ಮೂಡುಬಿದಿರೆ: ಹೆಣ್ಣಿನ ಸ್ವರದಲ್ಲಿ ಕರೆ ಮಾಡಿ ಹಣ ಪೀಕಿಸಿ ಪೊಲೀಸರ ಅತಿಥಿಯಾದ
Team Udayavani, Feb 25, 2023, 6:50 AM IST
ಮೂಡುಬಿದಿರೆ: ಹೆಣ್ಣಿನ ಸ್ವರದಲ್ಲಿ ವ್ಯಕ್ತಿಗೆ ಕರೆ ಮಾಡಿ ಹಣ ಪೀಕಿಸಿದ ವ್ಯಕ್ತಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿ ಹೊಸಬೆಟ್ಟು ನಿವಾಸಿ ನವೀನ್ಚಂದ್ರ ಅವರಿಗೆ “ಉಷಾ’ ಎನ್ನುವ ಹೆಸರಿನಲ್ಲಿ ಪರಿಚಯಿಸಿಕೊಂಡು ಹೆಣ್ಣಿನ ಸ್ವರದಲ್ಲಿ ಕರೆ, ವೀಡಿಯೋ ಕಾಲ್ ಮಾಡಿ, ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್ವೆುàಲ್ ಮಾಡಿದ ಆರೋಪದಲ್ಲಿ ಮೂಡುಬಿದಿರೆ ಸಮೀಪದ ಬಿರಾವು ಧನಂಜಯ ಪೊಲೀಸರ ವಶವಾಗಿದ್ದಾನೆ.
ಬಿರಾವು ಧನಂಜಯ, 25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಕಂಗಾಲಾದ ನವೀನ್ಚಂದ್ರ ಅವರು ಒಮ್ಮೆ 2 ಸಾವಿರ ಗೂಗಲ್ ಪೇ ಮಾಡಿದ್ದರು. ಬಳಿಕವೂ ಪದೇಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಕೊನೆಗೆ ನವೀನ್ಚಂದ್ರ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದರು. ಸುರತ್ಕಲ್ ಪೊಲೀಸರು ಉಷಾ ಹೆಸರಿನ ಧನಂಜಯನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.