ನೀರಾವರಿ ಅಲೆಯಲ್ಲಿ ಕಾಂಗ್ರೆಸ್ಗೆ ಬಲ
•ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಗೆ ಹಿನ್ನಡೆ ಭೀತಿ •ಮೋದಿ ಅಲೆಗಿಂತ ಅಭಿವೃದ್ಧಿಗೆ ಒತ್ತು
Team Udayavani, Apr 26, 2019, 10:38 AM IST
ವಿಜಯಪುರ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿದಿದ್ದು, ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮಿತ್ರ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದೆ.
ಗೃಹ ಸಚಿವ ಎಂ.ಬಿ. ಪಾಟೀಲ ಅವರು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಬಾರದಿರುವುದು ಕಾಂಗ್ರೆಸ್ ಬೆಂಬಲಿತ ಮಿತ್ರ ಪಕ್ಷಗಳ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಬಲ ತಂದು ಕೊಡುವ ವಿಶ್ವಾಸ ವ್ಯಕ್ತವಾಗಿದೆ.
ವಿಜಯಪುರ ಕ್ಷೇತ್ರದಲ್ಲಿ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಶೇ.67.33ಮತದಾನವಾಗಿದ್ದು, ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾನ ಆಗಿರುವ ಕ್ಷೇತ್ರ ಎಂಬ ಹಿರಿಮೆ ಪಡೆದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.64.49ರಷ್ಟಿದ್ದ ಮತದಾನ ಈ ಬಾರಿ ಶೇ.2.84 ಹೆಚ್ಚಾಗಿದ್ದು, ಮಿತ್ರಪಕ್ಷಗಳ ಅಭ್ಯರ್ಥಿಗೆ ಅನುಕೂಲ ಎಂದು ವಿಶ್ಲೇಷಿಸಲಾಗುತ್ತದೆ. ಹೀಗಾಗಿ ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಇಲ್ಲವೇ ಇಲ್ಲ. ಇಲ್ಲೇನಿದ್ದರೂ ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ನೇರ ಸ್ಪರ್ಧೆ ಇದೆ. ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮಿತ್ರ ಪಕ್ಷಗಳ ಜೆಡಿಎಸ್ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಕಣದಲ್ಲಿದ್ದರೂ ಕಾಂಗ್ರೆಸ್ ಬಲದಿಂದ ಜೆಡಿಎಸ್ ಈ ಕ್ಷೇತ್ರದಲ್ಲಿ ಕನಿಷ್ಠ 20 ಸಾವಿರ ಮತಗಳ ಅಂತರ ದೊರೆಯಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಬಬಲೇಶ್ವರ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಗೃಹ ಸಚಿವ ಎಂ.ಬಿ. ಪಾಟೀಲ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ಈ ಅವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿರುವ ನೀರಾವರಿ ಯೋಜನೆಗಳು ಇದೀಗ ಕೆರೆಗಳಿಗೆ ನೀರು ತುಂಬಿಸುತ್ತಿದ್ದು, ಅಂತರ್ಜಲ ಹೆಚ್ಚಳವಾಗಿದೆ. ಇದರಿಂದ ಅನ್ನದಾತರ ಜಮೀನನ್ನು ಹಸಿರು ಮಾಡಿಸಿದ್ದು, ಚುನಾವಣೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತದೆ. ಈ ಚುನಾವಣೆಯಲ್ಲೂ ಈ ಭಾಗದಲ್ಲಿ ಮೋದಿ ಅಲೆಗಿಂತ ಬಿಜೆಪಿ ಅಭ್ಯರ್ಥಿಯ ವಿರೋಧಿ ಅಲೆ, ಕಾಂಗ್ರೆಸ್ ಪಾಲಿಗೆ ನೀರಾವರಿಯ ಅಲೆಯೇ ಹೆಚ್ಚು ಕೆಲಸ ಮಾಡಿದೆ ಎಂಬ ವಿಶ್ಲೇಷಣೆ ನಡೆದಿದೆ.
ಬಬಲೇಶ್ವರ ಕ್ಷೇತ್ರ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಭದ್ರಕೋಟೆ. ಇದೀಗ ನೀರಾವರಿ ಅಲೆ ಹೆಚ್ಚಿರುವ ಕಾರಣ ಹಾಗೂ ಎದುರಾಳಿ ಬಿಜೆಪಿ ಅಭ್ಯರ್ಥಿ ವಿರೋಧಿ ಅಲೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಮಾರು ಸುಮಾರು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರ ನೀಡಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ಅತ್ಮವಿಶ್ವಾಸದಿಂದ ಹೇಳುತ್ತಾರೆ.
ಬಿಜೆಪಿ ಈ ಕ್ಷೇತ್ರದಲ್ಲಿ ಬಲಿಷ್ಠ ಪ್ರತಿರೋಧ ನೀಡುವ ಸಾಮರ್ಥ್ಯ ಹೊಂದಿದ್ದರೂ ಹಾಲಿ ಸಂಸದ-ಕೇಂದ್ರ ಸಚಿವ ರಮೇಶ ಜಿಗಜಿಣಗಿ ವರ್ತನೆಗೆ ಸ್ವಪಕ್ಷೀಯರಲ್ಲೇ ಅಸಮಾಧಾನ ಮೂಡಿಸಿದೆ. ಮೋದಿ ಅವರ ಅಲೆಯಲ್ಲಿ ನಾನು ಹೇಗಾದರೂ ಗೆದ್ದೇ ಗೆಲ್ಲುತ್ತೇನೆಂಬ ಅತಿಯಾದ ಆತ್ಮವಿಶ್ವಾಸ, ಮೋದಿ ಮುಖ ನೋಡಿ ವೋಟ್ ಹಾಕಿ ಎಂದು ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿದ ರೀತಿ ಸ್ಥಳೀಯ ಮಟ್ಟದಲ್ಲಿ ಭಾರಿ ಪರಿಣಾಮ ಬೀರಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಈ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರಮೇಶ ಜಿಗಜಿಣಗಿ ಕೆಲಸ ಮಾಡಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಸ್ವಯಂಕೃತ ಅಪರಾಧದಿಂದ ಹಿನ್ನಡೆ ಅನುಭವಿಸುವಂತಾಗುತ್ತದೆ ಎಂದು ಬಬಲೇಶ್ವರದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಗಲಕೋಟೆ ವಿಶ್ಲೇಷಿಸುತ್ತಾರೆ.
ಒಂದೆಡೆ ಬಿಜೆಪಿ ಅಭ್ಯರ್ಥಿಯ ಅಧಿಕಾರ ವಿರೋಧಿ ಅಲೆ ಹಾಗೂ ಮತ್ತೂಂದೆಡೆ ಕ್ಷೇತ್ರದಲ್ಲಿ ಎಲ್ಲೂ ಪ್ರಚಾರಕ್ಕೆ ಬಾರದಿರುವುದು ಬಿಜೆಪಿಗೆ ಹಿನ್ನಡೆ ಆಗುವ ನಿರೀಕ್ಷೆ ಇದೆ. ಇದರ ಹೊರತಾಗಿಯೂ ಬಿಜೆಪಿ ಸಾಂಪ್ರದಾಯಿಕ ಮತಗಳು, ಮೋದಿ ಅಲೆಯಿಂದ ಅಭ್ಯರ್ಥಿಯ ಮುಖವನ್ನು ನೋಡದೇ ಮೋದಿಗಾಗಿ ಕ್ಷೇತ್ರದಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಮಂಡಲದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಷ್ಠೆಗಾಗಿ ದುಡಿದಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತ ಸ್ವಾಭಿಮಾನ ದುಡಿಮೆಗಾಗಿ ಬಿಜೆಪಿ ಈ ಕ್ಷೇತ್ರದಲ್ಲಿ ಕನಿಷ್ಟ 20 ಸಾವಿರ ಮುನ್ನಡೆ ಪಡೆಯುತ್ತೇವೆ ಎಂದು ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಮತ್ತೂಂದೆಡೆ ಜೆಡಿಎಸ್ ಅಭ್ಯರ್ಥಿ ಕಾರ್ಯಕರ್ತರನ್ನು ಸಂತೃಪ್ತಿ ರೀತಿಯಲ್ಲಿ ನೋಡಿಕೊಂಡರೂ ಬಿಜೆಪಿ ಅಭ್ಯರ್ಥಿ ಕೈ ಬಿಚ್ಚದೇ ಕುಳಿತುಕೊಂಡರು ಎನ್ನಲಾಗಿದೆ. ಇದು ಕೂಡ ಬಿಜೆಪಿಗಿಂತ ಮಿತ್ರ ಪಕ್ಷಗಳ ಓಟಕ್ಕೆ ಹೆಚ್ಚು ವೇಗ ನೀಡಲು ಸಹಕಾರಿಯಾಗಲಿದೆ ಎಂಬುದು ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯ ವಿಷಯ.
ಮೋದಿ ಅಲೆಯಲ್ಲಿ ಗೆಲ್ಲುತ್ತೇನೆಂಬ ಹುಂಬ ವಿಶ್ವಾಸದಲ್ಲಿ ನಮ್ಮ ಅಭ್ಯರ್ಥಿ ಕ್ಷೇತ್ರದಲ್ಲಿ ಪ್ರಚಾರಕ್ಕೂ ಬಾರದೇ ಹಣ ಖರ್ಚು ಮಾಡಲು ಹಿಂದೇಟು ಹಾಕಿದರು. ಆದರೂ ಕಾರ್ಯಕರ್ತರು ಚೌಕಿದಾರರಂತೆ ಕೆಲಸ ಮಾಡಿದ್ದು ಮೋದಿ ಮುಖ ನೋಡಿ ಓಟು ಹಾಕಿದ್ದಾರೆ, ಹಾಕಿಸಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಮತ ಬಂದರೆ ಮೋದಿ ಅಲೆ ಹಾಗೂ ಚೌಕಿದಾರ ಕಾರ್ಯಕರ್ತರ ಪ್ರಾಮಾಣಿಕ ಕೆಲಸವೇ ಹೊರತು ಇದರಲ್ಲಿ ಅಭ್ಯರ್ಥಿಯ ಹೆಚ್ಚುಗಾರಿಕೆ ಏನಿಲ್ಲ. ಒಂದೊಮ್ಮೆ ಸೋತರೆ ಜಿಗಜಿಣಗಿ ಅವರ ಹವಲು ಸ್ವಯಂಕೃತ ಅಪರಾಧ ಕಾರಣ.
•ಮಲ್ಲಿಕಾರ್ಜುನ ಬಾಗಲಕೋಟೆ,
ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಬಲೇಶ್ವರ ಮಂಡಲ
ಬಬಲೇಶ್ವರ ಕ್ಷೇತ್ರದಲ್ಲಿ ಹಾಲಿ ಸಂಸದ-ಕೇಂದ್ರ ಸಚಿವ ಜಿಗಜಿಣಗಿ ಅವರ ಆಡಳಿತ ವಿರೋಧಿ ಅಲೆಗಿಂತ ಪ್ರಚಾರ ಮಾಡುವ ಅಗತ್ಯವೇ ಇಲ್ಲದಂತೆ ಜನ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದ್ದಾರೆ. ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ವಿಷಯದಲ್ಲಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಗೃಹ ಸಚಿವ ಎಂ.ಬಿ. ಪಾಟೀಲರ ಪರಿಶ್ರಮದ ಫಲವಾಗಿ ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿ ಕನಿಷ್ಟ 30 ಸಾವಿರಕ್ಕೂ ಅಧಿಕ ಮತಗಳ ಅಂತರ ಪಡೆಯಲಿದ್ದಾರೆ. 8 ವಿಧಾನಸಭೆಗಳ ಮತದಾನ ಅವಲೋಕಿಸಿದರೆ ನಮ್ಮ ಕ್ಷೇತ್ರ ಶೇಕಡಾ ಮತದಾನದಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿ ಇರುವುದೇ ಇದಕ್ಕೆ ಕಾರಣ.
•ಈರಗೊಂಡ ಬಿರಾದಾರ,
ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಬಬಲೇಶ್ವರ
•ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…