ಅಗ್ನಿ ಗ್ರಾಪಂಗೆ ಜಿಪಂ ಸಿಇಓ ಭೇಟಿ
Team Udayavani, Aug 3, 2018, 2:27 PM IST
ಕೆಂಭಾವಿ: ಸಮೀಪದ ಅಗ್ನಿ ಗ್ರಾಮದ ಗ್ರಾಪಂಗೆ ಗುರುವಾರ ಜಿಪಂ ಸಿಇಒ ಡಾ| ಅವಿನಾಶ ಮೇನನ್ ರಾಜೇಂದ್ರನ್ ಭೇಟಿ ನೀಡಿ ಸಾರ್ವಜನಿಕರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂನಲ್ಲಿ ಅವ್ಯವಹಾರ
ನಡೆದ ಬಗ್ಗೆ ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಇಂದು ಈ ಸಭೆಯನ್ನು ಕರೆಯಲಾಗಿದ್ದು, ಶೌಚಾಲಯ ನಿರ್ಮಾಣ, ಮನೆ ಹಂಚಿಕೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಜಿಪಂ ಸಭೆಯಲ್ಲಿ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಗ್ರಾಮಸ್ಥರ ಬಳಿ ಮಾಹಿತಿ ಪಡೆಯಲು ಬಂದಿದ್ದೇನೆ ಎಂದು ತಿಳಿಸಿದರು.
ಶೌಚಾಲಯ ನಿರ್ಮಿಸಿ ಎರಡು ವರ್ಷ ಕಳೆದರು ಹಣ ನೀಡಿಲ್ಲ. ಒಂದೇ ಕುಟುಂಬಕ್ಕೆ ಎರಡು ಮೂರು ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಹಾಗೂ ಕೆಲವು ಸದಸ್ಯರು ದೂರಿದರು.
ಹಲವೆಡೆ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಹಣವನ್ನು ಭೋಗಸ್ ಮಾಡುವ ಮೂಲಕ ಹಣ ದುರುಪಯೋಗ ಮಾಡಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸಬೇಕು, 2016-17ನೇ ಸಾಲಿನ ವಸತಿ ಯೋಜನೆಯಡಿ ಬಂದ 138 ಮನೆಗಳನ್ನು ಗ್ರಾಮ ಸಭೆ ನಡೆಸುವ ಮೂಲಕ ಬಡವರಿಗೆ ಮನೆ ಹಂಚಿಕೆ ಮಾಡಬೇಕು ಎಂದು ಜಿಪಂ ಸದಸ್ಯ
ಬಸನಗೌಡ ಯಡಿಯಾಪುರ ಸಭೆಯಲ್ಲಿ ಒತ್ತಾಯಿಸಿದರು.
ಗ್ರಾಪಂ 15 ಸದಸ್ಯರ ಪೈಕಿ 7 ಜನ ಸದಸ್ಯರು ಅಧ್ಯಕ್ಷರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ನಮ್ಮ ಬಡಾವಣೆಗೆ ಸವಲತ್ತುಗಳನ್ನು ನೀಡುತ್ತಿಲ್ಲ. ಕೇಳಲು ಹೋದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಸಿಇಓ ಮುಂದೆ
ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಜಿಪಂ ಸಿಇಓ ಅವಿನಾಶ ಮೇನನ್ ರಾಜೇಂದ್ರನ್, ಶೌಚಾಲಯ ನಿರ್ಮಿಸಿಕೊಂಡವರಿಗೆ
ನಾಲ್ಕು ವಾರದಲ್ಲಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು. ಮನೆ ಹಂಚಿಕೆಯಲ್ಲಿ ಮತ್ತು ಉದ್ಯೋಗ
ಖಾತ್ರಿ ಯೋಜನೆಯಡಿ ನಡೆದ ಅಕ್ರಮವನ್ನು ತಂಡ ರಚಿಸಿ ಪರಿಶೀಲನೆ ನಡೆಸಿ ಅಕ್ರಮ ಸಾಬೀತಾದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದ ಅವರು, 14ನೇ ಹಣಕಾಸು ಯೋಜನೆಯಡಿ ತಮ್ಮ ಗ್ರಾಪಂನಲ್ಲಿ 27 ಲಕ್ಷ ರೂಪಾಯಿ ಜಮೆ ಇದ್ದು ಇದನ್ನು ಸೂಕ್ತ ಕಾಮಗಾರಿಗಳಿಗೆ ಬಳಸಿಕೊಳ್ಳಿ ಎಂದು ಹೇಳಿದರು. ಇಒ ಜಗದೇವಪ್ಪ, ಗ್ರಾಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಇದ್ದರು.