ಸತ್ಯನಿಷ್ಠೆ, ಸಾಮಾಜಿಕ ನ್ಯಾಯ ಸಾಹಿತಿಯ ಜವಾಬ್ದಾರಿ
ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೃ.ಶಾ. ಮರ್ಕಂಜ
Team Udayavani, Jan 18, 2020, 5:59 AM IST
ಗುತ್ತಿಗಾರು: ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜ. 19ರಂದು ಎಲಿಮಲೆಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಮ್ಮೇಳನದ ಸಮಗ್ರ ಅಧ್ಯಕ್ಷತೆಯನ್ನು ನಾಡಿನ ಹೆಸರಾಂತ ಸಾಹಿತಿ ಕೃ.ಶಾ. ಮರ್ಕಂಜ (ಕೃಷ್ಣಶಾಸ್ತ್ರಿ) ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ಉದಯವಾಣಿ ಸುದಿನ’ ಸಮ್ಮೇಳನಾಧ್ಯಕ್ಷರ ಜತೆ ನಡೆಸಿದ
ಕಿರು ಸಂದರ್ಶನ ಇಲ್ಲಿದೆ.
ಸಾಹಿತ್ಯ ಸಮ್ಮೇಳನಗಳು ನೆಪ ಮಾತ್ರಕ್ಕೆ ನಡೆಯುತ್ತಿವೆಯೇ?
ಉತ್ತರ: ಇಲ್ಲ. ಸಮ್ಮೇಳನವೆಂಬುದು ಅಕ್ಷರ ಜಾತ್ರೆ. ವರ್ಷವಿಡೀ ಕನ್ನಡ ಸಾಹಿತ್ಯ, ಸಂಸ್ಕೃತಿ, ನಾಡು-ನುಡಿಗೆ ಚಿಂತಿಸುವ ಮನಸ್ಸುಗಳು ಒಂದೆಡೆ ಕಲೆತು ನಡೆಸುವ ನುಡಿ ಹಬ್ಬ. ಆಯ್ದ ಪರಿಸರದಲ್ಲಿ ಈ ರೀತಿಯ ಕಾರ್ಯಕ್ರಮಗಳು ಆಂದೋಲನದ ರೀತಿಯಲ್ಲಿ ನಡೆದಾಗ ಪರೋಕ್ಷವಾಗಿ ಭಾಷೆ ಮೇಲೆ ಪ್ರಭಾವವನ್ನು ಬೀರುತ್ತದೆ. ವಿವಿಧ ಸ್ತರದ ಜನ ಒಂದೆಡೆ ಸೇರಿದಾಗ ಕನ್ನಡಾಭಿಮಾನ, ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಲು ಸಾಧ್ಯ.
ಯುವ ಪೀಳಿಗೆಯಲ್ಲಿ ಸಾಹಿತ್ಯದ ಹುಚ್ಚು ಕಡಿಮೆಯಾಗುತ್ತಿದೆ ಎಂದುಕೊಳ್ಳಬಹುದೇ?
ಉತ್ತರ: ಖಂಡಿತವಾಗಿಯೂ ಹೌದು. ಇಂದು ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲಿ ಸಾಹಿತ್ಯಾಸಕ್ತಿಗಳು ಕಡಿಮೆಯಾಗುತ್ತಿವೆ. ಅದರಲ್ಲಿಯೂ ಯುವ ಮನಸ್ಸುಗಳು ಸಾಹಿತ್ಯದಿಂದ ವಿಮುಖರಾಗುತ್ತಿರುವುದು ಖೇದಕರ. ಈ ಕುರಿತು ಚಿಂತಿಸಬೇಕಿದೆ.
ಪರಭಾಷೆಗಳ ನಡುವೆ ಸಿಲುಕಿ ಕನ್ನಡ ನರಳುತ್ತಿದೆಯೇ?
ಉತ್ತರ: ಪರಭಾಷೆಗಿಂತ ಹೆಚ್ಚಾಗಿ ಆಂಗ್ಲ ಭಾಷೆಯ ವ್ಯಾಮೋಹ ಕನ್ನಡವನ್ನು ಮೂಲೆಗುಂಪಾಗುವಂತೆ ಮಾಡಿದೆ. ಮಕ್ಕಳ ಮೇಲೆ ಎಳವೆಯಿಂದಲೇ ಇಂಗ್ಲಿಷ್ ಅನ್ನು ಹೇರುವುದರಿಂದ ಕನ್ನಡ ಬಳಕೆ ಕಡಿಮೆಯಾಗಿದೆ. ಬೇರೆ ಭಾಷೆ ಕಲಿಸುವುದರ ಜತೆ ಕನ್ನಡವನ್ನೂ ಕಲಿಸುವ ಮನಸ್ಸನ್ನು ಪಾಲಕರು ಮಾಡಬೇಕಿದೆ. ಜತೆಗೆ ಸಾಹಿತ್ಯದ ಕುರಿತ ಚಿಂತನೆಗಳು, ಕ್ಷೀಣಿಸುತ್ತಿರುವ ಓದುಗರ ಸಂಖ್ಯೆ ಕನ್ನಡದ ಅಭಿವೃದ್ಧಿಗೆ ತೊಡಕಾಗಿದೆ.
ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಉತ್ತರ: ಬರಹಗಾರನ ಮನಃಸ್ಥಿತಿಯನ್ನು ಸಮಾಜದ ಮುಂದೆ ಪರೋಕ್ಷವಾಗಿ ವ್ಯಕ್ತಪಡಿಸಲು ಸಾಹಿತ್ಯ ಆವಶ್ಯಕ. ಅಭಿವ್ಯಕ್ತಿಗಾಗಿ ಬರವಣಿಗೆಯೇ ಮಾಧ್ಯಮವಾದ ಕಾರಣ ಸಾಹಿತ್ಯದ ಮೇಲಿನ ಒಲವು ಹೆಚ್ಚಾಯಿತು. ನಿರಂತರ ಓದು, ಎಳವೆಯಿಂದಲೇ ಬೆಳೆದುಬಂದ ದಾರಿ ನನ್ನನ್ನು ಸಾಹಿತಿಯಾಗಲು ಪ್ರೇರೇಪಿಸಿದೆ.
5. ಇಂದು ಸಾಹಿತ್ಯದ ಜವಾಬ್ದಾರಿ ಎಷ್ಟು?
ಉತ್ತರ: ಈ ಹಿಂದೆ ಸಾಹಿತ್ಯವು ಸಮಾಜದ ಮೇಲೆ ಬೀರಿರುವ ಪ್ರಭಾವ ಇಂದಿನ ಸಾಹಿತ್ಯಗಳಲ್ಲಿ ಕಂಡುಬರುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಬೇರೆ ಮಾಧ್ಯಮಗಳಿಗೆ ವರ್ಗಾವಣೆಗೊಂಡಂತಿದೆ. ಕೃತಿಗಳು ಎಷ್ಟೇ ಉತ್ತಮವಾಗಿದ್ದರೂ ಓದುಗರು ಇಲ್ಲದ ಮೇಲೆ ಪ್ರಯೋಜನಕ್ಕೆ ಬಾರದು.
ಸಾಹಿತಿ ಸತ್ಯದ ಪರ, ನ್ಯಾಯದ ಪರ ಧ್ವನಿ ಎತ್ತಬೇಕಿದೆ. ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ಪ್ರತೀ ಕತೃವಿನ ಜವಾಬ್ದಾರಿ.
ಕನ್ನಡ ಶಾಲೆಗಳನ್ನು ಉಳಿಸುವುದು ಹೇಗೆ?
ಉತ್ತರ: ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವಂತೆ ಕನ್ನಡ ಶಾಲೆಗಳನ್ನು ಬೆಳೆಸಬೇಕು. ಆಂಗ್ಲಭಾಷೆಯೇ ಕಲಿಸಬೇಕೆಂದಿಲ್ಲ. ಶಿಕ್ಷಣ ವಿಧಾನಗಳನ್ನು ಬದಲಾಯಿಸಬೇಕು. ಪಾಠ ಪ್ರವಚನಗಳಲ್ಲಿ ಆಧುನಿಕ ವಿಧಾನಗಳನ್ನು ಜಾರಿಗೆ ತರಬೇಕು.
ಮಾಧ್ಯಮಗಳು ಕನ್ನಡಭಾಷೆಯನ್ನು ಕೊಲ್ಲುತ್ತಿವೆಯೇ?
ಉತ್ತರ: ನಿಜ. ದೃಶ್ಯ ಮಾಧ್ಯಮಗಳಲ್ಲಂತೂ ಕನ್ನಡವನ್ನು ಬಹುಮಟ್ಟಿಗೆ ತಿರುಚಲಾಗುತ್ತಿದೆ. ಕನ್ನಡ ಮಾಧ್ಯಮಗಳಲ್ಲಿ ಆಂಗ್ಲ ಬಳಕೆಯೇ ಹೆಚ್ಚಾಗಿದೆ. ಇದು ಬದಲಾಗಬೇಕು.
ಸಾಹಿತ್ಯ ರಚನೆಗೆ ಪೂರಕ ವಾತಾವರಣ ಯಾವುದು?
ಉತ್ತರ: ಬಾಹ್ಯ ಮತ್ತು ಆಂತರಿಕ ಎಂಬೆರಡು ವಿಧ. ಬೇಂದ್ರೆ ಆಂತರಿಕ ವಾತಾವರಣದಲ್ಲಿ ಬರೆದರೆ ಕುವೆಂಪು ಅವರು ಬಾಹ್ಯ ವಾತಾವರಣಕ್ಕೆ ಪೂರಕವಾಗಿ ಬರೆದರು. ಇಂತಹ ವಾತಾವರಣಗಳನ್ನು ಸಾಹಿತಿಗಳು ಗಮನಿಸಬೇಕು. ಬರೆಯುವುದು ಮಾನಸಿಕ ನೆಮ್ಮದಿಗಾಗಿಯೇ ಹೊರತು ಅನ್ನ ಕೊಡುವ ದಾರಿಯಲ್ಲ. ಅಲ್ಲದೇ ಬರೆಯುವ ಕಲೆ ಜ್ಞಾನವಂತನಿಗೇ ಹೊರತು ಎಲ್ಲರಿಗಲ್ಲ. ಹೆಚ್ಚು ಓದು ಮತ್ತು ಪರಿಸರದ ಗಮನಿಸುವಿಕೆ ಸಾಹಿತ್ಯ ರಚನೆಗೆ ಪೋ›ತ್ಸಾಹಕವಾಗುತ್ತದೆ.
ಕನ್ನಡದಲ್ಲಿ ಸಾಹಿತ್ಯ ಕೃಷಿ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದೆಯೇ? ಯಾಕೆ?
ಉತ್ತರ: ಕನ್ನಡದಲ್ಲಿ ಇತ್ತೀಚೆಗೆ ಬರಹಗಾರರ ಮತ್ತು ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ. ಪತ್ರಿಕೆಗಳೂ ಲೇಖನಗಳಿಗೆ ಅವಕಾಶ ಕಡಿಮೆ ಮಾಡಿವೆ. ಸಾಹಿತ್ಯಕ್ಕೆ ಸಂಬಂಧಿಸಿದ ಪ್ರೋತ್ಸಾಹದ ಕೊರತೆ, ಉತ್ತಮ ವೇದಿಕೆಯ ಅಲಭ್ಯತೆ ಮತ್ತು ಸಾಹಿತ್ಯಾಸಕ್ತಿ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು. ಪರಿಷತ್ತಿನ ಮಟ್ಟದಲ್ಲಿ ಇದರ ಕುರಿತ ಚಿಂತನೆಗಳಾಗಬೇಕು. ಜೊತೆಗೆ ಯುವ ಬರಹಗಾರರು ಜಾಗತಿಕ ಓಟದ ಗತಿಗನುಗುಣವಾಗಿ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಹಿರಿ-ಕಿರಿಯರ ನಡುವಿನ ಹೊಂದಾಣಿಕೆ, ಟೀಕಾ ಪ್ರಹಾರಗಳು ಸಾಹಿತ್ಯಕ್ಕೆ ಮಗ್ಗುಲ ಮುಳ್ಳಾಗಿದೆ.
ಕೃಷ್ಣಪ್ರಸಾದ್ ಕೋಲ್ಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ