17 ಮಂದಿ ಕುರಿ, ಕೋಳಿ ರೀತಿ ಬಿಜೆಪಿಗೆ ಮಾರಾಟ ಆಗಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ
Team Udayavani, Dec 3, 2019, 1:22 PM IST
ಹುಣಸೂರು: ಕುರಿ, ಕೋಳಿ, ದನ ಮಾರಾಟ ಮಾಡೋದನ್ನು ನೋಡಿದ್ದೇವೆ. ಆದರೆ 17 ಮಂದಿ ಕುರಿ, ಕೋಳಿ ರೀತಿ ಬಿಜೆಪಿಗೆ ಮಾರಾಟವಾಗಿದ್ದಾರೆ. ಇವರು ಮನುಷ್ಯರಾ? ಡಿಸೆಂಬರ್ 5ರಂದು ನಡೆಯುವ ಚುನಾವಣೆಯಲ್ಲಿ ನೀವು(ಮತದಾರರು) ಕಡ್ಡಾಯವಾಗಿ ಅವರನ್ನು ಅನರ್ಹರನ್ನಾಗಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಮಂಗಳವಾರ ಹುಣಸೂರಿನಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಐ್ ಅವರ ಪರ ಮತಯಾಚಿಸಿ ಮಾತನಾಡಿದರು.
ಸ್ವಾಭಿಮಾನ ಮಾರಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಇಂಥವರಿಗೆ ನಾಚಿಕೆ ಆಗುತ್ತಾ, ಇಲ್ಲವೋ ಅಂತ ಕೇಳಬೇಕೋ ಬೇಡವೋ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಚುನಾವಣೆಯಲ್ಲಿ ನೀವು ಅನರ್ಹರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಹೆಚ್.ವಿಶ್ವನಾಥ್ 35 ವರ್ಷಗಳ ಕಾಲ ಕಾಂಗ್ರೆಸ್ ನಲ್ಲೇ ಇದ್ದು, ಅಧಿಕಾರ ಅನುಭವಿಸಿದ್ದರು. ಕಾಂಗ್ರೆಸ್ ಪಕ್ಷ ನನ್ನ ತಾಯಿ, ರೋಮಾಂಚನ ಅಂತ ಹೇಳುತ್ತಿದ್ದರು. ಈಗ ಬಿಜೆಪಿಗೆ ಮಾರಾಟವಾಗಿದ್ದಾರೆ ಎಂದು ಆರೋಪಿಸಿದರು. ವಯಸ್ಸಾದ ಮೇಲೆ ಬಿಜೆಪಿಗೆ ಸೇರಿ ಯಡಿಯೂರಪ್ಪ ಜತೆ ಸೇರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.