ದಿಲ್ಲಿ ಅಂಗಳಕ್ಕೆ ಜಿಂದಾಲ್ ಜಗಳ : ಬೊಮ್ಮಾಯಿ, ವಿಜಯೇಂದ್ರರಿಂದ ಅಮಿತ್ ಶಾ ಭೇಟಿ
Team Udayavani, May 9, 2021, 7:10 AM IST
ಬೆಂಗಳೂರು: ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಜಮೀನು ನೀಡಿರುವ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದು, ಈಗ ದಿಲ್ಲಿ ವರಿಷ್ಠರ ಅಂಗಳ ತಲುಪಿದೆ. ಗೊಂದಲ ನಿವಾರಣೆಗಾಗಿ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.
ಜಿಂದಾಲ್ಗೆ ಜಮೀನು ನೀಡುವ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ವನ್ನು ಸ್ವಪಕ್ಷೀಯ ಶಾಸಕರೇ ವಿರೋಧಿಸಿದ್ದು, ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದಾರೆ. ಹೀಗಾಗಿ ಅಮಿತ್ ಶಾ ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಸಿಎಂ ಪರವಾಗಿ ಬೊಮ್ಮಾಯಿ ಮತ್ತು ವಿಜಯೇಂದ್ರ ಅವರನ್ನು ಕರೆಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ತಡರಾತ್ರಿ ಅವರು ಅಮಿತ್ ಶಾರನ್ನು ಭೇಟಿ ಮಾಡಿ ಸಚಿವ ಸಂಪುಟ ತೀರ್ಮಾನದ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಪ್ರಸಕ್ತ ಪರಿಸ್ಥಿತಿ ವಿವರಣೆ
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಸಾಧನೆಯ ಬಗ್ಗೆ ರಾಜ್ಯದ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆಯೂ ವರಿಷ್ಠರಿಗೆ ಸಿಎಂ ಪರವಾಗಿ ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ಪರಿಸ್ಥಿತಿ ಮನವರಿಕೆ
ಚಾಮರಾಜನಗರದಲ್ಲಿ ರೋಗಿಗಳ ಸಾವು, ಬೆಂಗಳೂರಿನ ಬೆಡ್ ಬ್ಲಾಕಿಂಗ್ ಪ್ರಕರಣಗಳ ಬಗ್ಗೆಯೂ ಅಮಿತ್ ಶಾಗೆ ವಿವರಣೆ ನೀಡಿದ್ದಾರೆ.
ಇದೇವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಲು ಈಗ ಸೂಕ್ತ ಸಮಯ ಎಂದು ಸಚಿವ ಸಿ.ಪಿ. ಯೋಗೇಶ್ವರ್ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.