ನಿವೃತ್ತಿ ಪಿಂಚಣಿ ವ್ಯಾಪ್ತಿಗೆ ಇನ್ನು ಸಣ್ಣ, ಅತಿ ಸಣ್ಣ ಕೃಷಿಕರು
60 ವರ್ಷದ ಬಳಿಕ 3 ಸಾವಿರ ರೂ. ಪಿಂಚಣಿ ಆರಂಭ ; ಪಿಎಂ ಕೆಎಂವೈ ಯೋಜನೆ
Team Udayavani, Sep 2, 2019, 5:23 AM IST
ಉಡುಪಿ: ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಉತ್ತೇಜನಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಕೃಷಿಕರ ಬವಣೆ ಹೇಳತೀರದು. ಇವರಿಗೆ ನೆರವಾಗಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ (ಪಿಎಂ ಕೆಎಂವೈ) ಎಂಬ ಪಿಂಚಣಿ ಯೋಜನೆಯನ್ನು ದೇಶ ಮಟ್ಟದಲ್ಲಿ ಜಾರಿಗೊಳಿಸಿದೆ.
ಯೋಜನೆಯು ಭಾರತೀಯ ಜೀವವಿಮಾ ನಿಗಮ ಮತ್ತು “ಕಾಮನ್ ಸರ್ವಿಸ್ ಸೆಂಟರ್ ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿ. ಸ್ಪೆಶಲ್ ಪರ್ಪಸ್ ವೆಹಿಕಲ್’ ಮೂಲಕ ಜಾರಿಗೊಳ್ಳುತ್ತಿದೆ. ಕೇಂದ್ರ ಕೃಷಿ ಸಚಿವಾಲಯದ ಸುಪರ್ದಿಯಲ್ಲಿ ಯೋಜನೆ ರೂಪುಗೊಂಡಿದೆ. ಐಡಿಬಿಐ ಬ್ಯಾಂಕ್ ಬ್ಯಾಂಕಿಂಗ್ ಸೇವೆ ಒದಗಿಸಲಿದೆ.
ಯಾರು ಅರ್ಹರು? ಯಾರು ಅನರ್ಹರು?
2019ರ ಆ. 1ಕ್ಕೆ ಅನ್ವಯವಾಗುವಂತೆ ಸಣ್ಣ ಮತ್ತು ಅತಿ ಸಣ್ಣ ರೈತರು.
ಮಾಸಿಕ ಆದಾಯ 15,000 ರೂ. ಒಳಗೆ ಇರಬೇಕು.
ನೋಂದಣಿದಾರರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು. ಐದು ಎಕ್ರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬಾರದು.
18ರಿಂದ 40 ವರ್ಷದವರೆಗಿನವರು ಯೋಜನೆಗೆಹೆಸರು ನೋಂದಾಯಿಸಬಹುದು.
ಸಂಘಟಿತ ವಲಯದಲ್ಲಿರಬಾರದು ಅಥವಾ ಭವಿಷ್ಯನಿಧಿ, ಎನ್ಪಿಎಸ್, ಇಎಸ್ಐ ಯೋಜನೆ ಯಡಿ ಸೇರಿರಬಾರದು.
ಆರ್ಥಿಕ ಸದೃಢರು, ದೊಡ್ಡ ಭೂ ಮಾಲಕರು, ಸಂಸ್ಥೆಗಳ ಭೂಮಿ ಹೊಂದಿದವರು, ಆದಾಯ ತೆರಿಗೆ ಪಾವತಿದಾರರು, ಸರಕಾರಿ ನೌಕರರಾಗಿರಬಾರದು.
ಅಟಲ್ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ ಪಡೆಯುವವರೂ ಇದಕ್ಕೆ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರಕಾರದ ಪ್ರಧಾನಮಂತ್ರಿ
ಶ್ರಮ ಯೋಗಿ ಮಾನ್-ಧನ್ ಯೋಜ ನೆಗೆ (ಪಿಎಂಎಸ್ವೈಎಂ) ಹೆಸರು ನೋಂದಾ ಯಿಸಿದ ಅಸಂಘಟಿತ ವಲಯದ ಕಾರ್ಮಿಕ ರಾಗಿರಬಾರದು. ಪಾವತಿ ಕ್ರಮ
18ರಿಂದ 40 ವರ್ಷದವರೆಗೆ ಒಟ್ಟು 23ವಯೋಮಾನದ ವರ್ಗಗಳಿಗೆ ಪ್ರತ್ಯೇಕ ದೇಣಿಗೆ ಮೊತ್ತ ನಮೂದಿಸಲಾಗಿದೆ. 18ನೆಯ ವಯಸ್ಸಿನವರು 55 ರೂ., 40ನೆಯ ವಯಸ್ಸಿನವರು 200 ರೂ. ಪಾವತಿಸಬೇಕು. ಈ ನಡುವಿನವರಿಗೆ ಪ್ರತ್ಯೇಕ ಮೊತ್ತವಿದೆ. ಇದಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಒಂದು ಬಾರಿ ಸೇರಿದರೆ 60 ವರ್ಷದವರೆಗೆ ಚಂದಾದಾರರು ಪ್ರತಿ ತಿಂಗಳು ದೇಣಿಗೆ ಮೊತ್ತವನ್ನು ಬ್ಯಾಂಕ್ ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕು. ನೋಂದಣಿಯಾದ ದಿನಾಂಕವೇ ಮುಂದಿನ ಪಾವತಿ ಕಂತಿನ ದಿನಾಂಕವಾಗಿರುತ್ತದೆ.
ನೋಂದಣಿ ಕ್ರಮ
ಚಂದಾದಾರರು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾ ಯಿಸಬೇಕು. ಕೃಷಿ ಇಲಾಖೆ, ಎಲ್ಐಸಿ ಕಚೇರಿಗಳಲ್ಲಿ ಮಾಹಿತಿ ಸಿಗುತ್ತದೆ.
ಉಳಿತಾಯ/ ಜನ್ಧನ್ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.
ಸ್ವಯಂ ಘೋಷಣೆ ಮೂಲಕ ನೋಂದಣಿ. ಆದಾಯ ಮತ್ತು ವಯಸ್ಸು ವಿವರಗಳಿಗೆ ಪ್ರತ್ಯೇಕ ದಾಖಲಾತಿ ಬೇಡ. ಕೃಷಿಕರೆನ್ನುವುದಕ್ಕೆ ಭೂದಾಖಲೆ ಬೇಕು.
ವಿದ್ಯಾರ್ಹತೆ ಮಾನದಂಡವಿಲ್ಲ.
ನೋಂದಣಿಯಾಗುವಾಗಲೇ ದೇಣಿಗೆ ಮೊತ್ತ ಬ್ಯಾಂಕ್ ಖಾತೆಯಿಂದ ಜಮೆ ಆಗಲಿದೆ. ಕಾರ್ಡ್ ಮುದ್ರಣ ವೆಚ್ಚ ಮಾತ್ರ ಸಿಎಸ್ಸಿಗಳಲ್ಲಿ ಕೊಡಬೇಕು.
ಸಣ್ಣ ಕೃಷಿಕರಿಗೆ ಲಾಭ
18ನೆಯ ವರ್ಷಕ್ಕೆ ಯೋಜನೆಗೆ ಸೇರಿ ತಿಂಗಳಿಗೆ 55 ರೂ. ಕಟ್ಟಿದರೆ ವರ್ಷಕ್ಕೆ 660 ರೂ. ಕಟ್ಟಿದಂತಾಗುತ್ತದೆ. 60ನೆಯ ವರ್ಷದವರೆಗೆ ಒಟ್ಟು 27,720 ರೂ. ಪಾವತಿಸಿದಂತಾಗುತ್ತದೆ. 40ನೆಯ ವರ್ಷದಲ್ಲಿ ಸೇರಿದರೆ ತಿಂಗಳಿಗೆ 200 ರೂ. ಕಟ್ಟಬೇಕು. 60ನೆಯ ವರ್ಷದವರೆಗೆ 48,000ರೂ. ಪಾವತಿಸಿದಂತಾಗುತ್ತದೆ. 60ನೆಯ ವರ್ಷ ದಲ್ಲಿ ತಿಂಗಳಿಗೆ 3,000 ರೂ. ಪಿಂಚಣಿ ಸಿಗುವಾಗ ಚಂದಾದಾರರು ಪಾವತಿಸಿದ ಮೊತ್ತ ಸುಮಾರು ಒಂದು ವರ್ಷದಲ್ಲಿ ಸಿಕ್ಕಿದಂತಾಗುತ್ತದೆ.
ಸಿಎಸ್ಸಿಗಳಲ್ಲಿ ನೋಂದಣಿ
ದೇಶಾದ್ಯಂತ 2006ರಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್ಸಿ) ತೆರೆಯಲಾಗಿತ್ತು. ಪ್ರಸ್ತುತ ದೇಶದಲ್ಲಿ ಸುಮಾರು ಏಳು ಲಕ್ಷ ಸಿಎಸ್ಸಿಗಳಿವೆ. ಉಡುಪಿ ಜಿಲ್ಲೆಯಲ್ಲಿ 140 ಕೇಂದ್ರಗಳಿವೆಯಾದರೂ ಸುಮಾರು 80 ಸಕ್ರಿಯವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 400 ಸಿಎಸ್ಸಿಗಳಿದ್ದು, ಸುಮಾರು 210 ಸಕ್ರಿಯವಾಗಿವೆ.
60 ವರ್ಷವಾದಾಗ 3,000 ರೂ. ಪಿಂಚಣಿ ಆರಂಭ
60 ವರ್ಷವಾದ ಬಳಿಕ ಕನಿಷ್ಠ 3,000 ರೂ. ಮಾಸಿಕ ಪಿಂಚಣಿ ಜೀವಿತದ ಕೊನೆಯವರೆಗೆ ದೊರೆಯಲಿದೆ. ಇದು ಭವಿಷ್ಯದಲ್ಲಿ ಏರಿಕೆಯಾಗಲೂಬಹುದು. ಚಂದಾದಾರ ಮೃತಪಟ್ಟರೆ ನಾಮಿನಿಗೆ ಅರ್ಧಾಂಶ ಪಿಂಚಣಿ ದೊರೆಯಲಿದೆ. 60 ವರ್ಷದೊಳಗೆ ಮೃತಪಟ್ಟರೆ ಯೋಜನೆಯನ್ನು ಮುಂದುವರಿಸಲು ನಾಮಿನಿಗೆ ಅವಕಾಶವಿದೆ. ಯೋಜನೆಯಿಂದ ನಿರ್ಗಮಿಸಿದರೆ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಒಂದು ವರ್ಷದೊಳಗೆ ಅರ್ಧಕ್ಕೆ ನಿಲ್ಲಿಸಿದಲ್ಲಿ ಮುಂದೆ ದಂಡ ಶುಲ್ಕ ಇಲ್ಲದೆ, ಒಂದು ವರ್ಷದ ಅನಂತರವಾದರೆ ಸಾಮಾನ್ಯ ದಂಡ ಶುಲ್ಕ ಪಾವತಿಸಿ ಮುಂದುವರಿಸಲು ಅವಕಾಶವಿದೆ.
ರೈತರಿಗೆ ಕೃಷಿ ಇಲಾಖೆ ಮನವಿ
ಪಿಎಂ ಕೆಎಂವೈ ಯೋಜನೆ ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಸಾಮಾಜಿಕ ಭದ್ರತೆಗಾಗಿ ರೂಪಿಸಲಾಗಿದೆ. ನಮ್ಮ ಸಣ್ಣ, ಅತಿ ಸಣ್ಣ ಕೃಷಿಕರು ಸಿಎಸ್ಸಿಗಳಲ್ಲಿ ಹೆಸರು ನೋಂದಾಯಿಸುವ ಮೂಲಕ ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು ಎಂದು ವಿನಂತಿಸುತ್ತೇವೆ.
– ಕೆಂಪೇಗೌಡ ಮತ್ತು ಸೀತಾ, ಉಡುಪಿ ಮತ್ತು ದ.ಕ. ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ