ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ: ದಿವ್ಯ ಬಲಿಪೂಜೆ, ವಿಶೇಷ ಪ್ರಾರ್ಥನೆ
Team Udayavani, Jan 27, 2020, 11:09 PM IST
ಕಾರ್ಕಳ: ಸತ್ಕಾರ್ಯ ಗಳಿಲ್ಲದ ಜೀವನ ವ್ಯರ್ಥ. ಉತ್ತಮ ಕಾರ್ಯಗಳಿಂದ ಸ್ವಸ್ಥ ಸಮಾಜ ನಿರ್ಮಾಣಮಾಡಬಹುದು. ಲೋಕಕ್ಕೆ ಒಳಿತಾದಲ್ಲಿ ನಮ್ಮ ಸೇವೆ ಸಾರ್ಥಕ್ಯ ಕಾಣುವುದು ಎಂದು ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಟಿ. ಅಂತೋಣಿ ಸ್ವಾಮಿ ಹೇಳಿದರು.
ಅವರು ಜ. 27ರಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ವಾರ್ಷಿಕ ಮಹೋತ್ಸವದ ಎರಡನೇ ದಿನ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಬೊಂದೆಲ್ ಧರ್ಮಕೇಂದ್ರದ ಧರ್ಮಗುರು ವಂ| ಆ್ಯಂಡ್ರೂ ಡಿ’ಸೋಜಾ, ಉಡುಪಿ ಸಮಾಜ ಸೇವಾ ಸಂಸ್ಥೆ ಸಂಪದ ಇದರ ನಿರ್ದೇಶಕ ವಂ| ರೆಜಿನಾಲ್ಡ್ ಪಿಂಟೊ ಬಲಿಪೂಜೆ ನೆರವೇರಿಸಿದರು. ಪೂಜಾಂತ್ಯದಲ್ಲಿ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿ ದ್ದಲ್ಲದೆ, ಗುರುಗಳು ಭಕ್ತರ ಶಿರದ ಮೇಲೆ ಹಸ್ತಗಳನ್ನಿಟ್ಟು ಪ್ರಾರ್ಥಿಸಿದರು.
ವಿಶೇಷ ವ್ಯವಸ್ಥೆ
ಅಸ್ವಸ್ಥರನ್ನು ಹೊತ್ತ ವಾಹನಗಳಿಗೆ ಪುಣ್ಯಕ್ಷೇತ್ರದ ವಠಾರದೊಳಕ್ಕೆ ಹೋಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳಿಂದ ಕೆಳಗಿಳಿಯಲು ಸಾಧ್ಯವಾಗದ ಅಸ್ವಸ್ಥರಿಗೆ ಧರ್ಮಗುರುಗಳು ಸ್ಥಳಕ್ಕೇ ಹೋಗಿ ಪಾಪ ನಿವೇದನೆಯ ಸಂಸ್ಕಾರವನ್ನು ನೀಡಿದರು.
ಮೂಲ್ಕಿಯ ವಂ| ಇವಾನ್ ಗೋಮ್ಸ್, ಬೆಳ್ತಂಗಡಿಯ ವಂ| ಬೊನವೆಂಚರ್ ನಜ್ರೆತ್, ಮುಕಮಾರ್ನ ವಂ| ಲುವಿಸ್ ಡೇಸಾ ಕೊಂಕಣಿ ಭಾಷೆಯಲ್ಲಿ ಬಲಿ ಪೂಜೆ ನೆರವೇರಿಸಿದರು.ಚಿಕ್ಕಮಗಳೂರಿನ ವಂ| ಅನಿಲ್ ಪಾಯ್ಸರವರು ಕನ್ನಡ ಬಲಿಪೂಜೆ ನೆರವೇರಿಸಿದರು.
ಗಣ್ಯರ ಭೇಟಿ
ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ, ಉಡುಪಿ ಎಸ್ಪಿ ವಿಷ್ಣುವರ್ಧನ್, ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು ಸೋಮವಾರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.