ಇಂದು ಮಹಾ ಅನ್ನಸಂತರ್ಪಣೆ
40 ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ
Team Udayavani, Jan 18, 2020, 6:30 AM IST
ಉಡುಪಿ: ಅದಮಾರು ಪರ್ಯಾಯೋತ್ಸವದ ಅಂಗವಾಗಿ ಜ.18ರಂದು ಮಹಾ ಅನ್ನಸಂತರ್ಪಣೆ ನಡೆಯಲಿದ್ದು, 40 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.
ಇದಕ್ಕಾಗಿ ನಸುಕಿನ 3 ಗಂಟೆಗೆ ಅಡುಗೆ ಆರಂಭವಾಗುತ್ತದೆ. ರಾಮ ಮತ್ತು ಲಕ್ಷ್ಮಣ ಎಂಬ ಎರಡು ಬೃಹತ್ ತಾಮ್ರದ ಪಾತ್ರೆಗಳಿದ್ದು, ಇವುಗಳಲ್ಲಿ ಸಾರು ಮತ್ತು ಸಾಂಬಾರು ತಯಾರಿಸಲಾಗುತ್ತದೆ. ಭೋಜನದಲ್ಲಿ ಉಪ್ಪಿನಕಾಯಿ, ಪಲ್ಯ, ಅನ್ನ, ಸಾರು, ಮಟ್ಟುಗುಳ್ಳ ಸಾಂಬಾರು, ಗೋಧಿ ಪಾಯಸ, ಲಾಡು, ಗೋಧಿ ಬರ್ಫಿ, ಅಕ್ಕಿ ವಡೆ, ಮಜ್ಜಿಗೆ ಇರಲಿದೆ. ಊಟಕ್ಕೆ ಬಫೆ ಮತ್ತು ಟೇಬಲ್ ವ್ಯವಸ್ಥೆ ಇರಲಿದ್ದು, ಮಧ್ಯಾಹ್ನ 12 ಗಂಟೆಯ ಅನಂತರ ವಿತರಣೆಯಾಗಲಿದೆ.
ಶುಕ್ರವಾರ ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ 35 ಸಾವಿರಕ್ಕೂ ಮಿಕ್ಕಿದ ಜನರು ಶ್ರೀಕೃಷ್ಣ ಪ್ರಸಾದ ಸೇವಿಸಿದ್ದರು. ಪಲಿಮಾರು ಶ್ರೀಗಳ ಅಭಿನಂದನ ಕಾರ್ಯಕ್ರಮದ ಅಂಗವಾಗಿ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗ ಭಕ್ತರಿಗೆ ಭೋಜನದ ವ್ಯವಸ್ಥೆ ಕಲ್ಪಿಸಿತ್ತು.
ಕೃಷ್ಣ ಮಠ ಪಾರ್ಕಿಂಗ್ ಪ್ರದೇಶದ ಬಳಿಯ ಸುಮಾರು 1.5 ಎಕರೆ ಸ್ಥಳದ “ಅನ್ನಕೃಷ್ಣ’ ಛತ್ರದಲ್ಲಿ ಭಕ್ತರಿಗೆ ಸಂಜೆ 7ರಿಂದ ರಾತ್ರಿ 11.30ರ ವರೆಗೆ ಸುಮಾರು 35 ಸಾವಿರ ಭಕ್ತರು ಕೃಷ್ಣ ಪ್ರಸಾದ ಸ್ವೀಕರಿಸಿದರು. ಅನ್ನ, ಸಾಂಬಾರು, ಪಾಯಸ, ಮಜ್ಜಿಗೆ ಇತ್ತು. ಪರ್ಯಾಯದ ಅಂಗವಾಗಿ ಸುಮಾರು 2,500 ಸ್ವಯಂ ಸೇವಕರು ವಿವಿಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಊಟದ ವೇಳೆ ಸ್ಟೀಲ್ ಲೋಟದಲ್ಲಿ ಕುಡಿಯುವ ನೀರು ವಿತರಿಸಲಾಯಿತು.