ಮರಳು ಕೊರತೆಯ ಹೊರೆ ಸ್ಥಳೀಯ ಆರ್ಥಿಕತೆಗೆ ಬರೆ
Team Udayavani, Nov 28, 2018, 5:00 AM IST
ಕೋಟ: ಕೆಲವು ತಿಂಗಳುಗಳಿಂದ ಉಡುಪಿ ಜಿಲ್ಲೆಯಲ್ಲಿ ಮರಳು ಕೊರತೆ ಸೃಷ್ಟಿಸಿರುವ ಸಮಸ್ಯೆ ಹಲವು. ಕೋಟ್ಯಂತರ ರೂ. ಮೌಲ್ಯದ ನಿರ್ಮಾಣ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದೆ. ಇದು ಸ್ಥಳೀಯ ಆರ್ಥಿಕತೆಯ ಮೇಲೆ ಬೀರುತ್ತಿರುವ ಪರಿಣಾಮ ಘನಘೋರವಾದುದು. ಕಟ್ಟಡ ಕಾರ್ಮಿಕರು ದಿನದ ಬದುಕನ್ನೇ ಕಷ್ಟದಲ್ಲಿ ನಡೆಸುವಂತಾಗಿದ್ದರೆ, ಈ ಕ್ಷೇತ್ರವನ್ನು ನಂಬಿಕೊಂಡ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯಮಗಳು ಸಂಪೂರ್ಣ ನೆಲಕಚ್ಚುವ ಸ್ಥಿತಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ಉದಯವಾಣಿಯ ಸುದ್ದಿಗಾರ ರಾಜೇಶ್ ಗಾಣಿಗ ಅಚ್ಲಾಡಿ ಕೋಟದ 15 ಕಿ.ಮೀ. ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕೈಗೊಂಡ ಅಧ್ಯಯನ ವರದಿಯ ಮೊದಲ ಭಾಗವಿದು.
ಗೂಡ್ಸ್ ರಿಕ್ಷಾಗಳನ್ನು ಕೇಳುವವರಿಲ್ಲ
ಹೆಚ್ಚಾಗಿ ಹಾರ್ಡ್ವೇರ್ ಮತ್ತಿತರ ವಸ್ತುಗಳ ಬಾಡಿಗೆ ನಂಬಿಕೊಂಡಿರುವ ಗೂಡ್ಸ್ ರಿಕ್ಷಾಗಳಿಗೆ ಶೇಕಡಾ 75 ರಷ್ಟು ಬಾಡಿಗೆ ಕುಸಿದಿದೆ. ಹೀಗಾಗಿ ಹಲವು ಮಂದಿ ತಮ್ಮ ವಾಹನಗಳನ್ನು ಮನೆಯಲ್ಲೇ ನಿಲ್ಲಿಸಿ ಬೇರೆ ಕೆಲಸಗಳಿಗೆ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಸಿಕ್ಕಷ್ಟೇ ಬಾಡಿಗೆಯಲ್ಲಿ ಕಷ್ಟದಿಂದ ದಿನ ಕಳೆಯುತ್ತಿದ್ದಾರೆ. ನಿಲ್ದಾಣಗಳಲ್ಲಿ 15-20 ರಿಕ್ಷಾಗಳಿರುವಲ್ಲಿ ಈಗ ಕೇವಲ ನಾಲ್ಕೈದು ರಿಕ್ಷಾಗಳು ಕಾಣಸಿಗುತ್ತಿವೆ.
ಹಾರ್ಡ್ವೇರ್ಗಳಲ್ಲೂ ಕಷ್ಟ
ಹಾರ್ಡ್ವೇರ್ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಈ ಹಿಂದೆ ದಿನಕ್ಕೆ 1 ಲಕ್ಷ ರೂ. ವ್ಯವಹಾರ ನಡೆಯುತ್ತಿತ್ತು. ಈಗ 40 ಸಾವಿರ ರೂ. ನಡೆದರೆ ದೊಡ್ಡದು. ಕೇವಲ ಪೈಪ್, ಪೈಂಟ್ ಮುಂತಾದ ವಸ್ತುಗಳಿಗೆ ಕೊಂಚ ಬೇಡಿಕೆ ಇದೆ. ಪ್ರಸ್ತುತ ಕಾಳಸಂತೆಯಲ್ಲಿ ಮರಳು ಸಿಗುತ್ತಿರುವುದರಿಂದ ಇಷ್ಟಾದರೂ ವ್ಯವಹಾರವಿದೆ. ಅದೂ ನಿಂತರೆ ಇಡೀ ಉದ್ಯಮವೇ ಕುಸಿಯಲಿದೆ. ಇನ್ನು ಒಂದು ತಿಂಗಳಲ್ಲಿ ಮರಳು ಸಮಸ್ಯೆ ಪರಿಹಾರವಾಗದಿದ್ದರೆ ಮತ್ತಷ್ಟು ವ್ಯವಹಾರ ಕುಸಿಯಲಿದೆ ಎನ್ನುವುದು ಉದ್ಯಮಿಗಳ ಅಭಿಪ್ರಾಯ.
ರಿಕ್ಷಾದವರಿಗೂ ಬಾಡಿಗೆ ಇಲ್ಲ
ಕಾರ್ಮಿಕರು ಹಾಗೂ ಮಧ್ಯಮ ವರ್ಗದವರ ಸ್ಥಳೀಯ ಸಾರಿಗೆ ಅಗತ್ಯ ನೀಗಿಸುವುದು ಆಟೋ ರಿಕ್ಷಾಗಳು. ಇದೀಗ ಕಾರ್ಮಿಕರಿಗೆ ಕೆಲಸವಿಲ್ಲ. ಅದರ ಪರಿಣಾಮವಾಗಿ ರಿಕ್ಷಾದವರಿಗೂ ಬಾಡಿಗೆ ಇಲ್ಲ. ಬೆಳಗ್ಗೆ ಕೆಲಸಕ್ಕೆ ತೆರಳಲು ಹಾಗೂ ಸಂಜೆ ವಾಪಸಾಗಲು, ಪೇಟೆಯಿಂದ ಮನೆಗೆ ತೆರಳಲು, ಅಂಗಡಿಯಿಂದ ಮನೆಗೆ ತೆರಳಲು ಕಾರ್ಮಿಕರು ರಿಕ್ಷಾವನ್ನು ಅವಲಂಬಿಸುತ್ತಿದ್ದರು. ಇದರಿಂದ ರಿಕ್ಷಾದವರು ದಿನಕ್ಕೆ 800 ರೂ. ಗಳಿಂದ 1000 ರೂ. ವರಗೆ ದುಡಿಯುತ್ತಿದ್ದರು. ಅದೀಗ 300-400 ರೂ. ಗೆ ಕುಸಿದಿದೆ.
ಕುಡಿತದ ಪ್ರಮಾಣ ಕುಸಿತ
ಗ್ರಾಮೀಣ ಭಾಗದ ಮದ್ಯದಂಗಡಿಗಳ ವ್ಯವಹಾರವೂ ಶೇ. 50 ರಷ್ಟು ಕುಸಿದಿದೆ. ಈ ಹಿಂದೆ ದಿನವೊಂದಕ್ಕೆ 70-80 ಸಾವಿರ ರೂ. ವ್ಯವಹಾರವಾಗುತ್ತಿದ್ದರೆ, ಈಗ 30 ಸಾವಿರ ರೂ.ಗೆ ಇಳಿದಿದೆ. ಕೊನೆಯ ಶನಿವಾರ ಬಟವಾಡೆಯಂದು ಹತ್ತಾರು ಮಂದಿ ಒಟ್ಟಾಗಿ ನಡೆಸುತ್ತಿದ್ದ ಪಾರ್ಟಿಗಳೆಲ್ಲ ಸ್ಥಗಿತಗೊಂಡಿವೆ. ಮರಳು ತೆಗೆಯುವ ಉತ್ತರ ಪ್ರದೇಶ ಇತ್ಯಾದಿ ಹೊರ ರಾಜ್ಯಗಳ ಕಾರ್ಮಿಕರೇ ಹೆಚ್ಚು. ಇವರ ಮದ್ಯ ಸೇವನೆ ಇರಲಿ, ಊರನ್ನೇ ತ್ಯಜಿಸಿ ತಮ್ಮ ಊರಿಗೆ ವಾಪಸಾಗಿದ್ದಾರೆ.
ದಿನಸಿ ಅಂಗಡಿಗಳ ಕಥೆ ಕೇಳುವಂತಿಲ್ಲ
ಚಿಕ್ಕಪುಟ್ಟ ದಿನಸಿ ಅಂಗಡಿಗಳ ವ್ಯವಹಾರದಲ್ಲೂ ಶೇ. 50ರಿಂದ 60 ರಷ್ಟು ಕುಸಿದಿದೆ. ಹಿಂದೆ ದಿನಕ್ಕೆ 7ರಿಂದ 8 ಸಾವಿರ ರೂ. ವರೆಗೆ ನಡೆಯುತ್ತಿದ್ದ ವ್ಯಾಪಾರ ಮೂರು ಸಾವಿರ ರೂ.ಗೆ ಇಳಿದಿದೆ. ದಿನಬಳಕೆಯ ವಸ್ತುಗಳ ಜತೆಗೆ ತುಪ್ಪ, ಸ್ವೀಟ್ಸ್ ಹೀಗೆ ಐಷಾರಾಮಿ ವಸ್ತುಗಳ ಖರೀದಿ ನಡೆಸುತ್ತಿದ್ದವರೂ ಹಣದ ಅಭಾವದ ಹಿನ್ನೆಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸುತ್ತಿಲ್ಲ, ಬ್ರ್ಯಾಂಡ್ಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ದಿನಂಪ್ರತಿ ಅಂಗಡಿಗೆ ಬರುತ್ತಿದ್ದವರು ವಾರಕ್ಕೊಮ್ಮೆ ಮಿತ ಪದಾರ್ಥಗಳ ಪಟ್ಟಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹಲವು ಅಂಗಡಿ ಮಾಲಕರು.
ಬಸ್ಸುಗಳು ಖಾಲಿ-ಖಾಲಿ
ಕಾರ್ಮಿಕರಿಗೆ ಕೆಲಸವಿಲ್ಲದಿರುವುದರಿಂದ ಗ್ರಾಮೀಣ ಭಾಗದ ಬಸ್ಸುಗಳೂ ಖಾಲಿಯಿವೆ. ವರ್ಷದ ಹಿಂದೆ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳಿಂದ ಬಸ್ಸುಗಳು ತುಂಬಿರುತ್ತಿದ್ದವು. ಈಗ ವಿದ್ಯಾರ್ಥಿಗಳಿದ್ದಾರೆ, ಕಾರ್ಮಿಕರಿಲ್ಲ. ಹೀಗಾಗಿ ದೊಡ್ಡ ಬಸ್ಸುಗಳ ಆದಾಯ ಸಂಗ್ರಹವೂ ದಿನಕ್ಕೆ 10-12 ಸಾವಿರ ರೂ.ಗಳಿಂದ 6 ರೂ. ಗಳಿಗೆ ಇಳಿದಿದೆ. 7-8ಸಾವಿರ ರೂ. ಕಲೆಕ್ಷನ್ ಆಗುತ್ತಿದ್ದ ಸಣ್ಣ ಬಸ್ಸುಗಳ ಆದಾಯ 4-5 ಸಾವಿರ ರೂ. ಗೆ ಕುಸಿದಿದೆ. ಇದರಿಂದಾಗಿ ಬಸ್ಸುಗಳ ಆದಾಯ, ಖರ್ಚು-ವೆಚ್ಚಕ್ಕೆ ಸಮವಾಗುತ್ತಿದೆ.
ಅಂಜಲ್ ಬದಲಿಗೆ ಬಂಗುಡೆ ಖರೀದಿ ; ಕೋಳಿ ವ್ಯಾಪಾರವೂ ಕುಸಿತ
ಕೆಲಸವಿರುವಾಗ ಮನೆಯಲ್ಲಿ ಪ್ರತಿದಿನ ಮೀನು, ಮಾಂಸದೂಟ ಮಾಡುತ್ತಿದ್ದ ಕಾರ್ಮಿಕರು ಇದೀಗ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲು ವಾರಕ್ಕೆ ಒಂದೆರಡು ಬಾರಿಗೆ ಮಿತಗೊಳಿಸಿದ್ದಾರೆ. ಇದರ ಪರಿಣಾಮ ದಿನಕ್ಕೆ 7-8ಸಾವಿರ ರೂ. ವ್ಯಾಪಾರವಾಗುತ್ತಿದ್ದ ಮೀನು, ಮಾಂಸದಂಗಡಿಗಳ ಮೇಲೂ ಆಗಿದೆ. ಈಗ ಇವುಗಳ ವ್ಯಾಪಾರ 2-3 ಸಾವಿರ ರೂ. ಇಲ್ಲ. ಅಂಜಲ್, ಪಾಂಪ್ಲೇಟ್ ಮುಂತಾದ ದುಬಾರಿ ಮೀನು ಖರೀದಿಸುತ್ತಿದ್ದವರು ಬಂಗುಡೆ, ಭೂತಾಯಿಯಂಥ ಅಗ್ಗದ ಮೀನಿಗೆ ಮೊರೆ ಹೋಗಿದ್ದಾರೆ. ಕೋಳಿ ಮಾರಾಟದಲ್ಲೂ ಶೇ. 60ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿತವಾಗಿದೆ. ದಿನಕ್ಕೆ 50-60 ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿದ್ದ ಅಂಗಡಿಗಳಲ್ಲಿ 15-25 ಕೆ.ಜಿ. ಗೆ ಕುಸಿದಿದೆ.
ಪೆಟ್ಟಿಗೆ ಅಂಗಡಿಗಳು ಪಾತಾಳಕ್ಕೆ
ಕೂಲಿ ಕಾರ್ಮಿಕರನ್ನೇ ತಮ್ಮ ವ್ಯವಹಾರಗಳಿಗೆ ನಂಬಿರುವುದು ಪೆಟ್ಟಿಗೆ ಅಂಗಡಿಗಳು, ಬೀಡಾ ಅಂಗಡಿಗಳು. ಕಾರ್ಮಿಕರು ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಹಾಗೂ ಸಂಜೆ ಮನೆಗೆ ಹೋಗುವಾಗ ಈ ಅಂಗಡಿಗಳಿಗೆ ತೆರಳಿ ಎಳನೀರು, ಬಾಳೆಹಣ್ಣು, ತಂಬಾಕು, ಗುಟ್ಕಾ ಮುಂತಾದವುಗಳನ್ನು ಖರೀದಿಸುತ್ತಿದ್ದರು. ಹಾಗಾಗಿ ಓರ್ವ ಗ್ರಾಹಕನಿಂದ ದಿನಕ್ಕೆ ಕನಿಷ್ಠ 50ರಿಂದ 100 ರೂ. ವ್ಯಾಪಾರವಿತ್ತು. ಆದೀಗ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲಸಕ್ಕಾಗಿ ದೂರದ ಊರುಗಳಿಂದ ಬರುವ ಹೊಸ ಗ್ರಾಹಕರೂ ಇಲ್ಲ. ದಿನವೊಂದಕ್ಕೆ 5-6 ಸಾವಿರ ರೂ. ವ್ಯಾಪಾರ ಮಾಡುತ್ತಿದ್ದವರು ಈಗ ಒಂದೂವರೆ ಸಾವಿರ ರೂ. ಮಾಡಲೇ ಹೈರಾಣಾಗುತ್ತಿದ್ದಾರೆ.
ಹೊಟೇಲ್ಗಳ ಕಥೆಯೂ ಚಿಂತಾಜನಕ
ಗ್ರಾಮೀಣ ಭಾಗದಲ್ಲಿ ಹೊಟೇಲ್ ಉದ್ಯಮಕ್ಕೆ ಕಾರ್ಮಿಕರೇ ಗ್ರಾಹಕರು. ಹಾಗಾಗಿ ಮರಳು ಕೊರತೆ ಸಮಸ್ಯೆಯಿಂದ ಸ್ಥಳೀಯ ಚಿಕ್ಕಪುಟ್ಟ ಮತ್ತು ಮಧ್ಯಮ ಗಾತ್ರದ ಹೊಟೇಲ್ಗಳು ತೀರಾ ಸಂಕಷ್ಟಕ್ಕೀಡಾಗಿವೆ. ಈ ಕ್ಷೇತ್ರದಲ್ಲಿ ಶೇ. 60-70ರಷ್ಟು ವ್ಯವಹಾರ ಕುಸಿದಿದೆ. ಹಿಂದೆ ದಿನಕ್ಕೆ 10-12 ಸಾವಿರ ರೂ. ವ್ಯವಹಾರ ನಡೆಸುತ್ತಿದ್ದವರು ಇಂದು 4 ಸಾವಿರ ರೂ.ಗಳಿಗೆ ತೃಪ್ತಿ ಪಡಬೇಕಿದೆ. ಚಿಕ್ಕ ಹೊಟೇಲ್ಗಳಲ್ಲಂತೂ ಒಂದು ಸಾವಿರ ರೂ. ವ್ಯವಹಾರವಾದರೆ ದೊಡ್ಡದು ಎಂದಾಗಿದೆ. ಕಾರ್ಮಿಕರ ಪಾರ್ಸೆಲ್ ವ್ಯವಹಾರವೇ ಹೊಟೇಲ್ಗಳಿಗೆ ಬಹುದೊಡ್ಡ ಆದಾಯವಾಗಿತ್ತು. ಅದಕ್ಕೆ ಸಂಪೂರ್ಣ ಕಡಿತ ಬಿದ್ದಿದೆ. ಹಾಗೆಂದು ದಿನಸಿ ಸಾಮಾನುಗಳ ಖರ್ಚು ಕಡಿಮೆ ಮಾಡಬಹುದು. ಆದರೆ ಕಾರ್ಮಿಕರ ಸಂಬಳ ಕಡಿಮೆ ಮಾಡುವಂತಿಲ್ಲ, ಸಂಖ್ಯೆಯನ್ನೂ ಇಳಿಸದಂಥ ಇಕ್ಕಟ್ಟಿಗೆ ಹೊಟೇಲ್ ಉದ್ಯಮದವರು ಸಿಲುಕಿದ್ದಾರೆ.
ಮೊಬೈಲ್ ವ್ಯವಹಾರ ಕುಸಿತ
ಸ್ಥಳೀಯವಾಗಿ ಮೊಬೈಲ್ ಅಂಗಡಿಗಳಿಗೆ ಎರಡು ರೀತಿಯಲ್ಲಿ ಹೊಡೆತ ಬಿದ್ದಿದೆ. ಮೊದಲನೆಯದಾಗಿ ದೂರಸಂಪರ್ಕ ಸೇವೆಯ ಕಂಪೆನಿಗಳು ಕರೆಗಳನ್ನು ಮಾಸಿಕ ಶುಲ್ಕವಾಗಿ ಪರಿವರ್ತಿಸಿ, ಇಂಟರ್ನೆಟ್ ಪ್ಯಾಕ್ನ ಮೌಲ್ಯ ಕಡಿತಗೊಳಿಸಿದ್ದರಿಂದ ರೀಚಾರ್ಜ್ ವ್ಯವಹಾರದಲ್ಲಿ ಕಡಿತಗೊಂಡಿತ್ತು. ಇದರ ಜತೆಗೆ ಮರಳಿನ ಕೊರತೆಯಿಂದ ಕೈತುಂಬ ಕೆಲಸ ಸಿಗದ ಪರಿಣಾಮ ಕಟ್ಟಡ ಕಾರ್ಮಿಕರೂ ಮಾತಿಗೆ ಮಿತಿ ಹೇರಿದರು. ಇದರಿಂದ ದಿನವೊಂದಕ್ಕೆ ನಡೆಯುತ್ತಿದ್ದ 6 ರಿಂದ 8 ಸಾವಿರ ರೂ. ವ್ಯವಹಾರ 2-3 ಸಾವಿರ ರೂ.ಗೆ ಇಳಿದಿದೆ. ಹಳೆಯ ಫೋನ್ ಸ್ವಲ್ಪ ಹಾಳಾದರೂ ಹೊಸ ಮೊಬೈಲ್ ಖರೀದಿಸುತ್ತಿದ್ದವರು ಈಗ ಹಳೆಯದ್ದರ ದುರಸ್ತಿಗೆ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಹೊಸ ಮೊಬೈಲ್ಗಳ ಮಾರಾಟ ಗಣನೀಯವಾಗಿ ಇಳಿದಿದೆ. ಸ್ಥಳೀಯ ಮೊಬೈಲ್ ಅಂಗಡಿಗಳವರ ಪ್ರಕಾರ ಒಟ್ಟು ಶೇ. 70ರಷ್ಟು ವ್ಯವಹಾರ ಕುಸಿದಿದೆ. ಪ್ರತಿ ಬಾರಿ ದೀಪಾವಳಿಯಲ್ಲಿ 1 ರಿಂದ 1.50 ಲಕ್ಷ ರೂ. ವ್ಯವಹಾರ ನಡೆಯುತ್ತಿತ್ತು. ಈ ಬಾರಿ 30-50 ಸಾವಿರ ರೂ. ಸಹ ಆಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ