ಪುಂಚಲಕಾಡಿನಲ್ಲಿ ಬರ್ಬರ ಕೊಲೆ : ಗೆಳೆಯನನ್ನೇ ಕೊಂದು ಸುಟ್ಟು ಹಾಕಲು ಯತ್ನಿಸಿದ ಕೊಲೆಗಡುಕ
Team Udayavani, Jul 24, 2020, 10:31 PM IST
ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪುಂಚಲ ಕಾಡು ಎಂಬಲ್ಲಿ ಭೀಕರ ಕೊಲೆ ಘಟನೆಯೊಂದು ನಡೆದಿದೆ.
ಈ ಬರ್ಭರ ಕೊಲೆ ಪ್ರಕರಣದ ವಿಚಾರ ಇಂದು ರಾತ್ರಿ ಬೆಳಕಿಗೆ ಬಂದಿದೆ.
ಕುಡಿದ ಮತ್ತಿನಲ್ಲಿ ತನ್ನ ಸ್ನೇಹಿತನನ್ನೇ ಕೊಲೆಗೈದ ಆರೋಪಿ ಬಳಿಕ ಮೃತದೇಹವನ್ನು ಸುಟ್ಟು ಹಾಕುವ ವಿಫಲ ಯತ್ನವನ್ನು ನಡೆಸಿದ್ದಾನೆ.
ಕಾಪು ತಾಲೂಕಿನ ಕಳತ್ತೂರು ಸಮೀಪದ ಪುಂಚಲಕಾಡಿನಲ್ಲಿ ಶುಕ್ರವಾರ ರಾತ್ರಿ ಈ ಭೀಕರ ಘಟನೆ ನಡೆದಿದೆ. ಎರ್ಮಾಳು ನಿವಾಸಿ ಹೇಮಂತ್ ಪೂಜಾರಿ (45) ಕೊಲೆಯಾಗಿದ್ದು, ಪುಂಚಲಕಾಡು ನಿವಾಸಿ ಅಲ್ಬರ್ಟ್ ಡಿ ಸೋಜ (50) ಕೊಲೆ ಆರೋಪಿ.
ಆರೋಪಿ ಅಲ್ಬರ್ಟ್ ಕೊಲೆ ನಡೆಸಿದ ಬಳಿಕ ಶವವನ್ನು ಮನೆಯಂಗಳದಲ್ಲೇ ಸುಡಲು ಯತ್ನಿಸಿದ್ದಾನೆ. ಇದಕ್ಕೆ ಕುರುಹಾಗಿ ಮೃತ ಹೇಮಂತ್ ಪೂಜಾರಿಯ ಅರೆಬೆಂದ ಶವ ಸಾಕ್ಷಿಯಾಗಿತ್ತು.
ಕೊಲೆ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಕೊಲೆಯಾದಾತ ಮತ್ತು ಕೊಲೆಗೈದವ ಇಬ್ಬರೂ ಕೂಡಾ ಸ್ನೇಹಿತರಾಗಿದ್ದು, ಕ್ರಿಮಿನಲ್ ಚಟುವಟಿಕೆಯನ್ನು ಹೊಂದಿದವರೂ ಆಗಿದ್ದಾರೆ.
ಇಬ್ಬರೂ ಜತೆಗೂಡಿ ಕುಡಿಯುವ ಚಟ ಹೊಂದಿದ್ದರು. ಶುಕ್ರವಾರ ಸಂಜೆ ಕ್ಷುಲ್ಲಕ ಕಾರಣವೊಂದಕ್ಕೆ ಇಬ್ಬರ ನಡುವೆ ಜಗಳವುಂಟಾಗಿದ್ದು, ಬಳಿಕ ಅದು ಕೊಲೆಯಲ್ಲಿ ಅಂತ್ಯ ಕಂಡಿದೆ.
ಕೊಲೆ ಗಡುಕ ಆರೋಪಿಯು ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮನೆಯ ಅಂಗಳದಲ್ಲೇ ಮರದ ತುಂಡುಗಳು ಮತ್ತು ಒಣಗಿದ ಸೋಗೆ ಮಡಲುಗಳನ್ನು ಹಾಕಿ ಶವವನ್ನು ಸುಟ್ಟು ಹಾಕಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಮೂಲಕ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಇದೀಗ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಭರತ್ ರೆಡ್ಡಿ, ಕಾಪು ಸರ್ಕಲ್ ಮಹೇಶ್ ಪ್ರಸಾದ್, ಶಿರ್ವ ಎಸ್ಸೈ ಶ್ರೀ ಶೈಲ ಮುರಗೋಡ ಮೊದಲಾದವರು ಭೇಟಿ ನೀಡಿದ್ದಾರೆ.