ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ
Team Udayavani, Jan 25, 2021, 7:19 PM IST
ನವದೆಹಲಿ: ದೇಶದಲ್ಲಿ ವಿತರಿಸಲಾಗುತ್ತಿರುವ ಕೊರೊನಾ ಲಸಿಕೆಗಳ ಕುರಿತು ವದಂತಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ. ಲಸಿಕೆಯ ಪರಿಣಾಮಕಾರಿತ್ವದ ಕುರಿತು ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳು ಸುರಕ್ಷಿತವಾಗಿವೆ. ಆದರೂ ಸಾಮಾಜಿಕ ಜಾಲತಾಣಗಳು ಸೇರಿದಂತೆ ಹಲವು ವೇದಿಕೆಗಳಲ್ಲಿ ಲಸಿಕೆಗಳ ಕುರಿತು ತಪ್ಪು ಮಾಹಿತಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ರವಾನಿಸುತ್ತಿವೆ. ಇಂಥ ವದಂತಿಗಳು ಜನರಿಗೆ ಲಸಿಕೆ ಕುರಿತು ಅನುಮಾನ ಮೂಡುವಂತೆ ಮಾಡುತ್ತವೆ. ಹೀಗಾಗಿ ಇಂಥ ಮಾಹಿತಿಗಳು ಹಬ್ಬದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಶಿಕ್ಷೆಯನ್ನೂ ನೀಡಬೇಕು ಎಂದು ರಾಜ್ಯಗಳು ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪತ್ರ ಬರೆದಿದ್ದಾರೆ. ಈ ನಡುವೆ, ಕಳೆದ 8 ತಿಂಗಳಲ್ಲೇ ದೇಶದಲ್ಲಿ ದೈನಂದಿನ ಕೊರೊನಾ ಸೋಂಕಿತರ ಸಾವು ಪ್ರಕರಣ ಕನಿಷ್ಠ ಮಟ್ಟಕ್ಕಿಳಿದಿದೆ. ಭಾನುವಾರದಿಂದ ಸೋಮವಾರಕ್ಕೆ 24 ಗಂಟೆಗಳಲ್ಲಿ 131 ಮಂದಿ ಮೃತ ಪಟ್ಟಿದ್ದು, 13,203 ಮಂದಿಗೆ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ:ರೈತರ ಹೋರಾಟದಲ್ಲಿ ಕೆಲವು ಪಕ್ಷಗಳು ರಾಜಕೀಯ ಬೇಳೆ ಬೇಯಿಸಲು ಪ್ರಯತ್ನಿಸುತ್ತಿವೆ : HDK