ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವ
Team Udayavani, May 17, 2019, 6:20 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವ ಮೇ 14ರಿಂದ 16ರವರೆಗೆ ನಡೆಯಿತು.
ಮೇ 14ರಂದು ವಿದ್ವಾಂಸರಿಂದ ಚಿಂತನ ಮಂಥನ ನಡೆದವು. ಮೇ 15ರಂದು ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಪರವಿದ್ಯಾಮಾನ್ಯ ಪ್ರಶಸ್ತಿಯನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕೊರ್ಲಹಳ್ಳಿ ನರಸಿಂಹಾಚಾರ್ಯರಿಗೆ ಪ್ರದಾನ ಮಾಡಿದರು.
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಪ್ರಯಾಗ ಮಠದ ಶ್ರೀ ವಿದ್ಯಾತ್ಮ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ವಿವಿಧ ಮಠಾಧೀಶರು, ಪ್ರಶಸ್ತಿ ಪುರಸ್ಕೃತರು ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಸಂಸ್ಮರಣೆ ನಡೆಸಿ ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಉಲ್ಲೇಖೀಸಿದರು.
ಪುಸ್ತಕ ಬಿಡುಗಡೆ
ವಿದ್ವಾಂಸರಾದ ಪ್ರೊ| ಹಯವದನ ಪುರಾಣಿಕರು ಬರೆದ “ಧರ್ಮರಾಜನ ಧರ್ಮನಿಷ್ಠೆ’ ಮತ್ತು ಮೈತ್ರೇಯಿ ಮೋಹನ ಆಚಾರ್ಯರು ಬರೆದ “ಸಂಚೀಕರಾಟ’ ಪುಸ್ತಕಗಳನ್ನು ಪಲಿಮಾರು ಮಠದ ತಣ್ತೀ ಸಂಶೋಧನ ಸಂಸತ್ ಪ್ರಕಟಿಸಿದ್ದು ಇದನ್ನು ಶ್ರೀಪಾದರು ಬಿಡುಗಡೆಗೊಳಿಸಿದರು.
ಇದೇ ಸಂದರ್ಭ ವೇದವ್ಯಾಸ ಜಯಂತಿ ಪ್ರಯುಕ್ತ ರಥೋತ್ಸವ ಜರಗಿತು.
ಏಕಾದಶಿ ಪ್ರಯುಕ್ತ ಜಾಗರಣೆಯನ್ನು ರಾಜಾಂಗಣದಲ್ಲಿ ನಡೆಸಲಾಯಿತು. ವಿವಿಧ ವಿದ್ವಾಂಸರಿಂದ ಶ್ರೀ ವಾದಿರಾಜರ “ಸರಸ ಭಾರತಿವಿಲಾಸ’ದ ಪ್ರವಚನ ನಡೆಯಿತು.
ಮೇ 16ರಂದು ಮಧ್ಯಾಹ್ನ ವಿಶೇಷ ಅನ್ನಸಂತರ್ಪಣೆ ಜರಗಿತು. ಅದಮಾರು ಮಠದ ಕಿರಿಯ ಶ್ರೀಪಾದರು ಪಲ್ಲ ಪೂಜೆ ನಡೆಸಿದರು. ಸಂಜೆ ಶ್ರೀವಿದ್ಯಾಮಾನ್ಯತೀರ್ಥರ ಭಾವಚಿತ್ರದ ಮೆರವಣಿಗೆ ರಥಬೀದಿಯಲ್ಲಿ ಜರಗಿ ವಿವಿಧ ಶ್ರೀಪಾದರು, ವಿದ್ವಾಂಸರಿಂದ ಪ್ರವಚನ ನಡೆಯಿತು.