Road Mishap ಕಾಪು: ನಿಂತಿದ್ದ ಲಾರಿಗೆ ಕಾರು ಢಿಕ್ಕಿ ; ಚಾಲಕ ಸಾವು
Team Udayavani, Feb 28, 2024, 9:50 PM IST
ಕಾಪು: ನಿಂತಿದ್ದ ಲಾರಿಗೆ ಕಾರು ಹಿಂದಿನಿಂದ ಢಿಕ್ಕಿ ಹೊಡೆದು ಕಾರು ಚಾಲಕ ಮೃತಪಟ್ಟ ಘಟನೆ ಪಾಂಗಾಳದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಕಾಪು ಮೆಸ್ಕಾಂನಲ್ಲಿ ಗುತ್ತಿಗೆ ಆಧಾರಿತವಾಗಿ ಉಪಯೋಗಿಸುತ್ತಿದ್ದ ಕಾರು ಚಾಲಕ, ಭಾರತ್ ನಗರ ನಿವಾಸಿ ನಾಗೇಶ್ ಕಾಮತ್ (70) ಮೃತರು.
ಕಾಪುವಿನ ಮೆಸ್ಕಾಂಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಅವರು ಎಇಇ ಅವರನ್ನು ಮನೆಗೆ ಬಿಟ್ಟು ಕಾಪು ಕಡೆಗೆ ಆಗಮಿಸುತ್ತಿದ್ದಾಗ ಪಾಂಗಾಳದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹಾಳಾಗಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದಾಗಿ ಕೆಲವು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾಪು ಎಸ್ಐ ಅಬ್ದುಲ್ ಖಾದರ್, ಕ್ರೈಂ ಎಸ್ಐ ಪುರುಷೋತ್ತಮ್ ಮತ್ತು ಪೊಲೀಸರು ಹಾಗೂ ಹೆದ್ದಾರಿ ಗಸ್ತು ಪಡೆ ಸ್ಥಳಕ್ಕೆ ಭೇಟಿ ನೀಡಿದ್ದು ಕಾರು ಹಾಗೂ ಲಾರಿಯನ್ನು ತೆರವುಗೊಳಿಸಿದ್ದಾರೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನೆರವಿಗೆ ಧಾವಿಸಿದ ಸ್ಥಳೀಯರು
ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ಕಬ್ಬಿಣದ ರಾಡ್ ಬಳಸಿ ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ತನ್ನದೇ ಕಾರನ್ನು ಬಾಡಿಗೆಗೆ ನೀಡಿದ್ದರು ಮೃತ ನಾಗೇಶ್ ಕಾಮತ್ ಅವರು ಉಳಿಯಾರಗೋಳಿ ಭಾರತ್ ನಗರ ನಿವಾಸಿಯಾಗಿದ್ದು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ತನ್ನದೇ ಸ್ವಂತ ವಾಹನವನ್ನು ಮೆಸ್ಕಾಂಗೆ ಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ನೀಡಿದ್ದ ಅವರು ಸ್ವತಃ ತಾನೇ ಹಲವು ವರ್ಷಗಳಿಂದ ಮೆಸ್ಕಾಂ ಅಧಿಕಾರಿಗಳಿಗೆ ಚಾಲಕರಾಗಿ ಸೇವೆ ನೀಡುತ್ತಿದ್ದರು.