ಬಾಡಿ ಮುಖ್ಯ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ವಿಷಯ ತಿಳಿದ ಕೂಡಲೇ ಸ್ಥಳೀಯ ಪಂಚಾಯತ್ ಸದಸ್ಯ ಸತೀಶ್ ,ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವು ಗೊಳಿಸಿ ಮುಂಜಾನೆ 4ರ ವೇಳೆಗೆ ವಾಹನ ಸಂಚಾರಕ್ಕೆ ಅನುಮಾಡಿಕೊಟ್ಟರು.
ಕಳೆದ 15 ದಿನಗಳ ಹಿಂದೆ ಈ ಪರಿಸರದಲ್ಲಿ ಅಪಾಯಕಾರಿ ಮರಗಳು ರಸ್ತೆಗೆ ಉರುಳಿ ಹಲವಾರು ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಅಲ್ಲದೆ ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯ ಸತೀಶ್ ಅವರು ಈಗ ಬಿದ್ದಿರುವ ಅಪಾಯಕಾರಿ ಮರದ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದು ಶೀಘ್ರ ಮರತೆರವುಗೊಳಿಸುವಂತೆ ವಿನಂತಿಸಿದ್ದರು.
ಅರಣ್ಯ ಇಲಾಖೆ ಮೌನ : ಇಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಇಲ್ಲಿನ ಪಂಚಾಯತ್ ಸದಸ್ಯ ಸತೀಶ್ ಪೂಜಾರಿ ಅವರು ಹಲವಾರು ಬಾರಿ ಇಲಾಖೆಗೆ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕಳದೆ ಬಾರಿ ಹೇಳಿದ ಮರಗಳೇ ದರೆಗುರುಳಿದ್ದು ರಾತ್ರಿ ಆಗಿರುವುದರಿಂದ ಜೀವ ಹಾನಿಯಾಗಿಲ್ಲ.ಈ ಬಗ್ಗೆ ಎಷ್ಟು ಹೇಳಿದರೂ ಅರಣ್ಯ ಇಲಾಖೆ ಮೌನವಾಗಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪಂಚಾಯತ್ ಸದಸ್ಯ ಸತೀಶ್ ತಿಳಿಸಿದ್ದಾರೆ.