ದರೋಡೆಗೆ ಹೊಂಚು: ನಾಲ್ವರು ಆರೋಪಿಗಳ ಬಂಧನ
ಓರ್ವ ಪರಾರಿ ಮುಂಜಾನೆ ಉಡುಪಿ ಪೊಲೀಸರ ಕಾರ್ಯಾಚರಣೆ
Team Udayavani, Apr 3, 2019, 9:29 AM IST
ಉಡುಪಿ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ಕು ಮಂದಿಯನ್ನು ಉಡುಪಿ ಪೊಲೀಸರು ಮಂಗಳವಾರ ಉಡುಪಿ ನಗರದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಬಂಧಿಸಿದ್ದಾರೆ. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ 5 ಮಂದಿ ದರೋಡೆಗೆ ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುಂಜಾವ 4 ಗಂಟೆಗೆ ಕಾರ್ಯಾಚರಣೆ ನಡೆಸಿದರು. ಅಲ್ಲಿ 5 ಮಂದಿ ಮೂರು ಬೈಕ್ಗಳೊಂದಿಗೆ ನಿಂತಿದ್ದರು. ಅವರನ್ನು ಸುತ್ತುವರಿದು ನಾಲ್ಕು ಮಂದಿಯನ್ನು ಬಂಧಿಸಲಾಯಿತು. ಓರ್ವ ತಪ್ಪಿಸಿಕೊಂಡಿದ್ದಾನೆ.
ಶ್ಯಾಮ್, ವೆಂಕಟೇಶ ಯಾನೆ ವೆಂಕಟ್, ರಾಕೇಶ್ ಯಾನೆ ರಾಕೇಶ್ ಕುಮಾರ್ ಮತ್ತು ಗೋಪಿ ಬಂಧಿತರು. ಇನ್ನೋರ್ವ ಆರೋಪಿ ಪರಮಶಿವ ಯಾನೆ ರಮೇಶ್ ತಪ್ಪಿಸಿಕೊಂಡಿದ್ದಾನೆ.
ತುರಿಕೆ ಹುಡಿ/ಬೇರಿಂಗ್ ಬಾಲ್ ಪ್ರಯೋಗ
ಹಣದೊಂದಿಗೆ ಹೋಗುವ ಜನರಿಗೆ ತಮ್ಮಲ್ಲಿರುವ ತುರಿಕೆ ಹುಡಿಯನ್ನು ಎರಚಿ ಅಥವಾ ಸ್ಲಿಂಗ್ಶಾಟ್ನಿದ ಬೇರಿಂಗ್ ಬಾಲ್ಗಳನ್ನು ಪ್ರಯೋಗಿಸಿ ಅವರ ಗಮನ ಬೇರೆಡೆ ಸೆಳೆದು ದರೋಡೆ ಮಾಡುವ ಅಥವಾ ಹಲ್ಲೆ ನಡೆಸಿ ಹಣ ದೋಚುವ ಉದ್ದೇಶದಿಂದ ಇವರು ನಿಂತುಕೊಂಡಿದ್ದರು.
ಬಂಧಿತರಿಂದ ಎರಡು ಮಂಕಿ ಕ್ಯಾಪ್, ಎರಡು ಕ್ಯಾಪ್, ಒಂದು ಫೇಸ್ ಮಾಸ್ಕ್, ಒಂದು ಬ್ಯಾಗ್, 5 ಮೊಬೈಲ್ ಪೋನ್ಗಳು, ಒಂದು ಸ್ಲಿಂಗ್ ಶಾಟ್, 25 ಬೇರಿಂಗ್ ಬಾಲ್ಗಳಿರುವ ಪ್ಲಾಸ್ಟಿಕ್ ತೊಟ್ಟೆ, ತುರಿಕೆ ಪುಡಿಯುಳ್ಳ ಪರ್ಸ್, ಐಡೆಂಟಿಟಿ ಕಾರ್ಡ್ಗಳು, ಆಧಾರ್ಕಾರ್ಡ್, ಮೂರು ಬೈಕ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಮಲ್ಪೆ ಪೊಲೀಸ್ ಉಪನಿರೀಕ್ಷಕ ಮಧು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಚಿತ್ತೂರಿನ ಗ್ಯಾಂಗ್
ಒಬ್ಬೊಬ್ಬರಲ್ಲಿ 2-3 ಗುರುತು ಚೀಟಿಗಳಿದ್ದು ವಿಳಾಸ ಸ್ಪಷ್ಟವಾಗಿಲ್ಲ. ಇವರು ಹೈದರಬಾದ್ ಚಿತ್ತೂರಿನ ಓಜಿ ಕೊಪುÉ ದರೋಡೆ ತಂಡದವರು ಎನ್ನಲಾಗಿದ್ದು ಗಮನ ಬೇರೆಡೆ ಸೆಳೆದು ದೋಚಿದ ಪ್ರಕರಣ ಈ ಹಿಂದೆ ಮಲ್ಪೆಯಲ್ಲಿಯೂ ನಡೆದಿತ್ತು.