ಶ್ರೀ ಕೃಷ್ಣಮಠಕ್ಕೆ ಅಮ್ಮ ಭೇಟಿ
Team Udayavani, Feb 26, 2017, 10:30 AM IST
ಉಡುಪಿ: ಶ್ರೀ ಮಾತಾ ಅಮೃತಾನಂದಮಯೀ ದೇವಿ ಅವರು ಶನಿವಾರ ಸಂಜೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪರ್ಯಾಯ ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಜತೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಇದೇ ಮೊದಲ ಬಾರಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅಮ್ಮ ಅವರು ಪೇಜಾವರ ಶ್ರೀ ಜತೆಗಿನ ಮಾತುಕತೆ ವೇಳೆ ಸಾಮಾಜಿಕ ಸೇವೆಗಳ ಕುರಿತು ಹಂಚಿಕೊಳ್ಳುತ್ತಾ, ದೇಶದೆಲ್ಲೆಡೆ 1 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯಿದೆ. ಅದಲ್ಲದೆ ಈಗಾಗಲೇ ಬಡವರಿಗೆ 1 ಲಕ್ಷ ಮನೆ ಕಟ್ಟಿಕೊಡಲಾಗಿದೆ. ಕೊಚ್ಚಿಯಲ್ಲಿ ಅಶಕ್ತರು, ಬಡವರು, ನಿರ್ಗತಿಕರಿಗಾಗಿ ಸುಸಜ್ಜಿತ ಬೃಹತ್ ಉಚಿತ ಆಸ್ಪತ್ರೆ ಇದ್ದು, ಅದಕ್ಕಿಂತಲೂ ದೊಡ್ಡದಾದ ಉತ್ತಮ ವ್ಯವಸ್ಥೆಯುಳ್ಳ ಆಸ್ಪತ್ರೆಯನ್ನು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕಟ್ಟುವ ಯೋಜನೆಯಿದೆ ಎಂದರು.
ಪೇಜಾವರ ಶ್ರೀ ಮಾತನಾಡಿ, ಇದೇ ಮೊದಲ
ಬಾರಿಗೆ ಅವರು ಉಡುಪಿಗೆ ಬಂದು, ಮಠಕ್ಕೆ ಭೇಟಿ ನೀಡಿರುವುದು ತುಂಬಾ ಸಂತೋಷವಾಗಿದೆ. ನನ್ನ ಮಾತಿಗೆ ಗೌರವ ಕೊಟ್ಟು ಬಂದಿದ್ದಕ್ಕೆ ಧನ್ಯವಾದಗಳು. ಪಂಚಮ ಪರ್ಯಾಯದಲ್ಲಿ ಇದೊಂದು ಉತ್ತಮ ಕ್ಷಣ ಎಂದು ಶ್ರೀಪಾದರು ಬಣ್ಣಿಸಿದರು.
ಈ ಸಂದರ್ಭ ಸಂತೋಷ್ ಗುರೂಜಿ, ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಲ್ಲಾ ಆ್ಯತ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.