ಜೈಲಿನಿಂದ ಹೊರಬಂದವರು ವೈದ್ಯರ ಕಾರು ಕಳವಿಗೆ ಯತ್ನಿಸಿ ಮತ್ತೆ ಜೈಲು ಸೇರಿದರು..
Team Udayavani, Mar 4, 2022, 12:06 PM IST
ಬೆಂಗಳೂರು: ಕಾರು ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಇತ್ತೀಚೆಗೆ ವೈದ್ಯರೊಬ್ಬರ ಮನೆಯಲ್ಲಿ ಕಾರು ಕಳವು ಮಾಡಲು ಯತ್ನಿಸಿದಾಗ ಸ್ಥಳೀಯ ಸಾರ್ವಜನಿಕರೇ ಇಬ್ಬರು ಕಳ್ಳರನ್ನು ಹಿಡಿದು ಹಿಗ್ಗಾಮಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಜಯನಗರ ನಿವಾಸಿ, ರೌಡಿಶೀಟರ್ ಸಲ್ಮಾನ್ ಹಾಗೂ ಆತನ ಸಹಚರ ನವಾಜ್ ಬಂಧಿತರು. ಕೆಲ ದಿನಗಳ ಹಿಂದೆ ಸದಾಶಿವನಗರದ 8ನೇ ಮುಖ್ಯ ರಸ್ತೆಯಲ್ಲಿರುವ ವೈದ್ಯ ಮುನಿರಾಜ್ ಎಂಬವರ ಮನೆಯ ನೆಲಮಹಡಿಯಲ್ಲಿ ನಿಲ್ಲಿಸಿದ್ದ ಕಾರನ್ನು ಕಳವು ಮಾಡಲು ಬಂದಿದ್ದರು. ನಂತರ ಕಾರಿನ ಗಾಜು ಒಡೆದಿದ್ದಾರೆ. ಗಾಜು ಒಡೆದ ಶಬ್ಧ ಕೇಳಿ ಹೊರಬಂದ ಮುನಿರಾಜು ಅವರು ಹೊರಗಡೆ ಬಂದಿದ್ದು, ಕಳ್ಳರನ್ನು ಕಂಡು ಜೋರಾಗಿ ಕೂಗಿ ಕೊಂಡಿದ್ದಾರೆ. ಗಾಬರಿಗೊಂಡ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿ ಕಾಂಪೌಂಡ್ ನೆಗೆದಿದ್ದು, ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸಾರ್ವಜನಿಕರು ಇಬ್ಬರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಸದಾಶಿವಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
21 ದಿನಗಳ ಹಿಂದಷ್ಟೇ ಬಿಡುಗಡೆ: ಇಬ್ಬರು ಬಂಧಿತರು ಕೆಲ ತಿಂಗಳ ಹಿಂದಷ್ಟೇ ಕಾರು ಕಳವು ಪ್ರಕರಣದಲ್ಲಿ ಜೈಲು ಸೇರಿದ್ದರು. 21 ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಇದೀಗ ಮತ್ತೆ ಕಾರು ಕಳವು ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಹೇಳಿದರು. ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : 100 ಟೆಸ್ಟ್ ಆಡಿದ್ದು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ : ಕೊಹ್ಲಿ