ರಾಶಿ, ರಾಶಿ ದಾಖಲೆ ಸಲ್ಲಿಕೆ-ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ
Team Udayavani, Sep 19, 2019, 5:16 PM IST
ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ವಿಶೇಷ ಕೋರ್ಟ್ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಾದ, ಪ್ರತಿವಾದ ಆಲಿಸಿದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಶನಿವಾರಕ್ಕೆ ಮುಂದೂಡಿದೆ. ಇದರಿಂದಾಗಿ ಡಿಕೆ ಶಿವಕುಮಾರ್ ಗೆ ತಿಹಾರ್ ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ.
ರಕ್ತದೊತ್ತಡ ಸಹಜ ಸ್ಥಿತಿಗೆ ಬಂದ ಕುರಿತು ಆರ್ ಎಂಎಲ್ ವೈದ್ಯರು ವರದಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪೊಲೀಸರು ಡಿಕೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಿದ್ದರು.
ಬುಧವಾರ ಜಾರಿ ನಿರ್ದೇಶನಾಲಯದ ಪರ ವಕೀಲರಾದ ಕೆಎಂ ನಟರಾಜ್ ಅವರು ಗೈರು ಹಾಜರಾಗಿದ್ದರಿಂದ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರು.
ಬ್ರಹ್ಮಾಂಡ ಭ್ರಷ್ಟಾಚಾರದ ತುಣುಕು ಇದು; ಇ.ಡಿ. ಪರ ಎಎಸ್ ಜಿ ನಟರಾಜ್ ವಾದ:
ಬ್ರಹ್ಮಾಂಡ ಭ್ರಷ್ಟಾಚಾರದ ಒಂದು ತುಣುಕನ್ನು ನಿಮ್ಮ ಮುಂದಿಟ್ಟಿದ್ದೇನೆ. ಅಕ್ರಮದ ಎಲ್ಲಾ ದಾಖಲೆಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಎಎಸ್ ಜಿ ನಟರಾಜ್ ವಾದ. ತನಿಖೆಯ ಎಲ್ಲಾ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಹವಾಲಾ ಹೇಗೆ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಸ್ತಿದ್ದೇವೆ ಎಂದು ಇ.ಡಿ.ಪರ ಕೆಂಎ ನಟರಾಜ್ ವಾದಿಸಿದರು.
ಡಿಕೆಶಿಯ 4 ಬ್ಯಾಂಕ್ ಖಾತೆಗಳ ಬಗ್ಗೆ ಇನ್ನೂ ತನಿಖೆ ನಡೆಸಬೇಕಾಗಿದೆ. ಸಾಲ ಕೊಟ್ಟವರು ಯಾರು ಎಂಬುದೇ ಐಶ್ವರ್ಯಾಗೆ ತಿಳಿದಿಲ್ಲ. ಮಗಳ ಹೆಸರಿನಲ್ಲಿ ಡಿಕೆಶಿ 80 ಕೋಟಿ ರೂಪಾಯಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಡಿಕೆಶಿ ಪಿಎಂಎಲ್ ಎ ಅಡಿ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದ್ದಾರೆ. ಅಕ್ರಮ ಹಣದಿಂದ ಗಳಿಸಿದ ಆಸ್ತಿ ಅಪರಾಧದ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ ಎಂದು ವಾದಿಸಿದರು.
ಕೃಷಿ ಭೂಮಿಯ ಆದಾಯ 1.38 ಕೋಟಿ ಎಂದು ಡಿಕೆಶಿ ಘೋಷಿಸಿದ್ದಾರೆ. ಕಳೆದ 20 ವರ್ಷಗಳಿಂದ ಕಟ್ಟಿದ ಆದಾಯ ಒಟ್ಟುಗೂಡಿಸಿದರೂ 870 ಕೋಟಿ ರೂಪಾಯಿ ಆಗುವುದಿಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿಬೇಕು ಎಂದು ನಟರಾಜ್ ಮನವಿ ಮಾಡಿಕೊಂಡರು.
ಡಿಕೆಶಿ ಜಾಮೀನು ನಿರಾಕರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪುಗಳನ್ನು ನಟರಾಜ್ ಉಲ್ಲೇಖಿಸಿದರು.
ದೆಹಲಿ ನಿವಾಸಗಳ ಮೇಲೆ ದಾಳಿ ವೇಳೆ ಸಿಕ್ಕ ಹಣ ಡಿಕೆಶಿಗೆ ಸೇರಿದ್ದು, ನಗದು ಹಣ ಬಳಕೆ ಮತ್ತು ಹಲವು ಆಸ್ತಿ ಖರೀದಿ ಪಿಎಂಎಲ್ ಎ ಕಾಯ್ದೆಯಡಿ ಬರುತ್ತೆ. ಐಟಿ ತನಿಖೆ ವೇಳೆಯೂ ಇದು ತಿಳಿದು ಬಂದಿದೆ. ಈ ವಾದ ಮಂಡನೆ ವೇಳೆ ಜಾಮೀನು ನಿರಾಕರಿಸಿರುವ ಪಿ.ಚಿದಂಬರಂ ಪ್ರಕರಣವನ್ನೂ ನಟರಾಜ್ ಉಲ್ಲೇಖಿಸಿದರು.
ಬಂಡಲ್ ಗಟ್ಟಲೆ ದಾಖಲೆ ಸಲ್ಲಿಕೆ;
ಡಿಕೆ ಶಿವಕುಮಾರ್ ನೋಟು ಬ್ಯಾನ್ ಸಂದರ್ಭದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವಿವರಿಸಿದ ನಟರಾಜ್ ಕೋರ್ಟ್ ಗೆ ಬಂಡಲ್ ಗಟ್ಟಲೆ ದಾಖಲೆಯನ್ನು ಸಲ್ಲಿಸಿದರು. ಅಗತ್ಯಬಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಎಂದು ಕೋರ್ಟ್ ಗೆ ಮನವಿ ಮಾಡಿಕೊಂಡರು. ಐಟಿ ಕಾಯ್ದೆ ಉಲ್ಲಂಘಿಸಿ ಜಾಮೀನು ಕೊಡಿ ಎಂದು ಹೇಳುತ್ತಾರೆ. ಆದರೆ ಡಿಕೆಶಿ ವಕೀಲರ ವಾದಕ್ಕೂ ಪಿಎಂಎಲ್ ಎ ಸೆಕ್ಷನ್ 45ಕ್ಕೂ ಸಂಬಂಧವಿಲ್ಲ ಎಂದು ನಟರಾಜ್ ಪ್ರಬಲವಾಗಿ ವಾದ ಮಂಡಿಸಿದ್ದರು.