ನಾವು ಅನರ್ಹರಲ್ಲ, ಜನತಾ ನ್ಯಾಯಾಲಯದಲ್ಲಿ ತೇರ್ಗಡೆಯಾಗಿ ಸಚಿವರಾಗಿದ್ದೇವೆ: ಬಿ.ಸಿ.ಪಾಟೀಲ್
Team Udayavani, Feb 13, 2020, 8:11 PM IST
ಬೆಂಗಳೂರು: ನಾವು ಅನರ್ಹರಲ್ಲ, ಜನತಾ ನ್ಯಾಯಾಲಯದಲ್ಲಿ ತೇರ್ಗಡೆಯಾಗಿ ಸಚಿವರಾಗಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನೀವೆಲ್ಲ ಅರ್ನಹರು, ಚುನಾವಣೆಯಲ್ಲಿ ಗೆದ್ದು ಸರಕಾರದಲ್ಲಿ ಸಚಿವರಾಗಬಹುದು ಎಂದು ತಿಳಿಸಿತ್ತು. ಅದರಂತೆ ನಾವೆಲ್ಲ ಚುನಾವಣೆಯಲ್ಲಿ ಗೆದ್ದಿದ್ದೇವೆ. ಈಗೇಕೆ ನಾವು ಅನರ್ಹರು ಆಗುತ್ತೇವೆ? ಚುನಾವಣೆಯಲ್ಲಿ ಗೆದ್ದರೂ ಕೂಡ ಸಿದ್ದರಾಮಯ್ಯ ನಮ್ಮನ್ನು ಅನರ್ಹರು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾವು ಜನತಾ ನ್ಯಾಯಾಲಯದಲ್ಲಿ ತೇರ್ಗಡೆಯಾಗಿದ್ದೇವೆ. ಸಿದ್ದರಾಮಯ್ಯ ಅವರು ಪಕ್ಷ ತೊರೆದು ಇನ್ನೊಂದು ಪಕ್ಷಕ್ಕೆ ಹೋಗಿ ಉಪ ಚುನಾವಣೆಯಲ್ಲಿ 254 ಮತಗಳಿಂದ ಗೆದ್ದಿದ್ದರು. ನಾನು 2018ರ ವಿಧಾನಸಭಾ ಚುನಾವಣೆಯಲ್ಲಿ 555 ಮತಗಳ ಅಂತರದಲ್ಲಿ ಶಾಸಕನಾಗಿದ್ದೆ. ಉಪ ಚುನಾವಣೆಯಲ್ಲಿ 29,067 ಮತಗಳ ಅಂತರದಲ್ಲಿ ಗೆದ್ದಿದ್ದೇನೆ. ನಾನು ತೆಗೆದುಕೊಂಡ ತೀರ್ಮಾನವನ್ನು ಜನರೇ ಒಪ್ಪಿದ್ದಾರೆ. ಅನರ್ಹರು ಎಂದು ಹೇಳುವುದಕ್ಕೆ ಸಿದ್ದರಾಮಯ್ಯ ಅವರಿಗೆ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.