ಸಿದ್ದು ಹೆಗಲಿಗೆ ಭಿನ್ನಮತ ಶಮನದ ಟವೆಲ್
Team Udayavani, Apr 8, 2019, 6:19 AM IST
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಮನವೊಲಿಕೆಗೆ ಹಿರಿಯ ನಾಯಕರು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ.
ಆದರೆ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾತ್ರ ಜಪ್ಪಯ್ಯ ಅಂದ್ರೂ ತಮ್ಮ ನಿಲುವು ಬದಲಾಯಿಸುತ್ತಿಲ್ಲ. ಅತೃಪ್ತರ ಮನವೊಲಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹೆಗಲಿಗೆ ಹಾಕಿದ್ದು, ಆ ರೀತಿಯ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ನೀಡುವಂತೆ ಜೆಡಿಎಸ್ ನಾಯಕ ದೇವೇಗೌಡರೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಮೈತ್ರಿಯಾದರೂ, ಸಿದ್ದರಾಮಯ್ಯನವರು ಹಾಸನ ಲೋಕಸಭಾ ಕ್ಷೇತ್ರದಲ್ಲಿನ ಗೊಂದಲ ನಿವಾರಿಸುವಲ್ಲಿ ತೋರಿದ ಆಸಕ್ತಿಯನ್ನು ಮಂಡ್ಯದಲ್ಲಿನ ಬಂಡಾಯ ಶಮನದ ಬಗ್ಗೆ ತೋರಿಸದಿರುವುದು ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ. ಅದೇ ಕಾರಣಕ್ಕೆ ಮಂಡ್ಯದಲ್ಲಿ ನಿಖೀಲ್ ವಿರುದ್ಧ ಮುನಿಸಿಕೊಂಡಿರುವ ನಾಯಕರ ಕ್ಷೇತ್ರಗಳಲ್ಲಿಯೇ ಸಿದ್ದರಾಮಯ್ಯ ಅವರ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜೆಡಿಎಸ್ ನಾಯಕರೇ ಪ್ರಚಾರ ಪಟ್ಟಿ ಸಿದ್ದಪಡಿಸಿ ಕಾಂಗ್ರೆಸ್ ಹೈಕಮಾಂಡ್ಗೆ ನೀಡಿದ್ದಾರಂತೆ.
ಒಂದು ವೇಳೆ, ತಮ್ಮ ಪ್ರಚಾರದ ಸಂದರ್ಭದಲ್ಲಿ ಮಂಡ್ಯದ ಕಾಂಗ್ರೆಸ್ ನಾಯಕರು ಗೈರು ಹಾಜರಾದರೆ, ಸಿದ್ದರಾಮಯ್ಯ ಅವರನ್ನೇ ವಿಲನ್ ಮಾಡುವ ಲೆಕ್ಕಾಚಾರ ಇದರ ಹಿಂದಿದೆ.