Katapadi: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟೆಂಪೋ ಢಿಕ್ಕಿ ; ಗಾಯ
Team Udayavani, Aug 5, 2023, 11:40 PM IST
ಕಾಪು : ಕಟಪಾಡಿ ಮೂಡಬೆಟ್ಟು ಭಗವತಿ ಗ್ಯಾರೇಜ್ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಆ. 4ರಂದು ನಡೆದಿದೆ.
ಕಟಪಾಡಿ ಮೂಡಬೆಟ್ಟು ನಿವಾಸಿ ಸುಬ್ರಹ್ಮಣ್ಯ ರಾವ್ (67) ಗಾಯಾಳು. ಸಹೋದರರಾದ ಅಶೋಕ್ ರಾವ್, ಪದ್ಮಾನಂದ ರಾವ್ ಮತ್ತು ಸುಬ್ರಹ್ಮಣ್ಯ ರಾವ್ ಅವರು ಭಗವತಿ ಗ್ಯಾರೇಜ್ ಬಳಿ ಮಾತನಾಡಿಕೊಂಡು ನಿಂತಿದ್ದು ಬಳಿಕ ಸುಬ್ರಹ್ಮಣ್ಯ ರಾವ್ ಅವರು ಕಟಪಾಡಿಗೆ ಹೋಗುವುದಾಗಿ ಹೆದ್ದಾರಿ ದಾಟುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಸುಬ್ರಮಣ್ಯ ರಾವ್ ಅವರು ರಸ್ತೆಗೆ ಬಿದ್ದಿದ್ದು, ಹಣೆಯ ಭಾಗ ಊದಿಕೊಂಡಿದ್ದು ಅಲ್ಲೇ ಇದ್ದ ಅಶೋಕ್ ರಾವ್ ಮತ್ತು ಪದ್ಮಾನಂದ ರಾವ್ ಅವರು ಅವರನ್ನು ಕೂಡಲೇ ರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದಾರೆ.
ಅಪಘಾತಕ್ಕೆ ಬಡಾ ದೋಸ್ತ್ ವಾಹನದ ಚಾಲಕನ ಅತೀ ವೇಗ ಮತ್ತು ಅಜಗಾರೂಕತೆಯ ಚಾಲನೆ ಕಾರಣವಾಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.