ಹೆದ್ದಾರಿ ಮೇಲ್ಸೇತುವೆ ಹೋರಾಟ ಸಮಿತಿ ರಚನೆ
Team Udayavani, Aug 25, 2019, 11:45 AM IST
ಹೊನ್ನಾವರ: ಪಟ್ಟಣದ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಲು ಹೋರಾಟ ಸಮಿತಿ ರಚಿಸಲಾಯಿತು.
ಹೊನ್ನಾವರ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೇಲುಸೇತುವೆ ನಿರ್ಮಿಸಿ ಜನರ ಪ್ರಾಣ ಉಳಿಸಿ ನಮ್ಮ ಬದುಕು ನಮಗಿರುವಂತೆ ಮಾಡಿ ಎಂದು ಆಗ್ರಹಿಸಿ ಹಿರಿಯ ಸಾಮಾಜಿಕ ಕಾರ್ಯಕರ್ತ ಎಂ.ಜಿ. ನಾಯ್ಕ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಸಾಮಾಜಿಕ ಸಂಘಟನೆಗಳು ಹೋರಾಟ ಸಮಿತಿ ರಚಿಸಲಾಯಿತು.
ಗೋವಾ-ಕುಂದಾಪುರ ಚತುಷ್ಪಥ ಹೆದ್ದಾರಿ ವಿಸ್ತರಣೆ ಕಾರ್ಯ ಆರಂಭಗೊಂಡ ದಿನಗಳಿಂದ ಪಟ್ಟಣದಲ್ಲಿ ಹಾದು ಹೋದ ಹೆದ್ದಾರಿಯಲ್ಲಿ ಜನ, ವಾಹನ ದಟ್ಟಣೆ ಅಧಿಕವಾಗುತ್ತಿದೆ. ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಆದ್ದರಿಂದ ಪಟ್ಟಣದಲ್ಲಿ ಮೇಲುಸೇತುವೆ ಅವಶ್ಯ ಎಂದು ವಿವಿಧ ಸಾರ್ವಜನಿಕ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ಮನವಿ ನೀಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆ ಕಂಪನಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಹೆದ್ದಾರಿ ವಿಸ್ತರಣೆ ಮುಗಿಯದೇ ಇದ್ದರೂ ಟೋಲ್ಗೇಟ್ ಆರಂಭಿಸಲು ಮುಂದಾಗಿದೆ. ಇದರಿಂದ ಜನಸಾಮಾನ್ಯರಿಗೆ ಕಿರಿ ಕಿರಿ ಉಂಟಾಗಲಿದೆ ಎಂದು ಆರೋಪಿಸಲಾಗಿದೆ.
ಹೋರಾಟ ಸಮಿತಿ ಗೌರವ ಅಧ್ಯಕ್ಷರಾಗಿ ಉದ್ಯಮಿ ಜೆ.ಟಿ. ಪೈ, ಅಧ್ಯಕ್ಷರಾಗಿ ಎಂ.ಎನ್. ಸುಬ್ರಹ್ಮಣ್ಯ, ಸಂಚಾಲಕರಾಗಿ ಲೋಕೇಶ ಮೇಸ್ತ, ಕಾರ್ಯದರ್ಶಿಯಾಗಿ ರಘು ಪೈ, ಖಜಾಂಚಿಯಾಗಿ ಸಂಜಯ ಕಾಮತ್, ಕಾನೂನು ಸಲಹೆಗಾರರಾಗಿ ನಾಗರಾಜ ಕಾಮತ್ ಹಾಗೂ ಸದಸ್ಯರಾಗಿ ವಿವಿಧ ಸಂಘಟನೆ ಪ್ರಮುಖರಾದ ಕೆ.ಸಿ. ವರ್ಗೀಸ್, ಬಶೀರ್ ಸಾಬ್, ಯೋಗೇಶ ರಾಯ್ಕರ್, ರಾಜು ಭಂಡಾರಿ, ಸುಬ್ರಾಯ ಗೌಡ, ಜಗದೀಪ ತೆಂಗೇರಿ, ಸೂರಜ್ ನಾಯ್ಕ, ಕೆ.ವಿ. ನಾಯ್ಕ, ಕೃಷ್ಣಾ ನಾಯ್ಕ ಹೆಗಡೆ, ದಿನೇಶ ಕಾಮತ್, ಸುರೇಶ ಹೊನ್ನಾವರ, ಮಹೇಶ ಮೇಸ್ತ, ಉಮೇಶ ಮೇಸ್ತ, ವಿಜು ಕಾಮತ್, ಸಂಜು ಶೇಟ್, ಎಚ್.ಆರ್. ಗಣೇಶ, ಮಹೇಶ ಕಲ್ಯಾಣಪುರ್, ಸುರೇಶ ಶೇಟ್, ಅಂತೋನಿ ಲೋಪಿಸ್ ಅವರನ್ನು ನೇಮಕ ಮಾಡಲಾಯಿತು. ತ್ವರಿತವಾಗಿ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳನ್ನು ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಲು ದಿನ ನಿಗದಿಪಡಿಸಲು ತೀರ್ಮಾನಿಸಲಾಯಿತು.