ಎರಡೇ ವರ್ಷಗಳಲ್ಲಿ ಮುಕ್ಕ ಖಂಡಿಗೆ ರಸ್ತೆಯಲ್ಲಿ ಬಿರುಕು; ಸಂಚಾರ ದುಸ್ಥರ
Team Udayavani, Jun 15, 2019, 5:00 AM IST
ಸುರತ್ಕಲ್: ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟ ಮೀನುಗಾರಿಕೆ ಇಲಾಖೆಯ ಅನುದಾನ ಮತ್ತು ನಬಾರ್ಡ್ನಿಂದ ಸಾಲ ಪಡೆದು ನಿರ್ಮಿ ಸಿದ ಮುಕ್ಕ ಖಂಡಿಗೆ ಚೇಳಾರು ರಸ್ತೆ ಎರಡೇ ವರ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ರಿಕ್ಷಾ, ಬೈಕ್ ಹೊರತು ಪಡಿಸಿ ಘನ ವಾಹನಗಳ ಓಡಾಟಕ್ಕೆ ಅಯೋಗ್ಯವಾಗಿದೆ.
ಮಾರ್ಚ್ಳ 2016ರಲ್ಲಿ ಈ ರಸ್ತೆಯ ಕಾಮಗಾರಿ ಯನ್ನು ಆರಂಭಿಸಲಾಗಿತ್ತು. ಜನವರಿ 2017ರಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು. ಈ ರಸ್ತೆ ನಿರ್ಮಾಣಕ್ಕೆ ನಬಾರ್ಡ್ನಿಂದ 59.20 ಲಕ್ಷ ರೂ. ಸಾಲ ಪಡೆಯಲಾಗಿದ್ದರೆ. ಒಟ್ಟು 74 ಲಕ್ಷ ರೂ. ವೆಚ್ಚದಲ್ಲಿ ಸೇತುವೆ, ರಸ್ತೆಯನ್ನು ನಿರ್ಮಿಸಲಾಗಿತ್ತು. ಉಡುಪಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಉಸ್ತುವಾರಿಯಲ್ಲಿ ಮಂಗಳೂರಿನ ಗುತ್ತಿಗೆದಾರರೊಬ್ಬರು ಈ ರಸ್ತೆ ನಿರ್ಮಿಸಿದ್ದರು.
ಅಪಾಯ ತಪ್ಪಿದ್ದಲ್ಲ
ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರು ಈ ರಸ್ತೆ, ಇಲ್ಲಿನ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನ ಒದಗಿಸುವಲ್ಲಿ ಶ್ರಮ ವಹಿಸಿದ್ದರು. ಇದೀಗ ಘನ ವಾಹನ ಓಡಾಟ ನಡೆಸದ ಸ್ಥಿತಿಯಲ್ಲಿದೆ. ಸೇತುವೆಯ ಸಮೀಪದಲ್ಲಿ ಬಿರುಕು ಕಾಣಿಸಿಕೊಂಡು, ಕೆಳ ಭಾಗದಲ್ಲಿ ಹಾಕಲಾದ ಮಣ್ಣು ಕುಸಿದು ಟೊಳ್ಳಾಗಿದೆ. ರಾತ್ರಿ ಯಾವುದಾದರೂ ವಾಹನ ಸಂಚರಿಸಿದಲ್ಲಿ ಅಪಾಯ ತಪ್ಪಿದ್ದಲ್ಲ.
ಘನ ವಾಹನ ಓಡಾಟ ನಡೆಸದಂತೆ ಸ್ಥಳೀಯರು, ರಿಕ್ಷಾ ಚಾಲಕರು ಕಲ್ಲುಗಳನ್ನು ಇಟ್ಟು ಸಂಭಾವ್ಯ ಅಪಾಯವಾಗದಂತೆ ಎಚ್ಚರಿಸಿದ್ದಾರೆ.ಇದೀಗ ಕಳಪೆ ಕಾಮಗಾರಿಗೆ ಸಂಬಂದಪಟ್ಟಂತೆ ಸರಕಾರ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಿದೆ.