ಟ್ಯಾಕ್ಸಿ ಚಾಲಕ-ಮಾಲಕರ ಸಂಘದಿಂದ ರಸ್ತೆ ದುರಸ್ತಿ
Team Udayavani, Oct 22, 2019, 2:24 PM IST
ಕುಮಟಾ: ಮಣಕಿ ಮೈದಾನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಬೃಹತ್ ಹೊಂಡವನ್ನು ಸೋಮವಾರ ತಾಲೂಕಿನ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸಿಮೆಂಟ್ ಹಾಕಿ ದುರಸ್ತಿಗೊಳಿಸಲಾಯಿತು.
ನಂತರ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ನವೀನ ನಾಯ್ಕ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಬೃಹತ್ ಹೊಂಡಗಳನ್ನು ದುರಸ್ತಿಗೊಳಿಸುವಂತೆ ಐಆರ್ಬಿ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಹಲವು ಬಾರಿ ವಿನಂತಿಸಿಕೊಳ್ಳಲಾಗಿತ್ತು. ಆದರೆ ಅಧಿಕಾರಿಗಳು ಸಂಪೂರ್ಣ ಕಾಮಗಾರಿ ಮುಗಿಸದೇ, ಕಾಟಾಚಾರಕ್ಕೆ ದುರಸ್ತಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮುಚ್ಚಿದ ಹೊಂಡಗಳು ಈಗಲೇ ಬಾಯಿ ತೆರೆದು ನಿಂತಿದೆ. ಟ್ಯಾಕ್ಸಿ ನಿಲ್ದಾಣದ ಎದುರಿನಲ್ಲಿ ಬಿದ್ದಿರುವ ಬೃಹತ್ ಹೊಂಡವನ್ನು ಟ್ಯಾಕ್ಸಿ ಚಾಲಕ ಮತ್ತು ಮಾಲಕರು ಸ್ವಂತ ಹಣದಿಂದ ದುರಸ್ತಿ ಮಾಡಿಕೊಂಡಿದ್ದೇವೆ. ಇದೇ ಹೊಂಡದಲ್ಲಿ ಕೆಲವು ಬೈಕ್ ಸವಾರರು ಬಿದ್ದು ಅಪಘಾತ ಮಾಡಿಕೊಂಡಿದ್ದಾರೆ. ಹೊಂಡದಲ್ಲಿರುವ ಕಲ್ಲುಗಳು ಸಿಡಿದು ವಾಹನಗಳ ಗ್ಲಾಸು ಒಡೆದಿರುವ ಘಟನೆಯೂ ನಡೆದಿದೆ.
ಶೀಘ್ರದಲ್ಲಿ ಸಂಬಂಧಿಸಿದ ಇಲಾಖೆ ರಾಷ್ಟ್ರೀಯ ಹೆದ್ದಾರಿ ದುರಸ್ತಿ ನಡೆಸದಿದ್ದಲ್ಲಿ ಟ್ಯಾಕ್ಸಿ ಚಾಲಕ, ಮಾಲಿಕರು ಸಾರ್ವಜನಿಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ದುರಸ್ತಿ ಕಾರ್ಯದಲ್ಲಿ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರ ಸಂಘದ ನಿತ್ಯಾನಂದ ನಾಯ್ಕ, ಕೀರ್ತಿಕಿರಣ, ನಾಗರಾಜ ಹರಿಕಂತ್ರ, ರಾಘು ಮೊಗೇರ, ಪ್ರಶಾಂತ ಸಣ್ಮನೆ, ಶ್ರೀಕಾಂತ ಮಡಿವಾಳ, ಅಬ್ದುಲ್ ಖಾಜಿ, ಇತರರಿದ್ದರು.