ಮೋದಿ ದೇಶದ ಚೌಕಿದಾರ್: ನಳಿನ್ ಕುಮಾರ್ ಕಟೀಲು
Team Udayavani, Mar 25, 2019, 6:31 AM IST
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನೆಲ, ಜಲ, ಸಂಪತ್ತನ್ನು ರಕ್ಷಿಸುವ ಕಾರ್ಯವನ್ನು ಕಳೆದ 5 ವರ್ಷಗಳಿಂದ ಬದ್ಧತೆಯಿಂದ ಸಮರ್ಥವಾಗಿ ನಿರ್ವಹಿಸಿ ದೇಶದ ಚೌಕಿದಾರರಾಗಿ ನಿಂತಿದ್ದಾರೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಬಿಜೆಪಿ ಶಕ್ತಿಕೇಂದ್ರ ಹಾಗೂ ವಾರ್ಡ್ ಸಮಿತಿ ಆಶ್ರಯದಲ್ಲಿ ಚೌಕಿದಾರನ ಪೇಟಾ ಧರಿಸಿ “ಹಮ್ ಬಿ ಚೌಕಿದಾರ್’ ಘೋಷವಾಕ್ಯದೊಂದಿಗೆ ಮರೋಳಿ ಪರಿಸರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ರವಿವಾರ ಆಯೋಜಿಸಿದ್ದ ಪ್ರಚಾರ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೋದಿಗೆ ಬೆಂಬಲವಾಗಿ ದೇಶಾದ್ಯಂತ “ಹಮ್ ಬಿ ಚೌಕಿದಾರ್’ ಎಂಬ ಘೋಷವಾಕ್ಯದೊಂದಿಗೆ ಕೋಟ್ಯಂತರ ಮಂದಿ ಚೌಕಿದಾರ್ ಪೇಟಾ ಧರಿಸಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮೋದಿ ಅವರಿಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲೆಡೆ ಜನರೂ ಪಾಲ್ಗೊಳ್ಳುತ್ತಿದ್ದು, ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಡೀ ದೇಶದಲ್ಲಿರುವ ವಾತಾವರಣದಂತೆಯೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಮಹಿಳೆಯರು ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಚೌಕಿದಾರ್ ಪೇಟಾ ಧರಿಸಿ ಮರೋಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ನಡೆಸಿದರು. ಅಡುಮರೋಳಿ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಪ್ರಚಾರ ಅಭಿಯಾನ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಬಳಿ ಸಮಾಪನಗೊಂಡಿತು.