ಫ್ಲೈ ಓವರ್ ಬೇಗ ಮುಗಿಸದಿದ್ದರೆ ಟೋಲ್ಗೆ ಮುತ್ತಿಗೆ
Team Udayavani, Aug 10, 2018, 10:07 AM IST
ಕುಂದಾಪುರ: ವರ್ಷಗಳಿಂದ ಮಳೆ ಕಾರಣ ಹೇಳುತ್ತ ಹೆದ್ದಾರಿ ಕಾಮಗಾರಿ ಮುಗಿಸಿಲ್ಲ. ಟೋಲ್ಗೆ ಮುತ್ತಿಗೆ ಹಾಕಿ ಆದಾಯ ನಿಲ್ಲಿಸಿದರೆ ಗುತ್ತಿಗೆದಾರ ಕಂಪೆನಿಗೆ ಬುದ್ಧಿ ಬಂದೇ ಬರುತ್ತದೆ! ಇದು ಜನರ ಆಕ್ರೋಶದ ನುಡಿ. ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಗುರುವಾರ ಸಹಾಯಕ ಕಮಿಷನರ್ ಟಿ. ಭೂಬಾಲನ್ ಅಧ್ಯಕ್ಷತೆಯಲ್ಲಿ ನಡೆದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಸಮಾಲೋಚನೆ ಸಭೆಯಲ್ಲಿ ರಾ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಪಾರ್ಕಿಂಗ್
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಪಾರ್ಕಿಂಗ್ಗೆ ಜಾಗ ಗುರುತಿಸದೆ ದಂಡ ವಿಧಿಸಲಾಗುತ್ತಿದೆ. ಅಂಗಡಿ ಎದುರು ನಿಲ್ಲಿಸಿದ ವಾಹನಗಳಿಗೆ ದಂಡ, ಪಾರ್ಕಿಂಗ್ ಸ್ಥಳ ಮೀಸಲಿಡದೆ ಕಟ್ಟಡ ನಿರ್ಮಿಸಿದವರಿಗೆ ದಂಡವಿಲ್ಲ ಎಂಬ ಸ್ಥಿತಿ ಇದೆ ಎಂದು ರಿಕ್ಷಾ ಚಾಲಕರು ದೂರಿದರು. ಪಾವತಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಿ ಎನ್ನುವ ಸಲಹೆ ಬಂತು. ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜೂನಿಯರ್ ಕಾಲೇಜು ಬಳಿ ಜಾಗವೂ ಇದೆ. ಎಸಿಯವರು ಅನುವು ಮಾಡಿಕೊಟ್ಟಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಬಸ್ಸುಗಳ ಗೊಂದಲ
ಕೆಎಸ್ಆರ್ಟಿಸಿ ಬಸ್ಗಳು ನಗರದ ಒಳಗಿನ ನಿಲ್ದಾಣಕ್ಕೆ ಬರುವ ಬಗ್ಗೆ ಖಾಸಗಿ ಬಸ್ಸಿನವರು ಆಕ್ಷೇಪ ವ್ಯಕ್ತಪಡಿಸಿ, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದರು. ಈ ಸಂಬಂಧ ಲೋಕಾಯುಕ್ತ ತೀರ್ಪನ್ನು ಪರಿಶೀಲಿಸಿದ ಎಸಿ ಭೂಬಾಲನ್, ನಗರದ ನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಬಸ್ ಬರಬಾರದು ಎಂದು ಉಲ್ಲೇಖೀಸಿಲ್ಲ ಎಂದರು.
ರಿಕ್ಷಾಗಳಿಗೆ ಸ್ಟಿಕ್ಕರ್
ನಗರದಲ್ಲಿ ಗ್ರಾಮಾಂತರದ ರಿಕ್ಷಾಗಳ ಓಡಾಟ ಇರುವ ಬಗ್ಗೆ ಹೇಳಿದಾಗ ರಿಕ್ಷಾಗಳಿಗೆ ಕಲರ್ ಕೋಡಿಂಗ್ ಸ್ಟಿಕ್ಕರ್ ಹಾಕಲಾಗುವುದು ಎಂದು ಡಿವೈಎಸ್ಪಿ ಹೇಳಿದರು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಗರದ ಒಳಗೆ ಲೋಡ್, ಅನ್ಲೋಡ್ ವಾಹನಗಳಿಗೆ ಅವಕಾಶ ಇಲ್ಲ ಎಂದರು. ಆ.13ರಂದು ಸರಕಾರಿ ಹಾಗೂ ಖಾಸಗಿ ಬಸ್ಸುಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ದಾಖಲೆ ಸಮರ್ಪಕ ಇಲ್ಲದಿದ್ದರೆ ಬಸ್ಗಳನ್ನು ಬಿಡುವುದಿಲ್ಲ ಎಂದರು. ವರ್ತಕ ದಿನಕರ ಶೆಟ್ಟಿ, ರಿಕ್ಷಾ ಚಾಲಕ ಅಣ್ಣಯ್ಯ, ಮೊದಿನ್ ಸಾಬ್, ಬಸ್ಸು ಮಾಲಕ ಸುಧಾಕರ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ಶಂಕರ ಅಂಕದಕಟ್ಟೆ, ಉದ್ಯಮಿ ಹಂಸರಾಜ್ ಶೆಟ್ಟಿ, ಮೆಜೆಸ್ಟಿಕ್ ಹಾಲ್ನ ಅರುಣ್ ಕುಮಾರ್ ಶೆಟ್ಟಿ ಮಾತನಾಡಿದರು. ತಾ.ಪಂ. ಇಒ ಕಿರಣ್ ಪೆಡೆಕರ್, ಕೆಎಸ್ಆರ್ಟಿಸಿ ಅಧಿಕಾರಿ ಸತ್ಯಂ, ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು.
“ಜನ ರೊಚ್ಚಿಗೇಳುವಂತೆ ಮಾಡದಿರಿ’
ಶಾಸ್ತ್ರೀ ಸರ್ಕಲ್ ಬಳಿ ಫ್ಲೈ ಓವರ್ ಕಾಮಗಾರಿ ಮುಗಿದೇ ಇಲ್ಲ. ಸರ್ವಿಸ್ ರಸ್ತೆ ಬಿಟ್ಟುಕೊಟ್ಟಿಲ್ಲ. ಬಸ್ರೂರು ಮೂರುಕೈ ಬಳಿ ಅಂಡರ್ಪಾಸ್ ಕೆಲಸ ಆರಂಭಿಸಿಲ್ಲ. ಅಲ್ಲಿಂದ ಕೆಎಸ್ಆರ್ಟಿಸಿವರೆಗೆ ಪ್ರಯಾಣ ಸಾಧ್ಯವೇ ಆಗುತ್ತಿಲ್ಲ. ಹಾಗಿದ್ದರೂ ನವಯುಗ ಕಂಪೆನಿ ಕಾಮಗಾರಿ ನಡೆಸುತ್ತಿಲ್ಲ ಎಂದೂ ಆಕ್ರೋಶ ಕೇಳಿಬಂತು. ಇದಕ್ಕೆ ಉತ್ತರಿಸಿದ ನವಯುಗ ಕಂಪೆನಿ ಅಧಿಕಾರಿ, ಮೇ ಒಳಗೆ ಕಾಮಗಾರಿ ಮುಗಿಸಲಾಗುವುದು. ಸರ್ವಿಸ್ ರಸ್ತೆ ಆಗಿದ್ದು ಮಣ್ಣು ತುಂಬಿಸುವ ಕೆಲಸ ಮಳೆ ಮುಗಿದ ಕೂಡಲೇ ಮಾಡಲಾಗುವುದು ಎಂದರು. ಎಪ್ರಿಲ್ನಲ್ಲಿ ಫ್ಲೈ ಓವರ್ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಎಸಿ ಟಿ. ಭೂಬಾಲನ್ ಸೂಚಿಸಿದರು. ಜನ ರೊಚ್ಚಿ ಗೆದ್ದು ಟೋಲ್ಗೆ ಮುತ್ತಿಗೆ ಹಾಕುವ ಸ್ಥಿತಿ ತಂದುಕೊಳ್ಳಬೇಡಿ ಎಂದು ಡಿವೈಎಸ್ಪಿ ಬಿ. ದಿನೇಶ್ ಕುಮಾರ್ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ