ಅಳ್ವೆಕೋಡಿ ಸಿಹಿ ಈರುಳ್ಳಿಗೆ ಬಹುಬೇಡಿಕೆ
Team Udayavani, Apr 27, 2022, 10:56 AM IST
ಕುಮಟಾ: ಬೇಸಿಗೆ ಬಂತೆಂದರೆ ತಾಲೂಕಿನ ಅಳ್ವೆಕೋಡಿಯಿಂದ ಹಂದಿಗೋಣ ವರೆಗಿನ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಸಾಲು ಸಾಲು ಈರುಳ್ಳಿ ಗೊಂಚಲುಗಳು ಶೃಂಗರಿಸಿಟ್ಟ ರೀತಿ ಕಾಣುತ್ತದೆ. ಇದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಬಹು ಬೇಡಿಕೆಯ ಅಳ್ವೆಕೋಡಿ ಸಿಹಿ ಈರುಳ್ಳಿ.
ಜಿಲ್ಲೆಯ ಪ್ರವಾಸಕ್ಕೆಂದು ಬಂದವರಿಗೆ ಈರುಳ್ಳಿಯನ್ನು ಹೀಗೂ ಮಾರುತ್ತಾರಲ್ಲ ಎನ್ನುವ ಅಚ್ಚರಿ ಉಂಟಾಗುವುದು ಸಹಜ. ಇವು ಗದ್ದೆಯಿಂದ ಆಗ ತಾನೇ ಕಿತ್ತು ತಂದಿದ್ದು.
ಈರುಳ್ಳಿಯ ಒಣಗಿದ ಎಲೆಯನ್ನೆಲ್ಲ ಸೇರಿಸಿ ಜಡೆಯಂತೆ ಹೆಣೆದು ತಯಾರಿಸುವ ಕಲಾತ್ಮಕ ಗುತ್ಛ ನೋಡುವುದೇ ಸೊಗಸು. ಇದು 5 ರಿಂದ 10 ಕೆ.ಜಿ. ವರೆಗೂ ತೂಗುತ್ತವೆ. ವರ್ಷಗಳಿಂದ ಬಳಸಿ ಇದರ ರುಚಿ ಗೊತ್ತಿದ್ದವರು ಈ ಸೀಸನ್ನಿನಲ್ಲಿ ತಮ್ಮ ಪರಿಚಿತರ ಅಂಗಡಿ ಬಳಿ ತಕ್ಷಣ ಗಾಡಿ ನಿಲ್ಲಿಸಿ ಕಿಲೊಗಟ್ಟಲೆ ಈರುಳ್ಳಿ ಖರೀದಿ ಮಾಡಿಕೊಂಡು ಹೊಗುತ್ತಾರೆ.
ಅಪರೂಪದ ರುಚಿ ಇದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಭಟ್ಕಳದಲ್ಲಿ ಈರುಳ್ಳಿ ಬೆಳೆದರೂ ಹೆದ್ದಾರಿಯಂಚಿಗೆ ರಾಶಿ ಹಾಕಿಟ್ಟುಕೊಂಡು ತಿಂಗಳುಗಟ್ಟಲೆ ಮಾರಾಟ ಮಾಡುವಷ್ಟು ಬೆಳೆಯುವುದು ಕುಮಟಾದ ಅಳ್ವೆಕೋಡಿ, ಹಂದಿಗೋಣ, ವನ್ನಳ್ಳಿ ಭಾಗದಲ್ಲಿ ಮಾತ್ರ. ಹೆದ್ದಾರಿಯಿಂದ ಕೇವಲ ಒಂದೆರಡು ಕಿಮೀ ಅಂತರದಲ್ಲಿ ಸಮುದ್ರ ಇರುವುದರಿಂದ ಸಹಜವಾಗಿ ಇಲ್ಲಿಯ ಗದ್ದೆಯ ಉಸುಕು ಮಿಶ್ರಿತ ಮಣ್ಣು ಈರುಳ್ಳಿ ಬೇಸಾಯಕ್ಕೆ ಪ್ರಶಸ್ತವಾಗಿದೆ. ಜೊತೆಗೆ ಈ ಬೆಳೆಗೆ ನೂರಾರು ವರ್ಷಗಳ ಇತಿಹಾಸವಿದೆ.
ಮುಂಗಾರು ಬತ್ತದ ಕೊಯಿಲು ಮುಗಿಯುತ್ತಿದ್ದಂತೆ ರೈತರು ಈರುಳ್ಳಿ ಬೇಸಾಯಕ್ಕೆ ಅಣಿಯಾಗುತ್ತಾರೆ. ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಬೇಸಿಗೆಯಲ್ಲಿ ತಯಾರಿ ಮಾಡಿಟ್ಟುಕೊಂಡ ಬೀಜವನ್ನು ಮಡಿಯಲ್ಲಿ ಹಾಕಿ ಸಸಿ ತಯಾರಿಸುತ್ತಾರೆ.
ಈ ಈರುಳ್ಳಿ ಬೀಜ ತಯಾರಿಸುವುದೂ ಅತ್ಯಂತ ವಿಶಿಷ್ಟ ಹಾಗೂ ವಿಚಿತ್ರ ಪದ್ಧತಿ. ಈರುಳ್ಳಿ ಹೂಗಳಿಂದ ಸಂಗ್ರಹಿಸಿದ ಬೀಜವನ್ನು ಬೇಸಿಗೆಯಲ್ಲಿ ಚೆನ್ನಾಗಿ ಒಣಗಿಸಿ ನಂತರ ಅದಕ್ಕೆ ಬೆಳಕು ಸೋಕದಂತೆ ಕಪ್ಪು ಬಟ್ಟೆಯಲ್ಲಿ ಸುತ್ತಿ ಮಣ್ಣಿನ ಪಾತ್ರೆಯೊಳಗೆ ಸಂರಕ್ಷಣೆ ಮಾಡಿಡುತ್ತಾರೆ. ಮಡಿ ತಯಾರಿಸಿದ ನಂತರವೇ ಬೀಜ ಹೊರತೆಗೆಯುತ್ತಾರೆ.
ನಾಟಿ ಮಾಡಿದ ಸಸಿಗಳಿಗೆ ಧಕ್ಕೆಯಾಗದಂತೆ ನಿತ್ಯ ಬೆಳಗಿನ ಜಾವಕ್ಕೆ ಎದ್ದು ಕೊಡದಲ್ಲಿ ಮೆಲ್ಲಗೆ ನೀರುಣಿಸುವುದೇ ದೊಡ್ಡ ಸಾಹಸ. ಈರುಳ್ಳಿ ಕೀಳುವವರೆಗೂ ರೈತನಿಗೆ ಸರಿಯಾಗಿ ನಿದ್ದೆಯೂ ಇರುವುದಿಲ್ಲ.
ಗದ್ದೆಯಲ್ಲಿ ಬೆಳೆದ ಈರುಳ್ಳಿಗೆ ಪಕ್ಕದ ಹೆದ್ದಾರಿ ಬದಿಯೇ ದೊಡ್ಡ ಮಾರುಕಟ್ಟೆ. ಹೀಗಾಗಿ ಇದನ್ನು ಮಾರಲು ಸಮಸ್ಯೆಯೇ ಇಲ್ಲ. ಮಾರ್ಚ್ನಿಂದ ಏಪ್ರಿಲ್ ಮುಗಿಯುವ ತನಕವೂ ಅಳ್ವೆಕೋಡಿಯಿಂದ ಹಂದಿಗೋಣ ವರೆಗಿನ ಸುಮಾರು ಮೂರು ಕಿ.ಮೀ. ಹೆದ್ದಾರಿ ಬದಿಯಲ್ಲಿ ಎಲ್ಲಿ ನೋಡಿದರೂ ಈರುಳ್ಳಿಯೇ ಕಂಗೊಳಿಸುತ್ತದೆ.
ಇಲ್ಲಿ ಮಧ್ಯವರ್ತಿಗಳ ಜೊತೆ ಕೆಲ ರೈತರೂ ಹೆದ್ದಾರಿ ಬದಿಗಿಟ್ಟು ಈರುಳ್ಳಿ ಮಾರಾಟ ಮಾಡುತ್ತಾರೆ. ಹಾಲಿ ಇದರ ಬೆಲೆ ಕಿಲೋಗೆ 75 ರಿಂದ 80 ರೂ. ಇದೆ. ಮಳೆಗಾಲದಲ್ಲಿ ಇದು ಹಾಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಗ್ರಹಣೆಗೆ ರೈತರು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಜೊತೆಗೆ ಇತ್ತೀಚೆಗಿನ ವ ರ್ಷಗಳಲ್ಲಿ ಕಾಣಿಸಿಕೊಂಡ ಹಾವು ಸುಳಿ ರೋಗದಿಂದಾಗಿ ಈರುಳ್ಳಿ ಬೆಳೆಯನ್ನು ಬೆಳೆಯವುದು ಕಷ್ಟ ಎನ್ನುತ್ತಾರೆ ಬೆಳೆಗಾರರು. ಇನ್ನು ಹಲವೆಡೆಗಳಲ್ಲಿ ಅದನ್ನು ವ್ಯವಸ್ಥಿತವಾಗಿ ಬೆಂಕಿಯ ಧಗೆ ತಾಗುವ ಒಲೆಯ ಮೇಲ್ಭಾಗದಲ್ಲಿ ಕಟ್ಟಿ ನೇತುಹಾಕಿ ಸಂಗ್ರಹಿಸಿಟ್ಟುಕೊಂಡು ವರ್ಷವಿಡೀ ಬಳಸುತ್ತಾರೆ.
ಹಾವು ಸುಳಿ ರೋಗ: ಕಳೆದ ಕೆಲ ವರ್ಷಗಳಿಂದ ಸಸಿ ಒಣಗಿ ಹಾವು ಸುಳಿ ರೋಗ ಈರುಳ್ಳಿಗೆ ತಗುಲಿ ಬೆಳೆ ಸಾಕಷ್ಟು ಪ್ರಮಾಣ ಕುಂಠಿತವಾಗುತ್ತಿದೆ. ಸಾವಯವ ಗೊಬ್ಬರದ ಬಳಕೆಯ ಪ್ರಮಾಣ ಕಡಿಮೆಯಾಗಿ ರೋಗ ತಡೆಯುವ ಶಕ್ತಿ ಕುಗ್ಗಿದೆ. ಸಾವಯವ ಗೊಬ್ಬರ ಬಳಕೆ ಹಾಗೂ ಸರಿಯಾದ ಬೀಜೋಪಚಾರದಿಂದ ಮತ್ತೆ ಅಂಥ ಶಕ್ತಿ ಪಡೆಯಬಹುದು ಎಂದು ಧಾರವಾಡ ಕೃಷಿ ವಿವಿ ತಜ್ಞರು ತಿಳಿಸಿದ್ದಾರೆ. ನೂರಾರು ವರ್ಷಗಳ ಪರಂಪರೆಯ ಅಳ್ವೆಕೋಡಿ ಈರುಳ್ಳಿಯ ಬೆಡಗು, ಬೇಡಿಕೆ, ರುಚಿ ಉಳಿಸಿಕೊಳ್ಳಲು ಅದರ ಸಾಂಪ್ರದಾಯಿಕ ಕೃಷಿಯೊಂದೇ ಏಕೈಕ ಮಾರ್ಗವಾಗಿದೆ.
ಹೊರ ರಾಜ್ಯಗಳಲ್ಲೂ ಬೇಡಿಕೆ: ತಾಲೂಕಿನ ಅಳ್ವೆಕೊಡಿಯ ಈರುಳ್ಳಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ಸೇರಿದಂತೆ ಹಲವೆಡೆಗಳಿಂದ ಬೇಡಿಕೆ ಇದೆ. ರಾಜ್ಯದಲ್ಲಿಯೂ ಇದರ ಬೇಡಿಕೆ ಹೆಚ್ಚಿದೆ.
-ಮಂಜುನಾಥ ದೀವಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ