ಮೆಸ್ಕಾಂ ಎಟಿಪಿ ಬಳಿಯೇ ಬೆಳಕಿಲ್ಲ
Team Udayavani, Feb 6, 2020, 5:15 AM IST
ಕುಂದಾಪುರ: ಇಲ್ಲಿನ ಎಲ್ಐಸಿ ಕಚೇರಿ ಬಳಿ ಇರುವ ಮೆಸ್ಕಾಂ ಕಚೇರಿಯ ಹೊರಗೆ ಎಟಿಪಿ ಯಂತ್ರದ ಬಳಿ ಸಂಜೆ ನಂತರ ಬೆಳಕೇ ಇರುವುದಿಲ್ಲ.
ಕಚೇರಿಯ ಹೊರಗೆ ಸಾರ್ವ ಜನಿಕರಿಗೆ ಅನುಕೂಲ ವಾಗಲು ಯಾವುದೇ ಕ್ಷಣದಲ್ಲಿ ಬಿಲ್ ಪಾವತಿಸಿ ಎಂದು ಎನಿಟೈಮ್ ಪೇ ಯಂತ್ರ ಅಳವಡಿಸಲಾಗಿದೆ. ಹಗಲು ಇಲ್ಲಿ ಸಿಬಂದಿ ಇರುತ್ತಾರೆ. ಅವರು ಬಿಲ್ ಪಾವತಿಗೆ ಸಹಕರಿಸುತ್ತಾರೆ. ಆದರೆ ಸಂಜೆಯಾಗುತ್ತಿದ್ದಂತೆಯೇ ಇಲ್ಲಿ ಕತ್ತಲಾವರಿಸುತ್ತದೆ. ಕತ್ತಲಾದರೆ ಬೆಳಕಿನ ವ್ಯವಸ್ಥೆಯೇ ಇಲ್ಲ.
ಮೆಸ್ಕಾಂ ಹೊರಗಡೆಯೇ ಬೆಳಕಿಲ್ಲ ಎಂದು ಜನ ಶಪಿಸುವಂತಾಗಿದೆ. ಬೆಳಕೂ ಇಲ್ಲ ಅಷ್ಟೇ ಅಲ್ಲ ಸಿಸಿಟಿವಿ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಹಣ ಹಿಡಿದುಕೊಂಡು ಪಾವತಿಸಲು ಬರುವ ಗ್ರಾಹಕರಿಗೆ ಒಂಥರಾ ಅಭದ್ರತೆ ಕಾಡಲಾರಂಭಿಸುತ್ತದೆ. ಅನೇಕರು ಸಂಜೆ ಕಚೇರಿ ಮುಗಿಸಿ ಮನೆಗೆ ಹೋಗುವ ಮುನ್ನ,ವಿದ್ಯುತ್ ಬಿಲ್ ಕಟ್ಟದೇ ಬಾಕಿಯಾಗಿ ಕಡಿತವಾಗುವುದು ಬೇಡ ಎಂದು ಹಣವನ್ನು ಯಂತ್ರದ ಮೂಲಕ ಪಾವತಿಸಲು ಬಂದರೆ ಮಬ್ಬುಗತ್ತಲು. ಇದರಿಂದ ಭೀತಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.