ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ?
Team Udayavani, Mar 6, 2019, 1:59 AM IST
ಮಂಡ್ಯ: ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ ಎಂದು ಪ್ರಶ್ನಿಸಿರುವ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪನವರ ಮಕ್ಕಳು ರಾಜಕೀಯದಲ್ಲಿ ಇಲ್ವಾ?.ದೇವೇಗೌಡರ ಕುಟುಂಬಕ್ಕೆ ಮಾತ್ರ ಕಳಂಕ ಹಚ್ಚುವುದೇಕೆ ಎಂದು ಕಿಡಿ ಕಾರಿದ್ದಾರೆ.
ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೇವೇಗೌಡರ ಕುಟುಂಬ ಎಂದೂ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಜನರ ಬಳಿ ನೇರ ವಾಗಿ ಹೋಗಿ ಚುನಾವಣೆ ಮಾಡಿದ್ದೇವೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಖಡಕ್ಕಾಗಿ ಹೇಳಿದರು.
ನಿಖೀಲ್ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನಿಖೀಲ್ ಮಂಡ್ಯದಿಂದ ಸ್ಪರ್ಧಿಸಲಿ. ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದು ಹೇಳಿದ್ದು, ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದಟಛಿರಾಗಿರುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಿಂದಲೇ ಜಿಲ್ಲೆಯಲ್ಲಿ ನಿಖೀಲ್ ಸಕ್ರಿಯನಾಗಿದ್ದ. ಮಂಡ್ಯದಲ್ಲಿ ತೋಟ, ಮನೆ ಮಾಡಬೇಕು ಎಂಬ ಆಸೆ ಆಗಲೇ ಅವನಿಗಿತ್ತು. ಹಲವು ಬಾರಿ ನಮ್ಮ ಬಳಿ ತನ್ನ ಬಯಕೆಯನ್ನು ವ್ಯಕ್ತಪಡಿಸಿದ್ದ. ಇದರಿಂದ ಸ್ಥಳೀಯ ಜನರ ನೋವು-ನಲಿವು, ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗಲಿದೆ ಎಂಬ ಮನೋಭಾವ ಅವನಲ್ಲಿದೆ. ಅದೇನೂ ಹೊಸತಲ್ಲ. ನಿಖೀಲ್ ಸ್ಪರ್ಧೆ ಮಾಡಬೇಕು ಎನ್ನುವುದು ನಮ್ಮ ಆಸೆಯಲ್ಲ. ಜಿಲ್ಲೆಯವರು ಇಷ್ಟಪಟ್ಟಿದ್ದರಿಂದಲೇ ಅವನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ವಿಕೃತ ಮನಸ್ಸಿನವರ ಹೇಳಿಕೆಗಳಿಗೆ ನಾವೇನೂ ಮಾಡಲಾಗುವುದಿಲ್ಲ ಎಂದು ಆರೋಪ ಮಾಡಿದರು.
ನಿಖೀಲ್ ಸ್ಪರ್ಧೆಗೆ ವಿರೋಧ ಇರುವುದು ಗೊತ್ತಿಲ್ಲ: ಸಿಎಂ
ಕೋಲಾರ: ಮಂಡ್ಯದಲ್ಲಿ ನಿಖೀಲ್ ಸ್ಪರ್ಧೆಗೆ ವಿರೋಧ ಇರುವುದು ತಮಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿ, “ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಿಖೀಲ್ಗೌಡ ಸ್ಪರ್ಧಿಸುವ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸ್ಪರ್ಧಿಸಬೇಕೆಂಬ ಆಸೆ ಇರುತ್ತದೆ. ಮಂಡ್ಯದಲ್ಲಿ ನಿಖೀಲ್ ಸ್ಪರ್ಧೆಗೆ ಯಾರು ವಿರೋಧ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಮಾಧ್ಯಮದವರು ಸುಮ್ಮನೇ ಪ್ರಚಾರ ನೀಡುತ್ತಿದ್ದಾರೆ. ನಿಖೀಲ್ ಸ್ಪರ್ಧೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿಲ್ಲ. ಈ ಬಗ್ಗೆ ಇದುವರೆಗೂ ಯಾವುದೇ ಫೈನಲ್ ಆಗಿಲ್ಲ. ನಿಖೀಲ್ ಸ್ಪರ್ಧೆಗೆ ಮಂಡ್ಯದಲ್ಲಿ ಮತ್ತು ಪ್ರಜ್ವಲ್ ಸ್ವರ್ಧೆಗೆ ಹಾಸನದಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಈವರೆಗೂ ಬಂದಿಲ್ಲ. ಇನ್ನು, ಚುನಾವಣೆಯಲ್ಲಿ ಪರ-ವಿರೋಧ ಎರಡೂ ಇರುತ್ತದೆ. ಅಂತಿಮವಾಗಿ ಆ ಕ್ಷೇತ್ರದ ಮತದಾರರು ಈ ಬಗ್ಗೆ ನಿರ್ಧರಿಸುತ್ತಾರೆ. ಯಾರದೋ ಮಾತಿಗೆ ನಾನು ತಲೆ ಕೆಡಿಸಿಕೊಂಡಿಲ್ಲ’ ಎಂದರು.
ಕುಟುಂಬ ರಾಜಕಾರಣಕ್ಕೆ ಬಿಜೆಪಿ ಹೆಡ್ ಆಫೀಸ್: ಕೋನರಡ್ಡಿ
ಧಾರವಾಡ: ಕುಟುಂಬ ರಾಜಕೀಯಕ್ಕೆ ಬಿಜೆಪಿ ಹೆಡ್ ಆಫೀಸ್ ಆಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಟೀಕಾಪ್ರಹಾರ ನಡೆಸಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ತಮ್ಮ ಸಹೋದರ ಪ್ರದೀಪ ಶೆಟ್ಟರ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಯಡಿಯೂರಪ್ಪ ಅವರ ಮಗ ರಾಘವೇಂದ್ರ, ಉಮೇಶ ಕತ್ತಿ ತಮ್ಮ ರಮೇಶ ಕತ್ತಿ ರಾಜಕೀಯದಲ್ಲಿದ್ದಾರೆ. ಸಿಎಂ ಉದಾಸಿ ಅವರ ಮಗ ಎಂಪಿ ಇದ್ದಾರೆ. ಹಾಗೆಯೇ ಗಾಂಧಿ ಫ್ಯಾಮಿಲಿ, ದೇವೇಗೌಡ ಫ್ಯಾಮಿಲಿ ಹಿತ್ತಲು ಬಾಗಿಲಿನಿಂದ ನಾಮಿನೇಟ್ ಆಗಿ ಬಂದಿಲ್ಲ ಎಂದರು.