ಪ್ರತಿಯೊಬ್ಬ ಕನ್ನಡಿಗರು ಕೂ ಆ್ಯಪ್ ಬಳಸುವ ಮೂಲಕ ಕನ್ನಡವನ್ನು ಬೆಳೆಸಲಿ : ಬಿಎಸ್ ವೈ
Team Udayavani, Nov 1, 2020, 7:47 PM IST
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಸ್ಥಾನವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೂ ಆ್ಯಪ್ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಇಂಥ ಪ್ರಯತ್ನ ಹೆಚ್ಚಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಕೂ ಆ್ಯಪ್ ವತಿಯಿಂದ ವರ್ಚುವಲ್ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಭಾನುವಾರ ಸಾಂಕೇತಿಕವಾಗಿ ಉದ್ಘಾಟಿಸಿ ಬಳಿಕ ಮಾತನಾಡಿದರು.
ಟ್ವಿಟರ್ ಮಾದರಿಯಲ್ಲಿ ಕೂ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಕನ್ನಡದಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಈ ಆ್ಯಪ್ ಅನ್ನು ತಯಾರಿಸಿದ್ದಾರೆ. ಕನ್ನಡದವರೇ ಆದ ಅಪ್ರಮೇಯ ಅವರು ಈ ಪ್ರಯತ್ನ ನಡೆಸಿರುವುದು ಹೆಮ್ಮೆಯ ವಿಚಾರ. ಅಷ್ಟೆ ಅಲ್ಲದೆ, ಇತ್ತೀಚಿಗೆ ಪ್ರಧಾನಿ ಅವರು, ದೇಶಾದ್ಯಂತ ಆತ್ಮ ನಿರ್ಭಾರ್ ಸ್ಪರ್ಧೆ ಆಯೋಜಿಸಿದ್ದರು. ಇದರಲ್ಲಿ ‘ಕೂ ಆ್ಯಪ್’ ಮೊದಲ ಸ್ಥಾನ ಪಡೆದುಕೊಂಡಿರುವುದು ರಾಜ್ಯದ ಕೀರ್ತಿ ಹೆಚ್ಚಿಸಿದಂತಾಗಿದೆ ಎಂದರು.
ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳ : ಸಚಿವ ಸುರೇಶ್ ಕುಮಾರ್
ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ಅನಿವಾರ್ಯತೆ ಎಂದು ಇದೇ ವೇಳೆ ಹೇಳಿದರು. ಕೂ ಆ್ಯಪ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಪ್ರತಿಯೊಬ್ಬ ಕನ್ನಡಿಗರು ಈ ಆ್ಯಪ್ ಬಳಸುವ ಮೂಲಕ ಕನ್ನಡವನ್ನು ಬೆಳೆಸಲಿ ಎಂದು ಶುಭ ಕೋರಿದರು.
ಕೂ ಆ್ಯಪ್ನ ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಕೂ ಆ್ಯಪ್ನನ್ನು ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಎಲ್ಲಾ ಕ್ಷೇತ್ರದ ಜನರು ಸಹ ಈ ಆ್ಯಪ್ನಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಾಸ್ಯನಟ ಪ್ರಾಣೇಶ್, ನಟಿ ನೀತು ಶೆಟ್ಟಿ,ನಟ ನವೀನ್ ಕೃಷ್ಣ ಪಾಲ್ಗೊಂಡರು.