ಕೆರ್ವಾಶೆ: ಹದಗೆಟ್ಟ ಜಯಪುರ ಪರಿಶಿಷ್ಟ ಜಾತಿ ಕಾಲನಿ ರಸ್ತೆ
ಚರಂಡಿ ಇಲ್ಲದೆ ರಸ್ತೆಯಲ್ಲಿಯೇ ಹರಿಯುವ ಮಳೆ ನೀರು
Team Udayavani, Jul 25, 2019, 5:13 AM IST
ಸಂಪೂರ್ಣ ಹದಗೆಟ್ಟ ಕೆಸರುಮಯ ಜಯಪುರ ಪರಿಶಿಷ್ಟ ಜಾತಿ ಕಾಲನಿ ರಸ್ತೆ.
ವಿಶೇಷ ವರದಿ–ಅಜೆಕಾರು: ಇಲ್ಲಿನ ಕೆರ್ವಾಶೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯಪುರ ಪರಿಶಿಷ್ಟ ಜಾತಿ ಕಾಲನಿ ರಸ್ತೆಯು ಸಂಪೂರ್ಣ ಹದ ಗೆಟ್ಟಿದ್ದು ಸ್ಥಳೀಯರಿಗೆ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ.
ಮೋರಿ ಸಮಸ್ಯೆ
ಕಳೆದ ಎಪ್ರಿಲ್-ಮೇ ತಿಂಗಳಿನಲ್ಲಿ ಈ ರಸ್ತೆಯ ಮೋರಿ ಕಾಮಗಾರಿ ನಡೆಸಲಾಗಿದ್ದು, ಇದೂ ಅಸಮರ್ಪಕವಾಗಿರುವುದರಿಂದ ಮಳೆಗಾಲದಲ್ಲಿ ಸಂಕಟ ಪಡಬೇಕಾಗಿದೆ. 4.38 ಲಕ್ಷ ರೂ. ವೆಚ್ಚದಲ್ಲಿ ಮೋರಿ ನಿರ್ಮಾಣ ಕಾಮಗಾರಿ ನಡೆದಿದ್ದು ಮೋರಿಯ ಇಕ್ಕೆಲಗಳಲ್ಲಿ ಸರಿಯಾದ ರೀತಿ ಮಣ್ಣನ್ನು ಹಾಕಿ ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ ಮಣ್ಣು ಕೊಚ್ಚಿ ಹೋಗುತ್ತಿದೆ. ಜತೆಗೆ ರಸ್ತೆಯುದ್ದಕ್ಕೂ ಕೆಸರ ಹೊಂಡ ನಿರ್ಮಾಣವಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.
ಕೆರ್ವಾಶೆ ಮುಡಾರು ಮಾರ್ಗದ ಸಂಕದ ಬಳಿಯ ಕೂಡುರಸ್ತೆ ಇದಾಗಿದ್ದು ಸುಮಾರು 35 ಕುಟುಂಬಗಳಿಗೆ ಸಂಚಾರಕ್ಕೆ ಸಮಸ್ಯೆಯಾಗಿದೆ.
ತುರ್ತು ಸಂದರ್ಭ ಕಷ್ಟ
ಕಾಲನಿಯನ್ನು ಸಂಪರ್ಕಿಸುವ ಏಕೈಕ ರಸ್ತೆಯಾಗಿದ್ದು ಹದಗೆಟ್ಟಿರುವುದರಿಂದ ರಿಕ್ಷಾ ಸೇರಿದಂತೆ ಯಾವುದೇ ಬಾಡಿಗೆ ವಾಹನಗಳು ಬರುತ್ತಿಲ್ಲ. ಇದರಿಂದ ತುರ್ತು ಸಂದರ್ಭ ಜನ ಸಂಕಷ್ಟ ಪಡುತ್ತಿದ್ದಾರೆ.
ಅಭಿವೃದ್ಧಿ ಪಡಿಸಿ
ರಸ್ತೆಗೆ ಹೊಸದಾಗಿ ಅಳವಡಿಸಿರುವ ಮೋರಿ ಕಾಮಗಾರಿ ಸುವ್ಯವಸ್ಥಿತ ಮಾಡುವ ಜತೆಗೆ ರಸ್ತೆಗೆ ಡಾಮರೀಕರಣಗೊಳಿಸಿ ಅಭಿವೃದ್ಧಿಪಡಿಸಿದ್ದಲ್ಲಿ ಸ್ಥಳೀಯರಿಗೆ ಮುಂಡ್ಲಿ ಹಾಗೂ ಮುಡಾರು ಮುಖ್ಯ ರಸ್ತೆ ಸಂಪರ್ಕಿಸಲು ಹೆಚ್ಚಿನ ಅನುಕೂಲವಾಗಲಿದೆ.
ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಸ್ಥಳೀಯರ ಸಮಸ್ಯೆ ಮನಗಂಡು ಶೀಘ್ರ ಸ್ಪಂದಿಸಬೇಕಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ವಲ್ಪಮಟ್ಟಿನ ಸಮಸ್ಯೆ
ಕಾಲನಿಯಲ್ಲಿ ರಸ್ತೆಯಲ್ಲಿ ಮೋರಿ ನಿರ್ಮಾಣ ಮಾಡುವ ಸಂದರ್ಭ ಹೊಸ ಮಣ್ಣು ಹಾಕಿರುವುದರಿಂದ ಸ್ವಲ್ಪಮಟ್ಟಿನ ಸಮಸ್ಯೆಯುಂಟಾಗಿದ್ದು ತಾತ್ಕಾಲಿಕವಾಗಿ ಜಲ್ಲಿ ಹುಡಿಯನ್ನು ಹಾಕಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು.
-ಮಧು, ಪಿಡಿಒ ಕೆರ್ವಾಶೆ ಗ್ರಾ.ಪಂ.
ಮಳೆಗೆ ಸಂಚಾರ ಕಡಿತಗೊಳ್ಳುವ ಭೀತಿ
ಜಯಪುರ ಕಾಲನಿ ರಸ್ತೆಯು ಸಂಪೂರ್ಣ ಹದಗೆಟ್ಟಿರುವುದರಿಂದ ಸಂಚರಿಸುವುದು ಅಸಾಧ್ಯ. ಈಗಾಗಲೇ ಸ್ಥಳೀಯರು ಸೇರಿ ಸ್ವಲ್ಪ ಮಟ್ಟಿಗೆ ಹೊಂಡಗಳಿಗೆ ಕಲ್ಲುಗಳನ್ನು ಹಾಕಿದ್ದೇವೆ. ಆದರೆ ಭಾರೀ ಮಳೆ ಬರುವ ಸಂದರ್ಭ ಇನ್ನಷ್ಟು ಮಣ್ಣು ಕೊಚ್ಚಿ ಹೋಗಿ ರಸ್ತೆ ಸಂಚಾರ ಕಡಿತಗೊಳ್ಳುವ ಅಪಾಯವಿದೆ.
-ಸಚಿನ್ ಪೂಜಾರಿ,
ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ