Poisonous Snake: ಸನಾತನ ಧರ್ಮದ ಬಳಿಕ ಉದಯನಿಧಿ ಸ್ಟಾಲಿನ್ ಮತ್ತೊಂದು ವಿವಾದಾತ್ಮಕ ಹೇಳಿಕೆ
ಬಿಜೆಪಿಯನ್ನು ವಿಷಕಾರಿ ಹಾವಿಗೆ ಹೋಲಿಸಿದ ಸ್ಟಾಲಿನ್
Team Udayavani, Sep 11, 2023, 2:29 PM IST
ತೆಲಂಗಾಣ: ಇತ್ತೀಚಿಗೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿದ್ದ ತಮಿಳುನಾಡು ಕ್ರೀಡಾ ಹಾಗೂ ಯುವಜನ ವ್ಯವಹಾರಗಳ ಸಚಿವ ಉದಯನಿಧಿ ಸ್ಟಾಲಿನ್ ಈಗ ಮತ್ತೊಂದು ವಿವಾದದಲ್ಲಿ ಸುದ್ದಿಯಲ್ಲಿದ್ದಾರೆ.
ಈಗಾಗಲೇ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂಬ ವಿಚಾರದಲ್ಲಿ ಸಾಕಷ್ಟು ಜನರಿಂದ ಛಿಮಾರಿ ಹಾಕಿಸಿಕೊಂಡಿರುವ ಸ್ಟಾಲಿನ್ ಇದೀಗ ಬಿಜೆಪಿಯನ್ನು ವಿಷಕಾರಿ ಹಾವಿಗೆ ಹೋಲಿಸಿ ಸುದ್ದಿಯಲ್ಲಿದ್ದಾರೆ.
ಲೋಕಸಭೆ ಸಂಸದ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ ರಾಜಾ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಹಾವಿಗೆ ಹೋಲಿಸಿದ ಕೆಲವು ದಿನಗಳ ನಂತರ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಬಂದಿವೆ.
ತಮಿಳುನಾಡಿನ ನೇವೇಲಿಯಲ್ಲಿ ಭಾನುವಾರ ನಡೆದ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಪ್ರತಿಪಕ್ಷವಾದ ಎಐಎಡಿಎಂಕೆ ವಿರುದ್ಧ ವ್ಯಂಗ್ಯವಾಡಿದ್ದು ಅದನ್ನು ‘ಹಾವುಗಳಿಗೆ ಆಶ್ರಯ ನೀಡುವ ತಾಣ’ ಎಂದು ಬಣ್ಣಿಸಿದರು.
ನಿಮ್ಮ ಮನೆಗೆ ಹಾವು ಬಂದರೆ ಏನು ಮಾಡುತ್ತೀರಿ ಅದನ್ನು ಮನೆಯ ಹತ್ತಿರದ ಕಾಡಿಗೆ ಬಿಡುತ್ತೀರಿ ಆದರೆ ಕೆಲ ದಿನಗಳ ಬಳಿಕ ಮತ್ತೆ ಆ ಹಾವು ನಿಮ್ಮ ಮನೆಗೆ ಬರುತ್ತದೆ ಹಾಗಾಗಿ ಮನೆಯ ಬಳಿ ಹಾವುಗಳಿಗೆ ಆಶ್ರಯ ನೀಡುವ ಪೊದೆಗಳನ್ನು ತೆಗೆದರೆ ಮಾತ್ರ ಹಾವುಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಎಐಎಡಿಎಂಕೆ ಯನ್ನು ಅಣಕಿಸಿದ್ದಾರೆ.
ಇದನ್ನೂ ಓದಿ: Viral Photo: ಬಾಂಗ್ಲಾ ಪ್ರಧಾನಿ ಜೊತೆ ಬ್ರಿಟನ್ ಪ್ರಧಾನಿ ನಡೆಗೆ ವ್ಯಾಪಕ ಶ್ಲಾಘನೆ