Part time job ವಂಚನೆ ಆರೋಪಿ ರಾಜಸ್ಥಾನದಲ್ಲಿ ವಶಕ್ಕೆ
Team Udayavani, Mar 25, 2024, 12:21 AM IST
ಮಂಗಳೂರು: ಪಾರ್ಟ್ ಟೈಮ್ ಜಾಬ್ ಇರುವುದಾಗಿ ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸಿ ಲಿಂಕ್ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್ ಮಾಡುವ ಹಣ ಮಾಡಬಹುದು ಎಂದು ನಂಬಿಸಿ ಒಟ್ಟು 1,15,000 ರೂ. ವರ್ಗಾಯಿಸಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಠಾಣೆಯ ಪೊಲೀಸರು ರಾಜಸ್ಥಾನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಜೋಧಪುರ ಜಿಲ್ಲೆಯ ಮುಸಲ್ಮಾನ್ ಕಾ ಬಾವುರಿ ರಾಮ್ ದೇವ್ ಮಂದಿರ ಹತ್ತಿರ ಬಾವುರಿ ಗ್ರಾಮದ ಸದ್ದಾಂ ಗೌರಿ ಯಾನೆ ಬಾವುರಿ (30) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್, 8 ಡೆಬಿಟ್ ಕಾರ್ಡ್, 4 ಬ್ಯಾಂಕ್ ಚೆಕ್ ಬುಕ್ ಗಳು, ಆಧಾರ್ಕಾರ್ಡ್, ಪಾನ್ ಕಾರ್ಡ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹಾಗೂ ಡಿಸಿಪಿ ಸಿದ್ದಾರ್ಥ ಗೋಯಲ್ ಮಾರ್ಗದರ್ಶನದಂತೆ ಸಿಸಿಆರ್ಬಿ ಘಟಕದ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ಯಾಮಸುಂದರ್ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.