ಗ್ರಾಮಾಂತರ ಪ್ರದೇಶದಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
Team Udayavani, Aug 10, 2019, 12:38 PM IST
ಮಹಾನಗರ: ಕೆಲವು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗ್ರಾಮಾಂತರ ಪ್ರದೇಶ ಗಳು ಭಾಗಶಃ ಜಲಾವೃತವಾಗಿವೆ.
ಉರುಳಿದ ವಿದ್ಯುತ್ ಕಂಬ
ಗುರುಪುರ: ಕೈಕಂಬ ವ್ಯಾಪ್ತಿಯ ಹಲವು ಕಡೆಗಳಲ್ಲಿ ತಂತಿಕಂಬಗಳು ಉರುಳಿ ಬಿದ್ದಿದ್ದು, ಮೆಸ್ಕಾಂ ಸಿಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾ ಗಿದೆ.
ಮಳಲಿ ವ್ಯಾಪ್ತಿಯ ಒಸರ್ ಪಳ್ಳ ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಉರುಳಿ ಬಿದ್ದಿದ್ದು, ಮೂರು ದಿನಗಳಿಂದ ಈ ಭಾಗದ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನು ಮಳಲಿಯ ಉಲ್ಲಾಸ್ ನಗರ ಬಳಿ ಈಚಲು ಮರ ಬುಡ ಸಮೇತ ಉರುಳಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಸ್ಥಳೀಯ ಯುವಕರೇ ಸೇರಿ ತೆರವು ಕಾರ್ಯ ನಡೆಸಿದ್ದಾರೆ.
ಕುಪ್ಪೆಪದವು ಸಮೀಪದ ಕುಳವೂರ್ ಗ್ರಾಮದ ನೆಲ್ಲಚ್ಚಿಲ್ ನಾರಾಯಣ ಪೂಜಾರಿ ಅವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಮನೆಯು ಸಂಪೂರ್ಣ ಹಾನಿಗೊಂಡು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಬಡಗ ಎಡಪದವು ಪಂ. ವ್ಯಾಪ್ತಿಯ ಲತ್ರೊಟ್ಟು ಸೋಮಯ್ಯ ಎಂಬ ವರ ಮನೆ ಯಶೀಟುಗಳು ಗಾಳಿಗೆ ಹಾರಿ ಹೋಗಿದ್ದು, ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ. ಕುಪ್ಪೆಪದವು ಆಚಾರಿಜೋರ ಆಶ್ರಫ್ ಅವರ ಮನೆ ಸಮೀಪ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದು.ಅದೇ ರೀತಿ ಸರಕಾರಿ ಶಾಲೆ ಮಳಲಿಯ ತಡೆಗೋಡೆ ಕುಸಿದು ಬಿದ್ದಿದ್ದು, ಮುಂದೆ ಇನ್ನಷ್ಟು ಕುಸಿಯುವ ಭೀತಿ ಇದೆ.
ನೀರಿನ ಮಟ್ಟ ಏರಿಕೆ
ಪೊಳಲಿ: ಇಲ್ಲಿನ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿದ್ದು, ಅಪಾಯದ ಮಟ್ಟ ತಲುಪುತ್ತಿದೆ. ಇದೇ ರೀತಿ ಮಳೆ ಮುಂದು ವರಿದರೆ ತಗ್ಗು ಪ್ರದೇಶ ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ಆಡ್ಡೂರು ಸಮೀಪ ಫಲ್ಗುಣಿ ನದಿಗೆ ನಿರ್ಮಿಸಿರುವ ಸೇತುವೆ ಸಮೀಪ ನೀರಿನ ಪ್ರಮಾಣ ಏರಿದ್ದು, ಇಲ್ಲಿನ ಪ್ರದೇಶ ಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಇಲ್ಲಿ ಪ್ರತಿವರ್ಷ ನೆರೆಹಾವಳಿ ಉಂಟಾಗುತ್ತಿರು ವುದು ಸಾಮಾನ್ಯವಾಗಿದೆ. ಇಲ್ಲಿನ ಅಡಿಕೆ ತೋಟ, ಗದ್ದೆಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗುವ ಭೀತಿ ಇದೆ.
ಇದೇ ಪರಿ ಸ್ಥಿತಿ ಗುರುಪುರದಲ್ಲೂ ಎದುರಾಗಿದ್ದು, ಇಲ್ಲಿನ ತಗ್ಗು ಪ್ರದೇಶಗಳಿಗೂ ನೆರೆಭೀತಿ ಉಂಟಾಗಿದೆ. ಇನ್ನು ಕಾಜಿಲ ಮಳಲಿ ರಸ್ತೆಯ ಸಾಧೂರು ಪಟ್ಲ ಎಂಬಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಬಯಲು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಒಟ್ಟಾರೆ ಮಳೆ ಇದೇ ರೀತಿ ಮುಂದುವರಿದರೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾ ಡಳಿತ ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಳ್ಳಾಲ: ನೆರೆಭೀತಿ
ಉಳ್ಳಾಲ: ಉಳ್ಳಾಲ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರವಾಗಿ ಮಳೆ ಸುರಿದಿದ್ದು, ಉಳ್ಳಾಲ ವ್ಯಾಪ್ತಿಯ ನೇತ್ರಾವತಿ ತಟದಲ್ಲಿ ನದಿ ನೀರು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು ನೆರೆಭೀತಿಯಲ್ಲಿದೆ.
ಬೆಳಗ್ಗೆ ಚೆಂಬುಗುಡ್ಡೆ ಸಮೀಪದ ಕೆರೆಬೈಲ್ ಬಳಿ ರಸ್ತೆಗೆ ಮರ ಬಿದ್ದು ತೊಕ್ಕೊಟ್ಟಿನಿಂದ ದೇರಳಕಟ್ಟೆ ಸಂಚರಿ ಸುವ ವಾಹನಗಳಳ ಸಂಚಾರದಲ್ಲಿ ವ್ಯತ್ಯಯ ವಾಗಿದ್ದು ಬಳಿಕ ಮರ ತೆರವು ಕಾರ್ಯ ನಡೆಯಿತು.ಉಳ್ಳಾಲದ ನೇತ್ರಾವತಿ ನದಿ ತಟಗಳಾದ ಕಲ್ಲಾಪು, ಆಡಂಕುದ್ರು, ಮುನ್ನೂರು ಉಳಿಯ, ಅಂಬ್ಲಿಮೊಗರು, ಹರೇಕಳ ಪಾವೂರು, ಸಜಿಪ ಪ್ರದೇಶಗಳಲ್ಲಿ ನೇತ್ರವಾತಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ ಕಲ್ಲಾಪು ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ತಟದ ಜನರಿಗೆ ಎಚ್ಚರಿಕೆಯಲ್ಲಿರುವಂತೆ ಮಾಹಿತಿ ನೀಡಿದರು.
ತೊಕ್ಕೊಟ್ಟು ನೂತನ ಫ್ಲೈಓವರ್ನ ಮಧ್ಯ ಭಾಗದಲ್ಲಿ ಸಣ್ಣದೊಂದು ಬಿರುಕು ಕಂಡಿದ್ದು, ಕೆಲವು ಕಾಲ ಸಂಚಾರವನ್ನು ಸ್ಥಗಿತ ಗೊಳಿಸಲಾಯಿತು. ಸ್ಥಳಕ್ಕೆ ಎಂಜಿನಿಯರ್ಗಳು ಮತ್ತು ಪರಿಣತರು ಆಗಮಿಸಿ ಸಂಚಾರಕ್ಕೆ ಹಸರು ನಿಶಾನೆ ನೀಡಿದ ಬಳಿಕ ಸಂಚಾರ ಆರಂಭವಾಯಿತು.
ತಾರಿಪ್ಪಾಡಿ ಸೈಟ್ನ ಮಾರ್ಟಿನ್ ಪೆರಾವೋ ಎಂಬವರ ಮನೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ನಡುಪದವು ಕಲ್ಲುಗುಂಡಿಯ ಖಾದರ್ ಅವರ ಮನೆ ಬಳಿಯ ಮರವೊಂದು ವಿದ್ಯುತ್ ತಂತಿಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಧರೆಗುರಳಿದೆ. ಸುಧಾಕರ್ ಅವರ ಮನೆ ಸಮೀಪದ ಹಲಸಿನ ಮರವೊಂದು ರಾತ್ರಿ ಗಾಳಿಗೆ ಮುರಿದು ಬಿದ್ದಿದೆ. ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದ ಮುಂಭಾಗದ ಆವರಣ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕೊಣಾಜೆ ದೊಡ್ಡುಗುಳಿಯ ಗೋಪಾಲ್ ಅವರ ಮನೆ ಸಮೀಪದ ಗುಡ್ಡದ ಮಣ್ಣು ಕುಸಿದು ಮನೆಗೆ ಹಾನಿ ಸಂಭವಿಸಿದೆ.
ಕೋಟೆಕಾರು ಪ. ಪಂ. ಸದಸ್ಯ ಅಹ್ಮದ್ ಬಾವ ಅವರ ಅಜ್ಜಿನಡ್ಕದಲ್ಲಿರುವ ಮನೆಯ ಹಿಂಭಾಗದಲ್ಲಿದ್ದ ತೆರೆದ ಬಾವಿ ಸಂಪೂರ್ಣ ಕುಸಿದು ಬಿದ್ದಿದೆ. ಬಾವಿಯಲ್ಲಿ ಕಲ್ಲು ಮಣ್ಣು ತುಂಬಿ ಸಂಪೂರ್ಣ ಮುಚ್ಚಲ್ಪಟ್ಟು ಅಪಾರ ನಷ್ಟವುಂಟಾಗಿದ್ದಲ್ಲದೆ, ಮನೆಮಂದಿಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಕೋಟೆಕಾರು ಪ.ಪಂ.ವ್ಯಾಪ್ತಿಯ ಬಗಂಬಿಲದಿಂದ ಪಾನೀರ್ವರೆಗೆ 11ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೆಸ್ಕಾಂ ಸಿಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದು ಬಿದ್ದಿದ್ದು, ಶಾಸಕ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.