“ಆದಾಯ ಮಾರ್ಗ’ ಕಂಡುಕೊಂಡ ಬಿಎಸ್ವೈ
Team Udayavani, Mar 7, 2020, 6:15 AM IST
ಬೆಂಗಳೂರು: ಆರ್ಥಿಕ ಸಂಕಷ್ಟದ ಸವಾಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಲಾಖಾವಾರು ಬಿಟ್ಟು ವಲಯವಾರು ಆಯವ್ಯಯ ಮಂಡಿಸುವ ಮೂಲಕ ಇಲಾಖಾವಾರು “ಹೊರೆ’ ಕಡಿಮೆ ಮಾಡಿಕೊಂಡಿದ್ದಾರೆ. ಅಲ್ಲದೆ, ತೈಲ ಹಾಗೂ ಮದ್ಯದ ಮೇಲಿನ ತೆರಿಗೆ ಹೆಚ್ಚಳದಿಂದ ಐದು ಸಾವಿರ ಕೋಟಿ ರೂ.ಆದಾಯಕ್ಕೆ ಮಾರ್ಗ ಕಂಡುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಸರ್ಕಾರದಿಂದ 52,918 ಕೋಟಿ ರೂ.ಸಾಲದ ಪ್ರಸ್ತಾಪ ಮಾಡುವುದರ ಜತೆಗೆ ನಿಗಮ -ಮಂಡಳಿಗಳ ಮೂಲಕ 22,378 ಕೋಟಿ ರೂ. ಸಾಲ ಪಡೆಯುವ ಅವಕಾಶ ಕಲ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮೊದಲು ನಿಗಮ-ಮಂಡಳಿಗಳು ಪಡೆಯುವ ಸಾಲಕ್ಕೆ ಸರ್ಕಾರ ಖಾತರಿ ನೀಡುತ್ತಿತ್ತು. ಆ ಸಾಲದ ಮರುಪಾವತಿಯನ್ನು ನಿಗಮಗಳೇ ಮಾಡುತ್ತಿದ್ದವು. ಆದರೆ, ಅದು ಬಜೆಟ್ಗೆ ಸೇರ್ಪಡೆಯಾಗುತ್ತಿರಲಿಲ್ಲ.
ಆದರೆ, ಇದೀಗ ಬಜೆಟ್ನಲ್ಲೇ ನಿಗಮ-ಮಂಡಳಿ ಮೂಲಕ 23,378 ಕೋಟಿ ರೂ.ಸಾಲ ಪಡೆಯುವ ಪ್ರಸ್ತಾವನೆ ಮಾಡಿ, ಬಜೆಟ್ ವ್ಯಾಪ್ತಿಗೆ ತರಲಾಗಿದೆ. ನಿಗಮ-ಮಂಡಳಿಗಳ ಮೂಲಕ ಪಡೆಯುವ ಹಣ ಸಂಬಂಧಪಟ್ಟ ಇಲಾಖೆಗಳ ಯೋಜನೆಗಳಿಗೂ ಬಳಕೆ ಮಾಡಬಹುದು. ಇದರಿಂದ ಸರ್ಕಾರ ಆರ್ಥಿಕ ಸಂಕಷ್ಟದಿಂದ ಪಾರಾಗುವುದು ಸುಲಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ದಿಂದ 2,500 ಕೋಟಿ ರೂ., ಅಬಕಾರಿ ಬಾಬಿ¤ನಿಂದ 2,150 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹಿಸಬಹುದು. ಎರಡೂ ಬಾಬ್ತುಗಳಿಂದ ಮಾರಾಟದ ಪ್ರಮಾಣದ ಮೇಲೆ ಆದಾಯವೂ ಹೆಚ್ಚುವು ದ ರಿಂದ ಸುಮಾರು ಐದು ಸಾವಿರ ಕೋಟಿ ರೂ.ವರೆಗೂ ಆದಾಯ ಸಂಗ್ರಹವಾಗ ಬಹುದು ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯದಷ್ಟೇ 1,339 ಕೋಟಿ ರೂ.ಅಲ್ಲದೆ, ಸಮಾಜ ಕಲ್ಯಾಣ, ಇಂಧನ, ವಸತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೂ 5, 569 ಕೋಟಿ ರೂ.ವರೆಗೆ ಅನುದಾನ ಹಂಚಿಕೆ ಕಡಿತ ಮಾಡಲಾಗಿದೆ. ಇದರಿಂದಲೇ ಸಮತೋಲಿತ ಬಜೆಟ್ ಮಂಡಿಸಲು ಸಾಧ್ಯವಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಲಹೆಗೆ ಮೊರೆ: ಬಜೆಟ್ ಗಾತ್ರ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಕೈ ಚೆಲ್ಲಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು, ಬಜೆಟ್ಗೆ ಮುನ್ನ ಅನುಭವಿಗಳು, ಆರ್ಥಿಕ ತಜ್ಞರು, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಹಣಕಾಸು ಇಲಾಖೆಯ ನಿವೃತ್ತ ಅಧಿಕಾರಿಗಳಿಂದ ಸಲಹೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಇಲಾಖಾವಾರು ಬಜೆಟ್ ಮಂಡಿಸಿದರೆ ಹಿಂದಿನ ಬಜೆಟ್ಗಿಂತ ಕನಿಷ್ಠ 5 ರಿಂದ 10ರಷ್ಟು ಬಜೆಟ್ ಗಾತ್ರ ಹೆಚ್ಚಿಸಬೇಕು. ಇಲಾಖೆಗಳಿಗೆ ನಿಗದಿ ಮಾಡುವ ಮೊತ್ತವೂ ಜಾಸ್ತಿ ಆಗಬೇಕು. ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಆದರೆ, ವಲಯವಾರು ಬಜೆಟ್ ಮಂಡಿಸಿದರೆ ಸಹಜವಾಗಿ ಆಯಾ ವಲಯಕ್ಕೆ ನಿಗದಿಯಾಗುವ ಮೊತ್ತ ದೊಡ್ಡದಾಗುತ್ತದೆ.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿಯೂ ಇಲಾಖಾವಾರು ಅನುದಾನದ ಅಂಕಿ-ಸಂಖ್ಯೆ ಮೇಲೆ ಯೇ ಪ್ರತಿಪಕ್ಷಗಳ ಸದಸ್ಯರು ಚರ್ಚೆ ಮಾಡಿ, ಕಡಿಮೆ ಅನುದಾನ ಇದ್ದರೆ ಮುಗಿ ಬೀಳಬಹುದು. ವಲಯ ವಾರು ಮೊತ್ತ ನಿಗದಿ ಮೇಲೆ ಮಾತನಾಡು ವಾಗ ಯೋಜನೆ ಗಳಿಗೆ ಮೀಸಲಿಡುವ ಮೊತ್ತ ಕೇಳಿದರೂ ಅದರಲ್ಲೇ ಹಂಚಿಕೆ ಮಾಡಲಾಗುವುದು ಎಂಬ ಸಮ ರ್ಥನೆ ನೀಡಬಹುದು ಎಂಬ ಉದ್ದೇಶವಿದೆ ಎನ್ನಲಾಗಿದೆ.
ಕೇಂದ್ರದ ತೆರಿಗೆಯ ಪಾಲಿನ ಕಡಿತ ಸೇರಿದಂತೆ ರಾಜ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಬಜೆಟ್ನಲ್ಲಿ ಲಿಖೀತ ರೂಪದಲ್ಲೇ ತಿಳಿಸಿ, ಅದರಿಂದ ಯಾವುದನ್ನೂ ಮುಚ್ಚಿಟ್ಟುಕೊಂಡಿಲ್ಲ ಎಂಬ ಸಂದೇಶ ವನ್ನೂ ರವಾನೆ ಮಾಡಬಹುದು. ಇದರಿಂದಾಗಿ “ನಿಮ್ಮ ಮೇಲೆ ವೈಯಕ್ತಿಕ ಟೀಕಾಪ್ರಹಾರ ಕಡಿಮೆಯಾಗುತ್ತದೆ’ ಎಂಬ ಅಭಿಪ್ರಾಯವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದರು.
ಇದಾದ ನಂತರವೇ ಯಡಿಯೂರಪ್ಪ ಅವರು ಇಲಾಖಾವಾರು ಬಿಟ್ಟು, ವಲಯವಾರು ಬಜೆಟ್ ಮಂಡನೆಗೆ ನಿರ್ಧಾರ ಮಾಡಿದರು ಎಂದು ಹೇಳಲಾಗಿದೆ. ವಲಯವಾರು ಬಜೆಟ್ ಕುರಿತು ಹಣಕಾಸು ಇಲಾಖೆಯ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದಾಗಲೂ ವಲಯವಾರು ಬಜೆಟ್ ಮಂಡನೆಯಿಂದ ಸಮಸ್ಯೆ ಯಾಗದು ಎಂದು ಅಭಿಪ್ರಾಯ ಬಂದಿತ್ತು. ಹೀಗಾಗಿ, 3,741 ಕೋಟಿ ರೂ.ಮಾತ್ರ ಬಜೆಟ್ ಮೊತ್ತ ಹೆಚ್ಚಿಸಿ ಬಜೆಟ್ ಮಂಡಿಸಲಾಯಿತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಯಾವ ಇಲಾಖೆಗಳಿಗೆ ಎಷ್ಟೆಷ್ಟು ಅನುದಾನ?: ಬಜೆಟ್ನಲ್ಲಿ ತಿಳಿಸಿರುವಂತೆಯೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 1,339 ಕೋಟಿ ರೂ.ಕಡಿತ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ 2019-20ರಲ್ಲಿ 11,331 ಸಾವಿರ ಕೋಟಿ ರೂ.ಇಡಲಾಗಿತ್ತು, ಈ ಬಜೆಟ್ನಲ್ಲಿ 9,444 ಕೋಟಿ ರೂ.ಇಡಲಾಗಿದೆ.
ವಸತಿ ಇಲಾಖೆಗೆ ಕಳೆದ ಬಜೆಟ್ನಲ್ಲಿ 2,990 ಕೋಟಿ ರೂ.ಇಡಲಾಗಿತ್ತು, ಈ ಬಾರಿ 2,971 ಕೋಟಿ ರೂ.ಇಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳೆದ ಬಜೆಟ್ನಲ್ಲಿ 5,251 ಕೋಟಿ ರೂ.ಇಡಲಾಗಿತ್ತು, ಈ ಬಜೆಟ್ನಲ್ಲಿ 4,650 ರೂ.ಇಡಲಾಗಿದೆ. ಇಂಧನ ಇಲಾಖೆಗೆ ಕಳೆದ ಬಜೆಟ್ನಲ್ಲಿ 18,277 ಕೋಟಿ ರೂ.ಇಡಲಾಗಿತ್ತು, ಈ ಬಜೆಟ್ನಲ್ಲಿ 17,290 ಕೋಟಿ ರೂ.ಇಡಲಾಗಿದೆ.
* ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್